ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ದ್ವಿಚಕ್ರ ವಾಹನ ಸವಾರರೂ ಸ್ಕಿಡ್ ಆಗಿ ಬೀಳುವುದು ಇಲ್ಲಿ ಸರ್ವೆ ಸಾಮಾನ್ಯವಾಗಿದೆ. ಈ ಬಗ್ಗೆ ಹಲವಾರು ಬಾರಿ ಪತ್ರಿಕಾ ವರದಿಗಳೂ ಬಂದರೂ ಪಂಚಾಯಿತಿ ಆಡಳಿತಾಧಿಕಾರಿಗಳು ‘ಇದು ನಮಗೆ ಸಂಬಂಧಿಸಿಲ್ಲ’ ಎಂಬಂತೆ ಮೌನವಾಗಿದ್ದಾರೆ. ಸಮೀಪದಲ್ಲೇ ನಿರ್ಮಿಸಿದ್ದ ಹೊಸ ಸೇತುವೆಯ ಫುಟ್ ಪಾತ್ ನ್ನು ಬಳಸೋಣವೆಂದರೆ, ಸೇತುವೆಯಲ್ಲಿ ಸುರಕ್ಷತಾ ಕಾಮಗಾರಿ ನಡೆಸಿದ ವೇಳೆ ಫುಟ್ ಪಾತ್ ನಲ್ಲಿ ಹಾಕಲಾಗಿರುವ ಕಾಂಕ್ರೀಟ್ ಮಿಶ್ರಣ ಸಹಿತ ಕಸಕಡ್ಡಿಗಳು ಹಾಗೆಯೇ ಉಳಿಸಲಾಗಿದ್ದು, ನಡೆಯಲು ಯೋಗ್ಯವಾಗದ ಸ್ಥಿತಿಯಲ್ಲಿ ಇರಿಸಲಾಗಿದೆ. ಮಾತ್ರವಲ್ಲದೆ ಚತುಷ್ಪಥ ಹೆದ್ದಾರಿಯ ತಡೆಬೇಲಿ ಸೇತುವೆ ಅಂಚಿನ ವರೆಗೆ ಹಾಕಲಾಗಿದ್ದು, ಪಾದಚಾರಿಗಳು ಫುಟ್ಪಾತ್ ನ್ನು ಬಳಸಲು ಕೂಡ ಆಗದಂತಾಗಿದೆ. ಈ ಕಾರಣ ಪಾದಚಾರಿಗಳು ನೇರವಾಗಿ ಸೇತುವೆಯಲ್ಲೇ ನಡೆದಾಡಬೇಕಾಗಿದ್ದು, ಪೈಪೋಟಿಗಿಳಿದಂತೆ ವೇಗವಾಗಿ ಸಂಚರಿಸುವ ವಾಹನಗಳ ನಡುವೆ ಜೀವ ಕೈಯಲ್ಲಿ ಹಿಡಿದುಕೊಂಡು ನಡೆದಾಡಬೇಕಾಗಿದೆ. ಇಂತಹ ಸ್ಥಿತಿಯಲ್ಲಿ ಶಾಲೆಗೆ ಹೋಗುವ ಎಳೆಯ ಮಕ್ಕಳನ್ನು ಚತುಷ್ಪಥ ರಸ್ತೆಯ ಸೇತುವೆಯಲ್ಲಿ ನಡೆದಾಡಿಸಲು ಹೆತ್ತವರು ಭಯಪಡುತ್ತಿದ್ದಾರೆ.
ರಸ್ತೆಯನ್ನು ಸಂಚಾರಯೋಗ್ಯವನ್ನಾಗಿಸುವ ಬಗ್ಗೆ ಅಧಿಕಾರಿ ವರ್ಗವನ್ನು ಕ್ರಿಯಾಶೀಲಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ದ.ಕ. ಜಿಲ್ಲಾಧಿಕಾರಿಯವರು ಗಮನ ಹರಿಸಬೇಕಾಗಿದೆ ಎಂದು ಉಪ್ಪಿನಂಗಡಿ ವರ್ತಕ ಸಂಘದ ಕೋಶಾಧಿಕಾರಿ ಲೋಕೆಶ್ ಆಚಾರ್ಯ ಆಗ್ರಹಿಸಿದ್ದಾರೆ.ಸೇತುವ ದುಃಸ್ಥಿತಿ ಬಗ್ಗೆ ಗ್ರಾಪಂ ಆಡಳಿತಕ್ಕೆ ಖುದ್ದು ಲಿಖಿತ ಮನವಿ ಸಲ್ಲಿಸಿದ್ದ ನೆಕ್ಕಿಲಾಡಿ ನಿವಾಸಿ ಸುದರ್ಶನ್ ಗಾಣಿಗ ಮಾತನಾಡಿ, ಕನಿಷ್ಠ ಜಲ್ಲಿ ಹುಡಿ ತಂದು ಹಾಕಿ, ರಸ್ತೆಯ ಇಕ್ಕೆಲದಲ್ಲಿ ಮಳೆ ನೀರು ಹರಿದು ಹೋಗುವಂತಹ ಚರಂಡಿ ನಿರ್ಮಿಸಿದರೆ ಇಲ್ಲಿ ಸಮಸ್ಯೆ ಬಗೆಹರಿದಂತೆ. ಅದಕ್ಕೂ ಗ್ರಾಪಂ ಆಡಳಿತ ಬಡತನ ತೋರಿದರೆ ನಾವೇನು ಮಾಡಲು ಸಾಧ್ಯ ಎಂದು ಅಸಹಾಯಕತೆ ತೋರಿದ್ದಾರೆ.