ಆರೆಸ್ಸೆಸ್‌ ವಿರುದ್ಧ ಕೇಸ್‌ ಇಲ್ಲ ಎಂದಮೇಲೆ ದ್ವೇಷಿಸುವುದೇಕೆ: ಛಲವಾದಿ

KannadaprabhaNewsNetwork |  
Published : Aug 27, 2026, 02:15 AM IST
ಛಲವಾದಿ  | Kannada Prabha

ಸಾರಾಂಶ

ಆರ್‌ಎಸ್‌ಎಸ್‌ ಸಂಘಟನೆ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದ ಮೇಲೆ ಯಾವ ಕಾರಣಕ್ಕಾಗಿ ಆರ್‌ಎಸ್‌ಎಸ್‌ ಅನ್ನು ದ್ವೇಷಿಸುತ್ತೀರಿ ಗೃಹ ಸಚಿವರೇ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆರ್‌ಎಸ್‌ಎಸ್‌ ಸಂಘಟನೆ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದ ಮೇಲೆ ಯಾವ ಕಾರಣಕ್ಕಾಗಿ ಆರ್‌ಎಸ್‌ಎಸ್‌ ಅನ್ನು ದ್ವೇಷಿಸುತ್ತೀರಿ ಗೃಹ ಸಚಿವರೇ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಆರ್‌ಎಸ್‌ಎಸ್‌ನ ಪಥಸಂಚಲನಗಳು ಹಾಗೂ ಶಾಖೆಗಳು ನಡೆಯುವಾಗ ಯಾವುದೇ ಅಹಿತಕರ ಘಟನೆಗಳು ಅಥವಾ ಗಲಭೆಗಳು ನಡೆದಿಲ್ಲ ಎಂದು ವಿಧಾನ ಪರಿಷತ್‌ನಲ್ಲಿ ನಾನು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗೃಹ ಸಚಿವರೇ ಅಧಿಕೃತ ಉತ್ತರ ನೀಡಿದ್ದಾರೆ. ಈ ಅಧಿಕೃತ ಉತ್ತರವು ಆರ್‌ಎಸ್‌ಎಸ್‌ ವಿರುದ್ಧ ಅವರು ಮಾಡುತ್ತಿರುವ ಆರೋಪಗಳು ಮತ್ತು ರಾಜಕೀಯ ಅಪಪ್ರಚಾರಕ್ಕೆ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.

ದ್ವೇಷದ ಮುಖವಾಡ ಕಳಚಿದೆ:

ದಾಖಲೆಗಳೇ ಸತ್ಯ ಹೇಳುತ್ತಿವೆ. ಗೃಹ ಸಚಿವರ ರಾಜಕೀಯ ದ್ವೇಷದ ಮುಖವಾಡ ಸಂಪೂರ್ಣ ಕಳಚಿದೆ. ರಾಷ್ಟ್ರಪ್ರೇಮವನ್ನೇ ತನ್ನ ಕಾರ್ಯದ ಆದರ್ಶವನ್ನಾಗಿ ಹೊಂದಿರುವ ಆರ್‌ಎಸ್‌ಎಸ್‌ ವಿರುದ್ಧ ಸದಾ ದ್ವೇಷ, ಅಸೂಯೆ ಮತ್ತು ಹಗೆತನದ ರಾಜಕಾರಣ ಮಾಡುತ್ತಾ ಬಂದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಇದೀಗ ಅವರದೇ ಇಲಾಖೆಯ ಅಧಿಕೃತ ಉತ್ತರದ ದಾಖಲೆಗಳು ಕನ್ನಡಿ ಹಿಡಿದಿವೆ ಎಂದು ಎಂದಿದ್ದಾರೆ.

ಆರ್‌ಎಸ್‌ಎಸ್‌ ವಿರುದ್ಧ ದ್ವೇಷವೇಕೆ?

ಆರ್‌ಎಸ್‌ಎಸ್ ವಿರುದ್ಧ ಯಾವುದೇ ಪ್ರಕರಣಗಳಿಲ್ಲ, ಯಾವುದೇ ಅಹಿತಕರ ಘಟನೆಗಳ ದಾಖಲೆಗಳಿಲ್ಲ ಎಂದು ನಿಮ್ಮದೇ ಇಲಾಖೆ ಅಧಿಕೃತವಾಗಿ ಉತ್ತರಿಸಿರುವಾಗಲೂ, ಆರ್‌ಎಸ್‌ಎಸ್‌ ವಿರುದ್ಧ ನಿರಂತರವಾಗಿ ನೀವು ರಾಜಕೀಯ ದ್ವೇಷವನ್ನು ಸಾಧಿಸುವುದೇಕೆ? ರಾಜ್ಯದ ಗೃಹ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸಬೇಕಾದ ನೀವು ಕಾನೂನು ಮತ್ತು ಸುವ್ಯವಸ್ಥೆಯಂತಹ ಗಂಭೀರ ವಿಚಾರಗಳತ್ತ ಗಮನ ಹರಿಸುವ ಬದಲು ಆರ್‌ಎಸ್‌ಎಸ್‌ ಅನ್ನು ಗುರಿಯಾಗಿಸಿಕೊಂಡು ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವುದೇಕೆ ಎಂದು ಜಾಲತಾಣದ ಮೂಲಕ ಪ್ರಶ್ನಿಸಿದ್ದಾರೆ.

ಕೇವಲ ರಾಜಕೀಯ ಲಾಭಕ್ಕಾಗಿ ದೇಶಪ್ರೇಮದ ಸಂಘಟನೆಯೊಂದನ್ನು ಗುರಿಯಾಗಿಸಿಕೊಂಡು ಹಗೆತನ ಸಾಧಿಸುವುದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ. ದಾಖಲೆಗಳು ಸತ್ಯವನ್ನು ಹೇಳಿವೆ. ಈಗ ರಾಜಕೀಯ ದ್ವೇಷದ ಮುಖವಾಡ ಕಳಚಿಕೊಳ್ಳುವ ಸಮಯ ಬಂದಿದೆ ಎಂದು ಛಲವಾದಿ ನಾರಾಯಣಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೂ ಮಳೆ ಸುರಿಸಿ ಕ್ಯಾಪ್ಟನ್‌ ‘ಅಭಿಮನ್ಯು’ಗೆ ಬೀಳ್ಕೊಡುಗೆ
ಯುವ ಜನತೆ ಕಲೆ ಸಂಸ್ಕೃತಿಗೆ ಜೀವ ತುಂಬಬೇಕು: ನಟರಾಜ್‌