ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಮಾತನಾಡಿ, ಭಾರತೀಯ ಪುರಾತನ ಜ್ಞಾನ ಪದ್ಧತಿ ಇಂದಿನ ಎಲ್ಲ ಆಧುನಿಕ ವಿಜ್ಞಾನ ಪದ್ಧತಿಗೆ ಮೂಲ ತಳಹದಿಯಾಗಿದೆ. ಇಂತಹ ವಿಚಾರ ಸಂಕಿರಣಗಳಿಂದ ಇಂದಿನ ಯುವ ಜನತೆಗೆ ವಿಜ್ಞಾನಕ್ಕೆ ನಮ್ಮ ದೇಶದ ಕೊಡುಗೆಗಳ ಕುರಿತು ಹೆಚ್ಚಿನ ಅನುಭವ ಪಡೆಯಲು ಸಹಕಾರಿಯಾಗುವುದು. ನಮ್ಮ ದೇಶದ ಅಪಾರ ಜ್ಞಾನ ಸಂಪತ್ತಿನ ಬಗ್ಗೆ ಅಧ್ಯಯನ ನಡೆಸಲು ಅನುಕೂಲವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ್ ಹೆಗ್ಡೆ ಮಾತನಾಡಿ, ಅದೆಷ್ಟೋ ವರುಷಗಳ ಹಿಂದೆಯೇ ನಮ್ಮ ದೇಶ ವೈಜ್ಞಾನಿಕವಾಗಿ ಅದೆಷ್ಟು ವಿಚಾರವಂತವಾಗಿತ್ತು ಎಂಬ ಅರಿವಾಗುತ್ತದೆ. ಇಂತ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದರಿಂದ ವಿಚಾರ ಸಂಕಿರಣಗಳ ಮೂಲ ಆಶಯ ಸಾರ್ಥಕವಾಗುತ್ತದೆ ಎಂದರು.ವಿಚಾರ ಸಂಕಿರಣದಲ್ಲಿ ಐಐಟಿ ಖರಗಪುರದ ಡಾ. ಮಹೇಶ್ ಕೆ., ಮುಂಬೈನ ಡಾ.ಆನಂದ ಕೆ. ವಿಚಾರ ಮಂಡಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಚಾರ ಸಂಕಿರಣದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮುಖ್ಯ ಅತಿಥಿಯಾಗಿ ಉಜಿರೆಯ ಖ್ಯಾತ ಜ್ಯೋತಿಷಿ ಡಾ. ಯತೀಶ ಪೊದುವಾಳ್ ಅವರು ಜ್ಯೋತಿಷ್ಯ ಹಾಗೂ ಅದು ವಿಜ್ಞಾನಕ್ಕೆ ಹೇಗೆ ಸಂಬಂಧಿಸಿದೆ,ವೈಜ್ಞಾನಿಕವಾಗಿ ಹೇಗೆ ಜ್ಯೋತಿಷ್ಯ ಶಾಸ್ತ್ರದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಬಿ ಎ. ಕುಮಾರ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಧರ್ ಭಟ್ ಸ್ವಾಗತಿಸಿದರು. ಗಣಿತ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಗಣೇಶ ನಾಯಕ್ ವಂದಿಸಿದರು.