ರಸ್ತೆ ದುರಸ್ತಿಗೂ ಅನುದಾನ ಕೊಡುತ್ತಿಲ್ಲ: ದಿನಕರ ಶೆಟ್ಟಿ

KannadaprabhaNewsNetwork |  
Published : Nov 23, 2025, 03:00 AM IST
ಫೋಟೋ : ೨೨ಕೆಎಂಟಿ_ಎನ್‌ಒವಿ_ಕೆಪಿ೪ : ಪಟ್ಟಣದ ಚಿತ್ರಗಿಯಲ್ಲಿ ಇಂಟರ್‌ಲಾಕ್ ಕಾಮಗಾರಿಯನ್ನು ಶಾಸಕ ದಿನಕರ ಶೆಟ್ಟಿ ಪರಿಶೀಲಿಸಿದರು. ಮೋಹಿನಿ ಗೌಡ, ಹೇಮಂತಕುಮಾರ ಗಾಂವಕರ, ಪ್ರಸಾದ ನಾಯಕ, ಚೇತೇಶ ಶಾನಭಾಗ, ನವೀನ ಪಟಗಾರ, ನಾಗರಾಜ ಹರಿಕಂತ್ರ ಇನ್ನಿತರರು ಇದ್ದರು. | Kannada Prabha

ಸಾರಾಂಶ

ಅತಿವೃಷ್ಟಿಯಿಂದ ಎಲ್ಲೆಡೆ ಹಾಳಾಗಿರುವ ರಸ್ತೆಗಳ ದುರಸ್ತಿಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಹಣ ಬಿಡುಗಡೆ ಮಾಡದಿರುವುದಕ್ಕೆ ಶಾಸಕ ದಿನಕರ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಂಡ ಮುಚ್ಚುವ ಡಾಂಬರು ತೇಪೆಕಾರ್ಯ ವೀಕ್ಷಿಸಿದ ಶಾಸಕ ಅಸಮಾಧಾನ

ಕನ್ನಡಪ್ರಭ ವಾರ್ತೆ ಕುಮಟಾ

ಅತಿವೃಷ್ಟಿಯಿಂದ ಎಲ್ಲೆಡೆ ಹಾಳಾಗಿರುವ ರಸ್ತೆಗಳ ದುರಸ್ತಿಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಹಣ ಬಿಡುಗಡೆ ಮಾಡದಿರುವುದಕ್ಕೆ ಶಾಸಕ ದಿನಕರ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆ ದುರಸ್ತಿಗೆ ಸರ್ಕಾರದ ಅನುದಾನದ ಕೊರತೆಯಿಂದಾಗಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯನ್ನೇ ಅನಿವಾರ್ಯವಾಗಿ ಬಳಸಿಕೊಂಡು ಪಟ್ಟಣದ ರಸ್ತೆಗಳ ಹೊಂಡಗುಂಡಿ ದುರಸ್ತಿ ಕಾರ್ಯವನ್ನು ಶಾಸಕ ದಿನಕರ ಶೆಟ್ಟಿ ಕೈಗೆತ್ತಿಕೊಂಡಿದ್ದಾರೆ. ಶನಿವಾರ ನೆಲ್ಲಿಕೇರಿ ಹಳೆಯ ಬಸ್ ನಿಲ್ದಾಣದ ಎದುರು ಮುಖ್ಯ ರಸ್ತೆಯ ಹೊಂಡ ಮುಚ್ಚುವ ಡಾಂಬರು ತೇಪೆಕಾರ್ಯ ವೀಕ್ಷಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರಿಗೆ ಅತ್ಯಗತ್ಯವಿರುವ ಸುಸಜ್ಜಿತ ರಸ್ತೆ, ಕುಡಿಯುವ ನೀರು, ಬೀದಿದೀಪ ಇಂತಹ ಮೂಲಭೂತ ಸೌಕರ್ಯಗಳ ಪೂರೈಕೆಗೆ ಸರ್ಕಾರ ಆದ್ಯತೆ ನೀಡಬೇಕು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡುವರೆ ವರ್ಷಗಳು ಪೂರೈಸುತ್ತಾ ಬಂದರೂ ಇದುವರೆಗೆ ನಮ್ಮ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ನಾನು ಸಲ್ಲಿಸಿದ ಯಾವುದೇ ಬೇಡಿಕೆಗೆ ಸ್ಪಂದಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಕಾರ್ಯಕ್ಷೇತ್ರವನ್ನು ಕೇವಲ ಭಟ್ಕಳಕ್ಕಷ್ಟೇ ಸೀಮಿತಗೊಳಿಸಿಕೊಂಡಿರುವಂತಿದೆ. ಕುಮಟಾ-ಹೊನ್ನಾವರದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಅವರು ಮುತುವರ್ಜಿ ವಹಿಸುತ್ತಿಲ್ಲ ಎಂದು ಆರೋಪಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ ಸದಾಕಾಲ ವಾಹನ ದಟ್ಟಣೆಯಿಂದ ಕೂಡಿರುವ ಗಿಬ್‌ಸರ್ಕಲ್ ಸನಿಹದ ಪ್ರಮೀಳಾ ಕಾಂಪ್ಲೆಕ್ಸ್ ಎದುರಿನ ರಸ್ತೆ, ಗುಡಿಗಾರಗಲ್ಲಿ, ಸುಭಾಸ್ ರೋಡ್, ಚಿತ್ರಗಿ, ನೆಲ್ಲಿಕೇರಿ ರಸ್ತೆಯಲ್ಲಿ ಹದಗೆಟ್ಟಿದ್ದ ಆಯ್ದ ಭಾಗಗಳಿಗೆ ಇಂಟರ್ಲಾಕ್ ಅಳವಡಿಸಲಾಗಿದೆ. ರಸ್ತೆ ದುರಸ್ತಿಗೆ ಸರ್ಕಾರದಿಂದ ಯಾವುದೇ ಅನುದಾನ ಬಾರದಿರುವ ಹಿನ್ನೆಲೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ಒದಗಿಸಿಕೊಟ್ಟು ಕುಮಟಾ ಹಾಗೂ ಹೊನ್ನಾವರ ಪಟ್ಟಣದಲ್ಲಿ ಗುಂಡಿಬಿದ್ದಿದ್ದ ರಸ್ತೆಯನ್ನು ಇಂಟರ್ಲಾಕ್ ಅಳವಡಿಸಿ ತಕ್ಕಮಟ್ಟಿಗೆ ಸರಿಪಡಿಸಲಾಗಿದೆ. ಉಳಿದಂತೆ ಡಾಂಬರಿನಿಂದ ಹೊಂಡ ಮುಚ್ಚುವ ಕಾರ್ಯವೂ ಪ್ರಗತಿಯಲ್ಲಿದೆ. ಆದರೆ ಕೇವಲ ಶಾಸಕರ ನಿಧಿಯಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ಎಲ್ಲಾ ಭಾಗದ ರಸ್ತೆಗಳನ್ನು ದುರಸ್ತಿ ಅಥವಾ ಅಭಿವೃದ್ಧಿ ಸಾಧ್ಯವಿಲ್ಲ. ಅದಕ್ಕೆ ಸರ್ಕಾರ ಪ್ರತ್ಯೇಕ ಅನುದಾನ ಒದಗಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಒಂದು ವರ್ಷದಿಂದ ಪ್ರಯತ್ನಿಸುತ್ತಿದ್ದೇನೆ. ಆದರೆ ಕಾಂಗ್ರೆಸ್ ಸರ್ಕಾರ ಅನುದಾನ ಬಿಡುಗಡೆ ಮಾಡದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದರು.

ಪುರಸಭೆ ಸದಸ್ಯರಾದ ತುಳಸು ಗೌಡ, ಮೋಹಿನಿ ಗೌಡ, ಹೇಮಂತಕುಮಾರ ಗಾಂವಕರ, ಪ್ರಸಾದ ನಾಯಕ, ಚೇತೇಶ ಶಾನಭಾಗ, ರಾಮ ಮಡಿವಾಳ, ನವೀನ ಪಟಗಾರ, ನಾಗರಾಜ ಹರಿಕಂತ್ರ ಇತರರಿದ್ದರು.

PREV

Recommended Stories

ಸಾಮಾಜಿಕ ಸಮಸ್ಯೆ ಬಗ್ಗೆ ಕವಿತೆ ಮೂಡಿ ಬರಲಿ
ವಿವಾಹ ವಿಚ್ಛೇದನದಿಂದ ಕುಟುಂಬ ವ್ಯವಸ್ಥೆಯ ಮೇಲೆ ಪೆಟ್ಟು: ಸ್ವರ್ಣವಲ್ಲೀ ಶ್ರೀ