ಕನ್ನಡಪ್ರಭ ವಾರ್ತೆ ಭಟ್ಕಳ
ಭಟ್ಕಳದ ಮೂಲ ನಿವಾಸಿಗಳಾಗಿ ಹೊರದೇಶದಲ್ಲಿ ಉದ್ಯಮ, ಉದ್ಯೋಗದಲ್ಲಿರುವವರು (ಅನಿವಾಸಿ ಭಾರತೀಯರು) ಭಟ್ಕಳದಲ್ಲಿ ಸುಸಜ್ಜಿತ ಆಸ್ಪತ್ರೆ, ಉದ್ಯಮ ಸ್ಥಾಪಿಸಲು ಹಣ ವಿನಿಯೋಗ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.ಶನಿವಾರ ಪಟ್ಟಣದ ಲೈಫ್ ಕೇರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಐಸಿಯು, ಆಪರೇಷನ್ ಥಿಯೇಟರ್ ಉದ್ಘಾಟಿಸಿ ಮಾತನಾಡಿ, ಭಟ್ಕಳ ಪಟ್ಟಣದಲ್ಲಿ ರಸ್ತೆ, ವಿದ್ಯುತ್, ಕುಡಿಯುವ ನೀರು ವ್ಯವಸ್ಥೆಗೆ ಅನುದಾನ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕಡವಿನಕಟ್ಟೆ ಡ್ಯಾಂನಿಂದ ಎಲ್ಲ ಭಾಗಕ್ಕೂ ನೀರು ಸರಬರಾಜು ಮಾಡಲು ನೀರಿನ ಕೊರತೆ ಉಂಟಾಗಬಹುದು ಎಂದು ₹220 ಕೋಟಿ ವೆಚ್ಚದಲ್ಲಿ ಹೊನ್ನಾವರದಿಂದ ಕುಡಿಯುವ ನೀರು ತರುವ ವ್ಯವಸ್ಥೆ ಮಾಡಲಾಗುತ್ತಿದೆ. ಭಟ್ಕಳ ಬಂದರ-ಸಾಗರ ರಸ್ತೆ ಅಗಲೀಕರಣಕ್ಕೆ ₹25 ಕೋಟಿ, ಪಟ್ಟಣದಲ್ಲಿ ರಸ್ತೆ ಕಾಮಗಾರಿ ₹25 ಕೋಟಿ ಅನುದಾನ ಮಂಜೂರಿ ಮಾಡಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಭಟ್ಕಳದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ ಎಂದು ಕೆಲವರು ಆರೋಪ ಮಾಡುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ. ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದ ಅವರು ಲೈಫ್ ಕೇರ್ ಆಸ್ಪತ್ರೆ ಆರಂಭವಾಗಿ 4 ವರ್ಷದ ಬಳಿಕ ಅತ್ಯಾಧುನಿಕ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ. ಇದೀಗ ಆಸ್ಪತ್ರೆಯಲ್ಲಿ 50 ಬೆಡ್ ಸೇರಿದಂತೆ ಸುಸಜ್ಜಿತ ವ್ಯವಸ್ಥೆ ಇದ್ದು, ಮುಂದಿನ ದಿನಗಳಲ್ಲಿ ಇದು 200 ಬೆಡ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಆಸ್ಪತ್ರೆಯ ಅಭಿವೃದ್ಧಿಗೆ ಸರಕಾರದಿಂದಲೂ ಸಹಾಯ, ಸಹಕಾರ ಮಾಡಲಾಗುವುದು ಎಂದರು.ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಂಗಳೂರು ರಾಜೀವ ಗಾಂಧಿ ಯೂನಿವರ್ಸಿಟಿಯ ಸೆನೆಟ್ ಸದಸ್ಯ ಡಾ. ಯು.ಟಿ. ಇಫ್ತಿಕಾರ್ ಅಲಿ ಮಾತನಾಡಿ, ಭಟ್ಕಳದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಅಗತ್ಯವಿದೆ. ಮೆಡಿಕಲ್ಗೆ ಸಂಬಂಧಿಸಿದಂತೆ ಸಂಸ್ಥೆಗಳನ್ನು ಸ್ಥಾಪಿಸುವುದಿದ್ದಲ್ಲಿ ರಾಜೀವ ಗಾಂಧಿ ಯುನಿವರ್ಸಿಟಿ ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಭಟ್ಕಳದ ಲೈಪ್ ಕೇರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯ ಒದಗಿಸಿರುವುದು ಮತ್ತು ತಜ್ಞ ವೈದ್ಯರ ತಂಡ ಇರುವುದು ಜನತೆಗೆ ಅನುಕೂಲವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ಅಧ್ಯಕ್ಷ ಯೂನೂಸ್ ಖಾಜೀಯಾ, ಜನತೆಯ ಅನುಕೂಲಕ್ಕಾಗಿ ಲೈಪ್ ಕೇರ್ ಆಸ್ಪತ್ರೆಯನ್ನು ಲೈಪ್ ಕೇರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮಾಡಲಾಗಿದೆ. ಇಲ್ಲಿ ತಜ್ಞ ವೈದ್ಯರು ಮತ್ತು ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆ ಇರುವುದರಿಂದ ಭಟ್ಕಳದ ಜನರು ಚಿಕತ್ಸೆಗಾಗಿ ಬೇರೆ ಊರಿಗೆ ಹೋಗುವುದು ತಪ್ಪಿದಂತಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಆಸ್ಪತ್ರೆಯನ್ನು ಮತ್ತಷ್ಟು ಬೆಡ್ ಹೆಚ್ಚಿಸುವುದರ ಜೊತೆಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದರು.ಉಪಸ್ಥಿತರಿದ್ದ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಮುಖ್ಯ ಖಾಜಿ ಮೌಲನಾ ಅಬ್ದುಲ್ ರವೂಪ್, ಮೌಲಾನಾ ಅಕ್ರಮಿ ನದ್ವಿ ಮಾತನಾಡಿದರು. ವೇದಿಕೆಯಲ್ಲಿ ಆಸ್ಪತ್ರೆಯ ನಿರ್ದೇಶಕ ಅಲ್ತಾಫ್ ಮತ್ತಿತರರಿದ್ದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಸಲ್ಮಾನ ಜುಬಾಪು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ಜುಪ್ರಿಕಾರ್ ಅಲಿ ಪರಿಚಯಿಸಿದರು.