ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿಯ ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕೊಡಗಿನ ಕ್ರೀಡಾ ಕ್ಷೇತ್ರದ ದ್ರೋಣಾಚಾರ್ಯ ಎಂದೇ ಕರೆಯಲ್ಪಡುವ ದಿ. ಸಿ.ವಿ. ಶಂಕರ್ಸ್ವಾಮಿ ಅವರ ಸ್ಮರಣಾರ್ಥ ಏರ್ಪಡಿಸಿಕೊಂಡು ಬದಲಾಗುತ್ತಿರುವ 31ನೇ ವರ್ಷದ ಉಚಿತ ಬೇಸಿಗೆ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಸರಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆ ಕ್ರೀಡೆಯಾಗಲಿ, ಇನ್ನಿತರ ಯಾವುದೇ ಕ್ಷೇತ್ರಗಳಲ್ಲಿಯೂ ಅಭ್ಯಸಿಸಲು ಸೌಲಭ್ಯಗಳಿರಲಿಲ್ಲ. ಈಗಿನ ಮಕ್ಕಳು ಅದೃಷ್ಟವಂತರು. ಇಂತಹ ಶಿಬಿರಗಳ ಮೂಲಕ ತರಬೇತಿ ನೀಡಲಾಗುತ್ತಿದೆ. ಇದೊಂದು ವಿಭಿನ್ನ ಶಿಬಿರವಾಗಿದ್ದು, ಇಲ್ಲಿ ಅನೇಕ ವಿಷಯಗಳನ್ನು ಕಲಿಸಿಕೊಡುತ್ತಿರುವುದು ಶ್ಲಾಘನೀಯವಾದುದು. ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳೇ ತರಬೇತುದಾರರಾಗಿ ತೊಡಗಿಸಿಕೊಂಡು ಪ್ರೋತ್ಸಾಹ ನೀಡುತ್ತಿದ್ದಾರೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಮಕ್ಕಳಲ್ಲಿ ಶ್ರಮ, ಶಿಸ್ತು, ಸಂಯಮ, ತೊಡಗಿಸಿಕೊಳ್ಳುವಿಕೆ, ಅರ್ಪಣಾ ಮನೋಭಾವ ಇರಬೇಕು. ವಿದ್ಯಾಭ್ಯಾಸದೊಂದಿಗೆ ಕ್ರೀಡೆಯತ್ತಲೂ ಕೇಂದ್ರಿಕರಿಸಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಶಕ್ತಿ ಬರುತ್ತದೆ. ಭವಿಷ್ಯದಲ್ಲಿ ಅದು ಅರಿವಿಗೆ ಬರುತ್ತದೆ. ಎಲ್ಲ ಕ್ಷೇತ್ರಗಳಲ್ಲಿಯೂ ಕಷ್ಟ ಎಂಬುದು ಇರುತ್ತದೆ. ಕಷ್ಟವನ್ನು ಮೀರಿ ಉತ್ತಮ ವ್ಯಕ್ತಿತ್ವ ಹೊಂದಿಕೊಂಡು ಜೀವನ ರೂಪಿಸಿಕೊಳ್ಳಬೇಕೆಂದು ಹಿತ ನುಡಿಗಳನ್ನಾಡಿದರು. ಶಿಬಿರ ಧ್ಯೇಯವನ್ನು ಅರಿತು ಏಳಿಗೆಗೆ ಪ್ರಯತ್ನಿಸಬೇಕೆಂದು ಹೇಳಿದರು.
ಅತಿಥಿಯಾಗಿದ್ದ ಶಕ್ತಿ ದಿನಪತ್ರಿಕೆ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ, ಕೆಲವು ಮಕ್ಕಳು ಶಿಬಿರ ಮುಗಿದ ಬಳಿಕ ಅಭ್ಯಾಸವನ್ನೇ ಮರೆತು ಬಿಡುತ್ತಾರೆ. ಮೈದಾನಕ್ಕೆ ಬರುವುದಿಲ್ಲ. ನಿರಂತರ ಆಸಕ್ತಿ, ಪ್ರಯತ್ನದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವೆಂದು ಹೇಳಿದರು. ಅಭ್ಯಾಸಗಳು ಕೇವಲ ಒಂದು ತಿಂಗಳಿಗೆ ಮಾತ್ರ ಸೀಮಿತವಾಗಿರಬಾರದು. ಜೀವನ ಪರ್ಯಂತ ಇರಬೇಕು. ಮುಂದಿನ ಪೀಳಿಗೆಗೆ ಹೇಳಿಕೊಡುವಂತೆ ಇರಬೇಕು. ಪ್ರಥಮವಾಗಿ ಕಲಿಕೆಯಲ್ಲಿ ಏಕಾಗ್ರತೆ ಇರಬೇಕು. ದೇವರಲ್ಲಿ ನಂಬಿಕೆ ಇಡಬೇಕು; ದೇವರು ಅದ್ಭುತ ಶಕ್ತಿ ಎಂದು ಮನವರಿಕೆ ಮಾಡಿಕೊಟ್ಟರು.
ವಿಶೇಷ ಸಾಧನೆ ಮಾಡುವುದರೊಂದಿಗೆ ಹೆಸರು ಗಳಿಸಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಾಂಡರರ್ಸ್ ಕ್ಲಬ್ ಉಪಾಧ್ಯಕ್ಷ ಪಾರ್ಥ ಚಂಗಪ್ಪ, ಹಿರಿಯ ಕ್ರೀಡಾಪಟುಗಳು, ವಾಂಡರರ್ಸ್ ಕ್ಲಬ್ನ ಅಪ್ಪನೆರವಂಡ ಚುಮ್ಮಿ ದೇವಯ್ಯ, ಕೋಡಿಮಣಿಯಂಡ ಮೇದಪ್ಪ, ಮಣಿ ಮೇದಪ್ಪ, ಕಾರೇರ ಕವನ್ ಮಾದಪ್ಪ, ಆಸಿಫ್, ನಂದ, ಶಿಬಿರದ ಸಂಚಾಲಕ ಬಾಬು ಸೋಮಯ್ಯ, ತರಬೇತುದಾರರಾದ ಕೋಟೇರ ನಾಣಯ್ಯ, ಕುಡೆಕಲ್ ಸಂತೋಷ್, ನಾಟೋಳಂಡ ಸುರೇಶ್, ಬಿದ್ದಂಡ ನರೆನ್, ಕೇನೇರ ಕಾವ್ಯ, ಪೋಷಕರು ಇದ್ದರು. ವಾಂಡರರ್ಸ್ ಪದಾಧಿಕಾರಿ ಬೊಪ್ಪಂಡ ಶ್ಯಾಂ ಪೂಣಚ್ಚ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರಾರ್ಥಿ ಕಿಶಿ ಲೋಕೇಶ್ ಶಿಬಿರದ ಉದ್ದೇಶದ ಬಗ್ಗೆ ತಿಳಿಸಿದರೆ, ಪುನಿತ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಯೋಗ ಶಿಕ್ಷಕ ಕೆ.ಕೆ. ಮಹೇಶ್ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.