ಮಳೆ ಇಲ್ಲ, ಮೇವಿಲ್ಲ, ಎತ್ತುಗಳನ್ನು ಕೇಳುವವರೂ ಇಲ್ಲ!

KannadaprabhaNewsNetwork |  
Published : Jul 13, 2026, 01:15 AM IST
ಪೋಟೊ12ಕೆಎಸಟಿ2: ಕುಷ್ಟಗಿ ಪಟ್ಟಣದ ಜಾನುವಾರು ಸಂತೆಗೆ ಮಾರಾಟಕ್ಕೆ ತಂದಿರುವ ಎತ್ತುಗಳನ್ನು ವಾಪಸ್ಸು ಮನೆಗೆ ಕೊಂಡೋಯ್ಯುತ್ತಿರುವ ರೈತ ಸಿದ್ದಪ್ಪ ತೋಟದ. | Kannada Prabha

ಸಾರಾಂಶ

ಮಳೆ ಕೊರತೆ, ಮೇವು ಮತ್ತು ನೀರಿನ ಅಭಾವದಿಂದ ಜಾನುವಾರು ಸಾಕುವುದು ರೈತರಿಗೆ ಹೊರೆಯಾಗುತ್ತಿದೆ

ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ರೈತನ ಬೆನ್ನೆಲುಬು, ಗ್ರಾಮೀಣ ಆರ್ಥಿಕತೆ ಜೀವನಾಡಿಯಾಗಿದ್ದ ಎತ್ತುಗಳನ್ನು ಇಂದು ನಡೆದ ಜಾನುವಾರು ಸಂತೆಯಲ್ಲಿ ಕೇಳುವವರೇ ಇಲ್ಲ. ವಾರದ ಸಂತೆಗೆ ನೂರಾರು ರೈತರು ತಮ್ಮ ಎತ್ತುಗಳನ್ನು ಕರೆ ತಂದರೂ, ಖರೀದಿದಾರರ ಕೊರತೆ ಹಾಗೂ ತೀರಾ ಕಡಿಮೆ ಬೆಲೆ ಹೇಳುತ್ತಿರುವುದರಿಂದ ಬಹುತೇಕ ರೈತರು ನಿರಾಸೆಯಿಂದ ಜಾನುವಾರುಗಳನ್ನು ಮರಳಿ ಮನೆಗೆ ಕೊಂಡೊಯ್ಯುವ ದೃಶ್ಯ ಮನಕಲಕುವಂತಿದೆ.

ಮಳೆ ಕೊರತೆ, ಮೇವು ಮತ್ತು ನೀರಿನ ಅಭಾವದಿಂದ ಜಾನುವಾರು ಸಾಕುವುದು ರೈತರಿಗೆ ಹೊರೆಯಾಗುತ್ತಿದೆ. ಇದೇ ಕಾರಣಕ್ಕೆ ಅನೇಕರು ತಮ್ಮ ಎತ್ತುಗಳನ್ನು ಮಾರಾಟ ಮಾಡಲು ಸಂತೆಗೆ ಬರುತ್ತಿದ್ದಾರೆ. ಆದರೆ ಬೇಡಿಕೆ ಇಲ್ಲದ ಕಾರಣ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ. ಪರಿಣಾಮ, ಎತ್ತುಗಳನ್ನು ಸಾಕಲು ಆಗದೆ, ಮಾರಾಟ ಮಾಡಲೂ ಆಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಾಕುವುದು ಕಷ್ಟ: ಕೃಷಿಯಲ್ಲಿ ಯಾಂತ್ರೀಕರಣ ಹೆಚ್ಚಾದ ನಂತರ ಎತ್ತುಗಳ ಬಳಕೆ ಗಣನೀಯವಾಗಿ ಕಡಿಮೆಯಾಗಿದೆ. ಟ್ರ್ಯಾಕ್ಟರ್ ಹಾಗೂ ಇತರ ಯಂತ್ರೋಪಕರಣ ಬಳಕೆ ಹೆಚ್ಚಿರುವುದರಿಂದ ಹೊಲದ ಕೆಲಸಕ್ಕೂ ಎತ್ತುಗಳಿಗೆ ಬೇಡಿಕೆ ಇಲ್ಲ, ಈಗ ಹೊಲದಲ್ಲಿ ಎತ್ತುಗಳಿಗೆ ಕೆಲಸವೇ ಇಲ್ಲ. ಮಳೆಯಾಗದ ಕಾರಣ ಸರಿಯಾದ ಮೇವು, ನೀರು ಸಿಗುತ್ತಿಲ್ಲ ಸಾಕುವುದು ಕಷ್ಟ. ಮಾರಾಟಕ್ಕೆ ತಂದರೂ ಸರಿಯಾದ ಬೆಲೆ ಸಿಗುತ್ತಿಲ್ಲ. ಇಟ್ಟುಕೊಂಡು ಏನು ಮಾಡಬೇಕು ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಕಡಿಮೆ ದರ: ಮಾರುಕಟ್ಟೆಯಲ್ಲಿ ಎತ್ತುಗಳ ಬೇಡಿಕೆ ಕುಸಿದಿರುವುದರಿಂದ ಖರೀದಿದಾರರು ರೈತರು ನಿರೀಕ್ಷಿಸುವ ಬೆಲೆಗಿಂತ ಬಹಳ ಕಡಿಮೆ ಮೊತ್ತವನ್ನು ಮಾತ್ರ ನೀಡಲು ಮುಂದಾಗುತ್ತಿದ್ದಾರೆ. ಲಕ್ಷಣ, ಜಾತಿ ಮತ್ತು ಸಾಮರ್ಥ್ಯವಿರುವ ಎತ್ತುಗಳಿಗೂ ತಕ್ಕ ಮೌಲ್ಯ ಸಿಗುತ್ತಿಲ್ಲ. ಹೀಗಾಗಿ ಹಲವು ರೈತರು ನಷ್ಟದಲ್ಲಿ ಮಾರಾಟ ಮಾಡಲು ಮನಸ್ಸು ಮಾಡದೆ ಮನೆಗೆ ವಾಪಸಾಗುತ್ತಿದ್ದಾರೆ.

ವ್ಯಾಪಾರ ಕುಸಿತ: ಒಮ್ಮೆ ರೈತರು, ವ್ಯಾಪಾರಿಗಳು ಹಾಗೂ ಖರೀದಿದಾರರಿಂದ ಕಿಕ್ಕಿರಿದು ತುಂಬುತ್ತಿದ್ದ ಕುಷ್ಟಗಿಯ ಜಾನುವಾರು ಸಂತೆಯಲ್ಲಿ ಈಗ ವ್ಯಾಪಾರ ವಹಿವಾಟು ಗಣನೀಯವಾಗಿ ಕುಸಿದಿದೆ. ನೂರಾರು ರೈತರು ಜಾನುವಾರುಗಳು ಸಂತೆಗೆ ತಂದರೂ ಕೆಲವೇ ವ್ಯವಹಾರಗಳು ನಡೆಯುತ್ತಿದ್ದು ಉಳಿದ ಬಹುತೇಕ ರೈತರು ಮಾರಾಟವಾಗದ ಎತ್ತುಗಳನ್ನು ಮತ್ತೆ ಮನೆಗೆ ಕರೆದೊಯ್ಯುವ ದೃಶ್ಯ ಸಾಮಾನ್ಯವಾಗಿ ಕಂಡು ಬಂತು.

ಸರ್ಕಾರದ ನೆರವಿನ ನಿರೀಕ್ಷೆ: ಬರ ಪರಿಸ್ಥಿತಿಯಿಂದ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿರುವ ಹಿನ್ನೆಲೆ ಸರ್ಕಾರ ಮೇವು ಬ್ಯಾಂಕ್‌ಗಳನ್ನು ಆರಂಭಿಸಿ, ಜಾನುವಾರು ಸಾಕಾಣಿಕೆ ರೈತರಿಗೆ ವಿಶೇಷ ನೆರವು ನೀಡಬೇಕು. ಇಲ್ಲದಿದ್ದರೆ ರೈತರ ಬೆನ್ನೆಲುಬಾದ ಎತ್ತುಗಳನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಲಿದೆ ಎಂದು ರೈತರು ಹೇಳುತ್ತಾರೆ.

ಮಳೆ ಇಲ್ಲದ ಕಾರಣ ಹೊಲದಲ್ಲಿ ಕೆಲಸವೇ ಇಲ್ಲ. ಮೇವು ಖರೀದಿಸಿ ಎತ್ತುಗಳನ್ನು ಸಾಕುವುದು ದುಬಾರಿಯಾಗಿದೆ. ಅನಿವಾರ್ಯವಾಗಿ ಮಾರಾಟಕ್ಕೆ ತಂದಿದ್ದೇವೆ. ಆದರೆ ಕೇಳುವವರು ಇಲ್ಲ, ಬಂದವರೂ ತುಂಬಾ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ನಷ್ಟದಲ್ಲಿ ಮಾರಾಟ ಮಾಡುವುದಕ್ಕಿಂತ ಮನೆಗೆ ಕೊಂಡೊಯ್ಯುತ್ತಿದ್ದೇವೆ ಎಂದು ಬಿಜಕಲ್‌ ರೈತ ಸಿದ್ದಪ್ಪ ತೋಟದ ತಿಳಿಸಿದ್ದಾರೆ.

ಬರದಿಂದ ಜಾನುವಾರುಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ, ಸರ್ಕಾರ ಮೇವು ಬ್ಯಾಂಕ್ ಆರಂಭಿಸಿ, ಜಾನುವಾರು ಸಾಕುವ ರೈತರಿಗೆ ನೆರವು ನೀಡಬೇಕು. ಇಲ್ಲದಿದ್ದರೆ ಇನ್ನಷ್ಟು ರೈತರು ತಮ್ಮ ಜಾನುವಾರುಗಳನ್ನು ಮಾರಬೇಕಾದ ಪರಿಸ್ಥಿತಿ ಬರಲಿದೆ ಎಂದು ರೈತ ಮಲ್ಲಪ್ಪ ಕಂಬಳಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಾನಗರ ಪಾಲಿಕೆಯ ಆರಂಭ ಶೂರತ್ವ; ಮತ್ತೆ ಫುಟ್‌ಪಾತ್ ಅತಿಕ್ರಮಣ ಮಾಡಿದ ವ್ಯಾಪಾರಿಗಳು
ವರ್ತಮಾನದ ಅರಿವಿನಿಂದ ವ್ಯಕ್ತಿತ್ವ ವಿಕಸನ: ಯಮುನಾ ಶ್ರೀನಿಧಿ