ಕನ್ನಡಪ್ರಭ ವಾರ್ತೆ ಶಿರಾ ನಗರದಲ್ಲಿ ಇತ್ತೀಚೆಗೆ ನಾಯಿಗಳ ಹಾವಳಿ ಹೆಚ್ಚಾದ ಹಿನ್ನೆಲೆ ಪ್ರತಿಯೊಂದು ನಾಯಿಗೂ ರೋಗ ನಿರೋಧಕ ರೇಬಿಸ್ ಲಸಿಕೆಗಳನ್ನು ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ರೇಬಿಸ್ ಕಾಯಿಲೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು ಹೇಳಿದರು.ನಗರದ ಪಶು ಇಲಾಖೆ ಆವರಣದಲ್ಲಿ ನಗರಸಭೆ ಹಾಗೂ ಪಶು ಇಲಾಖೆ ವತಿಯಿಂದ ರೇಬಿಸ್ ರೋಗದ ಅರಿವು ಮತ್ತು ಲಸಿಕೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ನಾಯಿಗಳ ನಿಯಂತ್ರಣಕ್ಕೆ ನಗರಸಭೆ ವತಿಯಿಂದ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತ ರುದ್ರೇಶ್ ಮಾತನಾಡಿ, ಶಿರಾ ನಗರದಲ್ಲಿ ಕಳೆದ ಎರಡು ದಿನಗಳ ಹಿಂದ ಹುಚ್ಚು ನಾಯಿಯೊಂದು ಹಲವರಿಗೆ ಕಚ್ಚಿ ಇನ್ನೂ ಕೆಲವರಿಗೆ ಪರಚಿ ಗಾಯಗೊಳಿಸಿತ್ತು. ಇದರಿಂದ ನಗರದ ಸಾರ್ವಜನಿಕರ ಸುರಕ್ಷತೆಗಾಗಿ ಬೀದಿ ನಾಯಿಗಳಿಗೆ ರೋಗ ನಿರೋಧಕ ರೇಬಿಸ್ ಲಸಿಕೆ ಹಾಕಿಸಲು ನಗರಸಭೆಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ತಾಲೂಕು ಪಶು ವೈದ್ಯಾಧಿಕಾರಿ ಡಾ.ರಮೇಶ್ ಮಾತನಾಡಿದರು. ಮುಖ್ಯ ಪಶು ವೈದ್ಯಾಧಿಕಾರಿ ಡಾ.ನಾಗೇಶ್, ದಯಾನಂದ್, ನಗರಸಭೆ ಪರಿಸರ ಅಭಿಯಂತರರಾದ ಪಲ್ಲವಿ, ಆರೋಗ್ಯ ನಿರೀಕ್ಷಕರಾದ ಮಾರೇಗೌಡ ಹಾಜರಿದ್ದರು.