ವಕ್ಫ್‌ ಆಸ್ತಿ ಗದ್ದಲ ವಿವಾದದ ಸ್ವರೂಪಕ್ಕೆ - ವಕ್ಫ್‌ ನೋಟಿಸಿಂದ ರೈತರಿಗೆ ಸಮಸ್ಯೆ ಆಗಲ್ಲ: ಸಚಿವರು

KannadaprabhaNewsNetwork |  
Published : Nov 02, 2024, 01:34 AM ISTUpdated : Nov 02, 2024, 01:18 PM IST
ವಿಧಾನಸೌಧ | Kannada Prabha

ಸಾರಾಂಶ

  ವಕ್ಫ್‌ ಆಸ್ತಿ ಗದ್ದಲ ವಿವಾದದ ಸ್ವರೂಪಕ್ಕೆ ತಿರುಗಿ ಪ್ರತಿಪಕ್ಷ ಬಿಜೆಪಿಯಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿರುವ ನಡುವೆಯೇ ಚಲುವರಾಯಸ್ವಾಮಿ ಸೇರಿ ಹಲವು ಸಚಿವರು ಪ್ರತಿಪಕ್ಷಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರ ರೈತರ ಆಸ್ತಿ ಕಿತ್ತುಕೊಳ್ಳಲ್ಲ ಎಂದು ಭರವಸೆ ನೀಡಿದ್ದಾರೆ.

 ಬೆಂಗಳೂರು : ರಾಜ್ಯಾದ್ಯಂತ ವಕ್ಫ್‌ ಆಸ್ತಿ ಗದ್ದಲ ವಿವಾದದ ಸ್ವರೂಪಕ್ಕೆ ತಿರುಗಿ ಪ್ರತಿಪಕ್ಷ ಬಿಜೆಪಿಯಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿರುವ ನಡುವೆಯೇ ಚಲುವರಾಯಸ್ವಾಮಿ ಸೇರಿ ಹಲವು ಸಚಿವರು ಪ್ರತಿಪಕ್ಷಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರ ರೈತರ ಆಸ್ತಿ ಕಿತ್ತುಕೊಳ್ಳಲ್ಲ ಎಂದು ಶುಕ್ರವಾರ ಭರವಸೆ ನೀಡಿದ್ದಾರೆ.

ಇದೇ ವೇಳೆ ನಮ್ಮ ಸರ್ಕಾರ ಯಾವುದೇ ರೈತರಿಗೆ ವಕ್ಫ್‌ ಆಸ್ತಿ ವಿಚಾರವಾಗಿ ನೋಟಿಸ್‌ ನೀಡಿಲ್ಲ ಎಂದು ಒಕ್ಕೊರಲಿನಿಂದ ಸ್ಪಷ್ಟಪಡಿಸಿರುವ ಅವರು, ಅದೆಲ್ಲ ಆಗಿದ್ದು ಹಿಂದಿನ ಬಿಜೆಪಿ ಸರ್ಕಾರಾವಧಿಯಲ್ಲಿ. ಆದರೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಈ ವಿಚಾರದಲ್ಲಿ ಸುಖಾಸುಮ್ಮನೆ ರಾಜಕಾರಣ ಮಾಡುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಸಚಿವರಾದ ಕೆ.ಜೆ.ಜಾರ್ಜ್‌, ಭೋಸರಾಜು, ಚಲುವರಾಯಸ್ವಾಮಿ, ಶಿವರಾಜ ತಂಗಡಗಿ, ಸಂತೋಷ್‌ ಲಾಡ್‌, ಎಂ.ಬಿ.ಪಾಟೀಲ್‌ ಮತ್ತಿತರರು ವಕ್ಫ್‌ ವಿವಾದ ವಿಚಾರದಲ್ಲಿ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದು, ರೈತರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ, ಅಪಪ್ರಚಾರಗಳಿಗೆ ಕಿವಿಗೊಡಬೇಕಿಲ್ಲ ಎಂದು ಹೇಳಿದ್ದಾರೆ

ಸುಳ್ಳು ಸುದ್ದಿ:

ವಿಜಯಪುರ ಜಿಲ್ಲೆಯ ಹೊನವಾಡ ಗ್ರಾಮದಿಂದ ವಕ್ಫ್ ವಿವಾದದ ರೂಪ ಪಡೆದಿದೆ. 1974ರಲ್ಲಿ ಕಣ್ತಪ್ಪಿನಿಂದ ವಿಜಯಪುರ ನಗರದ ಮಹಾಲ ಬಾಗಾಯತನ ಸರ್ವೇ ನಂಬರ್‌ಗಳ ಮುಂದೆ ಹೊನವಾಡ ಎಂದು ಸೇರಿಸಿದ್ದರಿಂದ ಈ ಲೋಪವಾಗಿತ್ತು. ಅದನ್ನು ನಂತರ ಸರಿಪಡಿಸಲಾಗಿದೆ. ಆದರೂ ವಕ್ಫ್‌ನಿಂದ ಹಿಂದೂಗಳ, ರೈತರ ಭೂಮಿ ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಹಿಂದೆ ಬಿಜೆಪಿ ಸರ್ಕಾರಾವಧಿಯಲ್ಲಿ ರಾಜ್ಯದ ಹಲವು ರೈತರ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ಸೇರಿಸಲಾಗಿದೆ. 216 ಪ್ರಕರಣಗಳಲ್ಲಿ ನೋಟಿಸ್‌ ನೀಡಲಾಗಿದೆ. ಬೆಂಗಳೂರಿನಲ್ಲಿ 7, ಬಾಗಲಕೋಟೆಯಲ್ಲಿ 11 ಪ್ರಕರಣಗಳನ್ನು ವಕ್ಫ್ ಎಂದು ರೈತರ ಪಹಣಿಯಲ್ಲಿ ಸೇರಿಸಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಕಿಡಿಕಾರಿದ್ದಾರೆ.

ಇನ್ನು ಧಾರವಾಡದಲ್ಲಿ ವಕ್ಫ್ ಆಸ್ತಿ ಸಂಬಂಧ ಜಿಲ್ಲೆಯ ಯಾವುದೇ ರೈತರಿಗೆ ನಮ್ಮ ಸರ್ಕಾರ ನೋಟಿಸ್ ನೀಡಿಲ್ಲ. ಹಿಂದಿನ ಸರ್ಕಾರವೇ ನೋಟಿಸ್ ನೀಡಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಸ್ಪಷ್ಟಪಡಿಸಿದರೆ, ಬಿಜೆಪಿ ಸರ್ಕಾರದಲ್ಲಿ ನೊಟೀಸ್ ನೀಡಲಾಗಿದೆ ಎಂಬುದಕ್ಕೆ ನನ್ನ ಬಳಿ ಸಾಕ್ಷ್ಯ ಇದೆ ಎಂದು ಸಣ್ಣ ನೀರಾವರಿ ಸಚಿವ ಬೋಸರಾಜು ಕೂಡ ಆರೋಪಿಸಿದ್ದಾರೆ.

ಬಿಜೆಪಿಯಿಂದ ರಾಜಕೀಯ: ವಕ್ಫ್‌ ಆಸ್ತಿ ವಿಚಾರವಾಗಿ ರೈತರಿಗೆ ನೋಟಿಸ್‌ ನೀಡಲಾಗಿರುವ ವಿಚಾರವನ್ನು ಬಿಜೆಪಿ ಚುನಾವಣಾ ವಿಚಾರವನ್ನಾಗಿ ಮಾಡುತ್ತಿದೆ. ಉಪ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿಯವರು ವಕ್ಫ್‌ ವಿವಾದ ಹುಟ್ಟು ಹಾಕಿದ್ದಾರೆ. ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಕಿಡಿಕಾರಿದ್ದಾರೆ.

ಇದೇ ವೇಳೆ ಕೃಷಿ ಸಚಿವ ಚಲುವರಾಯಸ್ವಾಮಿ ರೈತರು ಆತಂಕಕಕ್ಕೆ ಒಳಗಾಗುವುದು ಬೇಡ. ಆರ್‌ಟಿಸಿಯಲ್ಲಿ ವಕ್ಫ್ ಆಸ್ತಿ ಎಂದು ಸೇರ್ಪಡೆಯಾದಕ್ಷಣ ಅದು ವಕ್ಫ್ ವಶವಾಗುವುದಿಲ್ಲ ಎಂದು ರೈತರಿಗೆ ಧೈರ್ಯ ತುಂಬಿದ್ದಾರೆ.

ಕೊಪ್ಪಳದಲ್ಲಿ ರೈತರಿಗೆ ವಕ್ಫ್‌ನಿಂದ ನೋಟಿಸ್ 2021ರಲ್ಲಿಯೇ ಬಂದಿವೆ. ಆಗ ಬಿಜೆಪಿ ಆಡಳಿತದಲ್ಲಿತ್ತು. ಆದರೂ ಈಗ ಬಿಜೆಪಿಯವರು ಬಾಯಿ ಬಡಿದುಕೊಳ್ಳುತ್ತಿರುವುದು ಯಾಕೆ? ಉಪ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿಯವರು ವಕ್ಫ್‌ ವಿವಾದ ಹುಟ್ಟು ಹಾಕಿದ್ದಾರೆ. ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ.

- ಶಿವರಾಜ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

ವಕ್ಫ್‌ ಆಸ್ತಿ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ತಪ್ಪಾಗಿದೆ ಯಾವುದೇ ರೈತರ ಭೂಮಿಯನ್ನು ವಶಕ್ಕೆ ಪಡೆಯುವುದಿಲ್ಲ.

- ಕೆ.ಜೆ.ಜಾರ್ಜ್‌, ಇಂಧನ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾರರ ಪಟ್ಟಿ ಪರಿಷ್ಕರಣೆ ಲೋಪ ಸರಿಪಡಿಸಲು ಡಿಕೆಶಿ ಟೀಂ ಮನವಿ
ಕನ್ನಡದ ಕಿರುತೆರೆ ನಟಿಯ ಶೌಚಾಲಯದ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌