ನೀರಿನ ಸಮಸ್ಯೆ ನೀಗಿಸಲು ಅಗತ್ಯ ಕ್ರಮ

KannadaprabhaNewsNetwork | Published : Apr 8, 2025 12:35 AM

ಸಾರಾಂಶ

Necessary measures to solve water problem

-ಸಚಿವ ದರ್ಶನಾಪೂರ ಭರವಸೆ । ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ಕುಡಿವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ

-----

ಕನ್ನಡಪ್ರಭ ವಾರ್ತೆ ಯಾದಗಿರಿ

ಯಾದಗಿರಿ, ಶಹಾಪುರ ಮತ್ತು ಸುರಪುರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಅವಶ್ಯಕ ಕ್ರಮ ಕೈಗೊಳ್ಳಲಾಗಿದೆ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಶರಣಬಸಪ್ಪ ದರ್ಶನಾಪೂರ ಅವರು ಹೇಳಿದರು.

ಯಾದಗಿರಿ ನಗರಕ್ಕೆ ಭೀಮಾ ನದಿ ಮೂಲದಿಂದ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆ ಅಡಿಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಗೆ ನಗರದ ಕಮಲಾ ನೆಹರು ಉದ್ಯಾನವನದಲ್ಲಿ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಯಾದಗಿರಿ ನಗರಕ್ಕೆ ಕುಡಿಯಲು ಶುದ್ಧ ನೀರು ಪೂರೈಸುವ ಬೇಡಿಕೆ ಹಲವಾರು ವರ್ಷಗಳದ್ದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 53.16 ಕೋಟಿ ರು.ಗಳ ವೆಚ್ಚದಲ್ಲಿ ಭೀಮಾ ನದಿ ಮೂಲದಿಂದ ನೀರು ಸರಬರಾಜು ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದರಿಂದ ನಗರ ವ್ಯಾಪ್ತಿಯ 31 ವಾರ್ಡ್‌ಗಳ ಪ್ರದೇಶಗಳಲ್ಲಿ ನಿರಂತರ ನೀರು ದೊರೆಯಲಿದೆ ಎಂದು ಹೇಳಿದರು.

ಯಾದಗಿರಿ ನಗರಕ್ಕೆ ಕುಡಿಯುವ ನೀರು ಪೂರೈಕೆಗಾಗಿ ಆರು ವಲಯಗಳನ್ನಾಗಿ ಗುರ್ತಿಸಲಾಗಿದೆ. ನೀರಿನ ಒತ್ತಡಕ್ಕೆ ಅನುಗುಣವಾಗಿ ನೂತನ ಪೈಪ್‌ ಲೈನ್‌ ಗಳನ್ನು ಅಳವಡಿಸುವ ಮೂಲಕ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದ್ದು, ಈಗಾಗಲೇ ಭೀಮಾನದಿ ಹತ್ತಿರ ನೀರು ಶುದ್ಧೀಕರಣ ಘಟಕ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಅದರಂತೆ ಇಂದು ಕಮಲಾ ನೆಹರು ಉದ್ಯಾನವನದಲ್ಲಿ 7.50 ಲಕ್ಷ ಲೀಟರ್ ಸಾಮರ್ಥ್ಯದ 15 ಮೀಟರ್ ಎತ್ತರದ ಮೇಲ್ಮಟ್ಟದ ಜಲಸಂಗ್ರಹಗಾರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಸುರಪುರ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಶಹಾಪೂರ ಕುಡಿಯುವ ನೀರು ಸರಬರಾಜು ನೂತನ ಪೈಪ್ ಲೈನ್ ಅಳವಡಿಕೆ ಕಾರ್ಯಕ್ಕೂ ಸರ್ಕಾರ ಅನುಮೋದನೆ ನೀಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಯಾದಗಿರಿ ನಗರದಲ್ಲಿ ವಲಯ ಒಂದು ಕೋಲಿವಾಡದಲ್ಲಿ ಹಾಲಿ ಇರುವ ನೆಲಮಟ್ಟ ಜಲಸಂಗ್ರಹಗಾರದಿಂದ ವಿತರಣಾ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಅದರಂತೆ ವಲಯ ಎರಡರಲ್ಲಿ ಜಲಶುದ್ಧೀಕರಣ ಘಟಕದಲ್ಲಿ ಹಾಲಿ ಇರುವ ಮೇಲ್ಮಟ್ಟ ಜಲಸಂಗ್ರಹಗಾರದಿಂದ ವಿತರಣಾ ಕೊಳವೆ ಮಾರ್ಗ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಶೀಘ್ರ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸಲು ‌ಸೂಚಿಸಲಾಗಿದೆ ಎಂದು ಹೇಳಿದರು.

ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಮಾತನಾಡಿ, ಯಾದಗಿರಿ ನಗರದ ಹಲವಾರು ವರ್ಷಗಳ ಬೇಡಿಕೆಯಾದ ಶುದ್ಧ ನೀರು ಪೂರೈಸುವ ಯೋಜನೆಯ ಕನಸು ನನಸಾಗಲಿದೆ. ಮುಂದಿನ ದಿನಗಳಲ್ಲಿ ಈ ಯೋಜನೆ ಪೂರ್ಣಗೊಂಡ ನಂತರ ವಾರದ ಐದು ದಿನಗಳ ಕಾಲ ನಾಗರಿಕರಿಗೆ ನೀರು ದೊರೆಯಲು ಸಹಕಾರಿಯಾಗಲಿದೆ ಎಂದರು.

ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ನಗರಸಭೆ ಉಪಾಧ್ಯಕ್ಷೆ ರುಖಿಯಾ ಬೇಗಂ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿನಾಯಕ್ ಮಾಲಿಪಾಟೀಲ್, ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ನಗರಸಭೆ ಸದಸ್ಯರಾದ ನಿರ್ಮಲಾ, ಹನುಮಂತ ನಾಯಕ್ ಉಪಸ್ಥಿತರಿದ್ದರು.

ನಗರ ನೀರು ಸರಬರಾಜು ಇಲಾಖೆಯ ಅಧಿಕಾರಿ ಇಲಾಖೆ ಅಧಿಕಾರಿ ರಾಜಕುಮಾರ್ ಅವರು ಯೋಜನೆಯ ಬಗ್ಗೆ ವಿವರಿಸಿದರು. ನಗರಸಭೆ ಪೌರಾಯುಕ್ತ ಉಮೇಶ್ ಚವ್ಹಾಣ್‌ ಸ್ವಾಗತಿಸಿದರು. ರಾಮ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

-----

ಯಾದಗಿರಿ ನಗರಕ್ಕೆ ಭೀಮಾ ನದಿ ಮೂಲದಿಂದ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆ ಅಡಿ ಕುಡಿಯುವ ನೀರು ಸರಬರಾಜು ಯೋಜನೆಗೆ ನಗರದ ಕಮಲಾ ನೆಹರು ಉದ್ಯಾನವನದಲ್ಲಿ ಸೋಮವಾರ ಶಂಕುಸ್ಥಾಪನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ನೆರವೇರಿಸಿದರು.

7ವೈಡಿಆರ್‌1

Share this article