ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನಲ್ಲಿ ಬಗರ್ಹುಕುಂ ಅರ್ಜಿ ನಿರೀಕ್ಷೆಗೂ ಮೀರಿ ಬಂದಿದ್ದು ಅರ್ಜಿ ವಿಲೇವಾರಿ ಸಮಸ್ಯೆ ಬಗೆಹರಿಸಬೇಕೆಂದು ಹಾಗೂ ಮಾರ್ಗದರ್ಶನ ನೀಡಬೇಕೆಂದು ಸರ್ಕಾರದ ಮಟ್ಟದಲ್ಲಿ ಹೆಚ್ಚುವರಿ ಕಮಿಟಿ ಜಾರಿಗೆ ತಂದಿದ್ದರೂ ಸ್ಥಳೀಯ ಶಾಸಕರು ಹೆಚ್ಚುವರಿ ಸಮಿತಿ ವಿರುದ್ಧ ನ್ಯಾಯಾಲಯದಲ್ಲಿ ತಡೆಯಜ್ಞೆ ತಂದು ಬಡರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಗರ್ಹುಕುಂ ಹೆಚ್ಚುವರಿ ಕಮಿಟಿ ಅಧ್ಯಕ್ಷ ನಾಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಬಗರ್ಹುಕುಂ ಯೋಜನೆಯ ನಮೂನೆ 57 ಅಡಿಯಲ್ಲಿ 22 ಸಾವಿರ ಅರ್ಜಿ ಬಂದಿದ್ದು ಮಾಜಿ ಸಚಿವ ಶಿವರಾಂ ಅವರು ತಮ್ಮನ್ನು ಒಳಗೊಂಡಂತೆ ಸರ್ಕಾರದ ಮಟ್ಟದಲ್ಲಿ ಹೆಚ್ಚುವರಿ ಕಮಿಟಿ ರಚಿಸಿ ಕೊಟ್ಟಿದ್ದರು. ಶಾಸಕರು ನಮ್ಮ ಕಮಿಟಿ ರಚನೆಯಾಗುವ ತನಕ ಒಂದು ಸಭೆಯನ್ನು ಕರೆದಿರಲಿಲ್ಲ, ಆದರೆ ನಮ್ಮ ಕಮಿಟಿ ಬಂದ ತ ವಾರಕೊಮ್ಮೆ ಸಭೆ ನಡೆಸುತ್ತಿದ್ದಾರೆ. ಅಲ್ಲದೆ ನಾವು ಭಾಗವಹಿಸದಂತೆ ಕೋರ್ಟಿನಲ್ಲಿ ತಡೆಯಾಜ್ಞೆ ತಂದಿರುತ್ತಾರೆ. ನಮೂನೆ 53 ಅಡಿಯಲ್ಲಿ 11275 ಅರ್ಜಿಯಲ್ಲಿ 596 ಅರ್ಜಿ ಮಂಜೂರಾತಿಯಾಗಿದೆ, 22 ಸಾವಿರ ಬಡ ರೈತ ಕುಟುಂಬಗಳು ಅರ್ಜಿ ಸಲ್ಲಿದ್ದಾರೆ. 17859 ಅರ್ಜಿಗಳು ಶಾಸಕರ ಅಧ್ಯಕ್ಷತೆಯಲ್ಲಿ ತಿರಸ್ಕೃತಗೊಂಡಿವೆ. ಇವು ಯಾವ ಕಾರಣಕ್ಕೆ ತಿರಸ್ಕಾರವಾಗಿದೆ ಎಂಬುದಕ್ಕೆ ಕಾರಣ ತಿಳಿಸಿಲ್ಲ, ರೈತರ ಹೆಸರಿನಲ್ಲಿ ಪ್ರಮಾಣ ಮಾಡಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹೆಚ್ಚುವರಿ ಕಮಿಟಿಗೂ ಅಧಿಕಾರ ಮಾಡಲು ಬಿಡದೆ, ಶಾಸಕರು ಅರ್ಜಿ ವಿಲೇವಾರಿ ಮಾಡದೆ ಹೆಚ್ಚುವರಿ ಕಮಿಟಿ ಮಾಡಿ ಶಿವರಾಂ ಮಧ್ಯ ಪ್ರವೇಶಿಸಿದ್ದಾರೆ ಎಂಬ ಕಾರಣಕ್ಕೆ ಈ ರೀತಿಯ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ರೈತರ ಬಗ್ಗೆ ಕಾಳಜಿ ಇಲ್ಲದ ಶಾಸಕರು ಇದುವರೆಗೂ ಸಾಗುವಳಿ ಚೀಟಿಯನ್ನು ನೀಡಿಲ್ಲ. ಸರ್ಕಾರ ಬಂದು ಎರಡು ವರ್ಷವಾಗಿದ್ದು ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆದಿಲ್ಲ. ಪಕ್ಷಾತೀತವಾಗಿ ಅರ್ಜಿಯನ್ನು ಪರಿಶೀಲನೆ ಮಾಡುತ್ತಿಲ್ಲ, ಹೆಚ್ಚುವರಿ ಕಮಿಟಿ ಬಂದ ನಂತರ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ರೈತರ ಮತದಿಂದ ಅಧಿಕಾರಕ್ಕೆ ಬಂದು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದವನು ಅಧ್ಯಕ್ಷನಾಗಿದ್ದನೆಂದು ಸಹಿಸದ ಶಾಸಕರು ಕೋರ್ಟಿನ ಮೊರೆ ಹೋಗಿದ್ದು, ಹೆಚ್ಚುವರಿ ಕಮಿಟಿಗೆ ಅನ್ಯಾಯ ನಡೆದಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.ಈ ಸಂದರ್ಭದಲ್ಲಿ ಹೆಚ್ಚುವರಿ ಕಮಿಟಿ ಸದಸ್ಯರಾದ ರಮೇಶ್, ವಿರೂಪಾಕ್ಷ, ಮಲ್ಲೇಶ್ ಹಾಜರಿದ್ದರು.