ಹುಬ್ಬಳ್ಳಿ:ಇಂಧನ ಮಿತವ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಮನವಿ ದೇಶದಲ್ಲಿ ಪರ-ವಿರೋಧದ ದೊಡ್ಡ ಅಲೆಯೇ ಸೃಷ್ಟಿಸಿರುವ ಮಧ್ಯೆ ಇಲ್ಲಿನ ವಾಯುವ್ಯ ಸಾರಿಗೆ ಸಂಸ್ಥೆಯ ಇಂಧನ ಉಳಿತಾಯದ ವರದಿಯೊಂದು ಇದೀಗ ವೈರಲ್ ಆಗಿದೆ.
ಕೆಎಂಪಿಎಲ್ (ವಾಹನ ಬಳಸುವ ಡೀಸೆಲ್ ) 4.91 ರಿಂದ 5.12 ಗೆ ಸುಧಾರಣೆ. ಇದರ ಜೊತೆಗೆ ಟಯರ್ ವೆಚ್ಚ 62.8 ಪೈಸೆ ಕಿ. ಮೀ ನಿಂದ 41.7 ಪೈಸೆಗೆ, ಬಿಡಿ ಭಾಗಗಳ ವೆಚ್ಚ 31. 6 ಪೈಸೆಯಿಂದ 23.4 ಪೈಸೆಗೆ, ಮೃದು ಚಾಲನೆ (ಲುಬ್ರಿಕೆಂಟ್) ವೆಚ್ಚ 17.1 ಪೈಸೆಯಿಂದ 9.6 ಪೈಸೆಗೆ ಇಳಿಯಿತು.
ಇದರಿಂದಾಗಿ ಡೀಸೆಲ್ ಬಳಕೆಯಲ್ಲಿ ₹22.80 ಕೋಟಿ ಉಳಿತಾಯ. ಜತೆಯಲ್ಲಿ ಟಯರ್, ಬಿಡಿ ಭಾಗಗಳು, ಮೃದು ಚಾಲನೆಯಲ್ಲೂ ಭಾರೀ ಉಳಿತಾಯ. 1998-99 ರಿಂದ 2003-04 ಅವಧಿಯ ಐದು ವರ್ಷಗಳಲ್ಲಿ ಒಟ್ಟು 31.24 ಕೋಟಿ ವಾಯವ್ಯ ಸಾರಿಗೆಗೆ ಲಾಭವಾಗಿದೆ ಎನ್ನುವುದನ್ನು ವರದಿ ಸಾರಾಂಶ.1998 ರಲ್ಲಿ ವಾಯವ್ಯ ಸಾರಿಗೆಯ ಸಿಎಂಇ (ಚೀಫ್ ಮೆಕ್ಯಾಮಿಕ್ ಇಂಜಿನೀಯರ್) ಹುದ್ದೆಗೆ ಬಂದ ಕೆ. ಎಸ್ ಮೆಣಸಿನಕಾಯಿ ಎಂಬ ಇಂಜಿನೀಯರ್ ಪಠಿಸಿದ ಕಾಸ್ಟ್ ಕಂಟ್ರೋಲ್ ಮಂತ್ರ ಇಂಥದೊಂದು ದೊಡ್ಡ ಉಳಿತಾಯಕ್ಕೆ ಕಾರಣವಾಯಿತು. ಮುಂದೆ 2003-04 ರಲ್ಲಿ ಇದೇ ಮೆಣಸಿನಕಾಯಿ ಅವರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಬಳಿಕ ಇನ್ನಷ್ಟು ಸುಧಾರಣೆಗಳನ್ನು ಮಾಡಿ, ನಷ್ಟದಲ್ಲಿದ್ದ ಸಾರಿಗೆ ಸಂಸ್ಥೆಯನ್ನು ಲಾಭದತ್ತ ಮುನ್ನೆಡೆಸುವ ಜೊತೆಗೆ ಇಂಧನ ಉಳಿತಾಯದಲ್ಲಿ ರಾಷ್ಟ್ರಕ್ಕೆ ದೊಡ್ಡ ಮೊತ್ತ ಸಮರ್ಪಣೆ ಆಗುವಂತೆ ಮಾಡಿದ್ದರು.