ಪರಿಶಿಷ್ಟರಿಗೆ ಸ್ಮಶಾನ ಭೂಮಿ ತ್ವರಿತ ಮಂಜೂರಾತಿಗೆ ಸೂಚನೆ

KannadaprabhaNewsNetwork |  
Published : Feb 19, 2026, 01:30 AM IST
್ಿ್ಿಿ್ | Kannada Prabha

ಸಾರಾಂಶ

ತುಮಕೂರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳಿಗೆ ನಿಯಮಾನುಸಾರ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದಾಗಿ ಅನುಸೂಚಿತ ಜಾತಿ ಹಾಗೂ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ: ಎಲ್. ಮೂರ್ತಿ ತಿಳಿಸಿದ್ದಾರೆ.

ಅನುಸೂಚಿತ ಜಾತಿ/ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ: ಎಲ್. ಮೂರ್ತಿ ಅವರಿಂದ ಅಹವಾಲು ಸ್ವೀಕಾರ

--------------ಅರಣ್ಯ ಭೂಮಿಯಲ್ಲಿ ತಲತಲಾಂತರದಿಂದ ಸಾಗುವಳಿ ಮಾಡುತ್ತಿರುವ ಪರಿಶಿಷ್ಟರನ್ನು ಒಕ್ಕಲೆಬ್ಬಿಸದಂತೆ ಸೂಚನ

ಅನುಸೂಚಿತ ಜಾತಿ ಮತ್ತು ಬುಡಕಟ್ಟು ಸಮುದಾಯಗಳ ಕಲ್ಯಾಣಕ್ಕೆ ಮೀಸಲಾದ ಅನುದಾನ ಸಮರ್ಪಕ ಬಳಕೆಗೆ ಸಲಹೆ

-----------

ಕನ್ನಡಪ್ರಭ ವಾರ್ತೆ ತುಮಕೂರು

ತುಮಕೂರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳಿಗೆ ನಿಯಮಾನುಸಾರ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದಾಗಿ ಅನುಸೂಚಿತ ಜಾತಿ ಹಾಗೂ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ ಎಲ್. ಮೂರ್ತಿ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತಿಯಲ್ಲಿ ಬುಧವಾರ ಜಿಲ್ಲೆ ವಿವಿಧ ದಲಿತ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿಗೆ ಪ್ರತ್ಯೇಕವಾಗಿ ಸ್ಮಶಾನ ಭೂಮಿ ಕಲ್ಪಿಸಬೇಕೆಂದು ಸರ್ಕಾರದ ಆದೇಶವಿದೆ. ಈ ಆದೇಶಾನುಸಾರ ಜಿಲ್ಲೆಯ ಹಲವು ಕಡೆಗಳಲ್ಲಿ ಸ್ಮಶಾನ ಭೂಮಿ ಮಂಜೂರು ಮಾಡದಿರುವ ಬಗ್ಗೆ ಸಂಬಂಧಿತ ಸಮುದಾಯಗಳು ಜಿಲ್ಲಾಡಳಿತದ ಮೇಲೆ ದೂರಿತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಆದ್ಯತೆಯ ಮೇಲೆ ಸ್ಮಶಾನ ಭೂಮಿ ನೀಡುವಂತೆ ಆದೇಶಿಸಿರುವುದಾಗಿ ಅವರು ತಿಳಿಸಿದರು.

ಅಲ್ಲದೆ, ಈಗಾಗಲೇ ಸ್ಮಶಾನ ಭೂಮಿ ಮಂಜೂರು ಮಾಡಿದ್ದರೂ ಅಲ್ಲಿ ಸರಿಯಾದ ರಸ್ತೆ ಹಾಗೂ ಮೂಲಸೌಕರ್ಯಗಳಿಲ್ಲ ಎಂಬುದಾಗಿಯೂ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ವಹಿಸುವಂತೆ ಆದೇಶಿಸಿರುವುದಾಗಿ ಅವರು ತಿಳಿಸಿದರು. ಅರಣ್ಯ ಭೂಮಿಯಲ್ಲಿ ತಲತಲಾಂತರದಿಂದ ಸಾಗುವಳಿ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರನ್ನು ಒಕ್ಕಲೆಬ್ಬಿಸದಂತೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಂದೊಮ್ಮೆ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಸದ್ಯದಲ್ಲಿಯೇ ಒಕ್ಕಲೆಬ್ಬಿಸದಿರುವಂತೆ ಸರ್ಕಾರಿ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಅನುಸೂಚಿತ ಜಾತಿ ಮತ್ತು ಬುಡಕಟ್ಟು ಸಮುದಾಯಗಳ ಕಲ್ಯಾಣಕ್ಕಾಗಿ ಮೀಸಲಿರಿಸಿರುವ ವಿಶೇಷ ಘಟಕ ಉಪಯೋಜನೆಗಳ ಅನುದಾನವನ್ನು ಸಮರ್ಪಕವಾಗಿ ಉದ್ದೇಶಿತ ಕಾಮಗಾರಿಗಳಿಗೆ ವೆಚ್ಚ ಮಾಡಬೇಕು. ಒಂದೊಮ್ಮೆ ಸಮರ್ಪಕ ಅನುಷ್ಠಾನ ಆಗದಿದ್ದಲ್ಲಿ ಅಥವಾ ಕಾರ್ಯಕ್ರಮ ಅನುಷ್ಠಾನದಲ್ಲಿ ಲೋಪವೆಸಗಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಪ ಆಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಮೊಕದ್ದಮೆ ದಾಖಲಿಸುವಾಗ ಸಾಕ್ಷ್ಯಾಧಾರಗಳ ಕೊರತೆ ಅಥವಾ ನಿಯಮ ಮೀರಿ ಪ್ರಕರಣದ ಗಂಭೀರತೆಯನ್ನು ಅಲ್ಲಗಳೆಯುವಂತೆ ದಾಖಲಿಸುವ ಪ್ರಕರಣಗಳ ಬಗ್ಗೆ ಕೇಳಿ ಬಂದಿದೆ. ಈ ರೀತಿಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು. ಸದ್ಯದಲ್ಲಿಯೇ ರಾಜ್ಯಾದ್ಯಂತ ಎಲ್ಲಾ ನಾಗರಿಕ ಹಕ್ಕು ನಿರ್ದೇಶನಾಲಯದ ಠಾಣೆಗಳಲ್ಲಿ ಉಪ ಪೊಲೀಸ್ ಅಧೀಕ್ಷಕರ ನೇಮಕಾತಿ ಮಾಡುವಂತೆ ಗೃಹ ಇಲಾಖೆಗೆ ನಿರ್ದೇಶನ ನೀಡಲಾಗುವುದು ಎಂದು ಅವರು ಹೇಳಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜಮೀನುಗಳ ವರ್ಗಾವಣೆ ನಿಷೇಧ ಕಾಯ್ದೆಯನ್ವಯ ಮೂಲ ಸಾಗುವಳಿದಾರರಿಗೆ ಜಮೀನುಗಳನ್ನು ಹಿಂತಿರುಗಿಸುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಸಾಧನೆ ಮಾಡಲಾಗಿದೆ. ಕೆಲವು ಪ್ರಕರಣಗಳಲ್ಲಿ ದಾಖಲೆಯ ಕೊರತೆ ಇದ್ದರೂ ಸಹ ಸಂಬಂಧಿಸಿದ ಕೆಲವು ದಾಖಲೆಗಳನ್ನು ಆಧರಿಸಿ ನ್ಯಾಯಯುತವಾಗಿ ಜಮೀನನ್ನು ವಾಪಸ್ಸು ಪಡೆದು ಮೂಲ ಸಾಗುವಳಿದಾರರಿಗೆ ನೀಡಲು ಕ್ರಮವಹಿಸಲಾಗುತ್ತಿದೆ ಎಂದು ಅಧ್ಯಕ್ಷರು ತಿಳಿಸಿದರು. ಉಳಿದಂತೆ ಜಮೀನುಗಳ ಮೊಜಿಣಿ ಕಾರ್ಯ, ಹದ್ದುಬಸ್ತು, ಪೋಡಿ ಮತ್ತಿತರ ಪ್ರಕರಣಗಳು ಸರಿಯಾಗಿ ನಿರ್ವಹಣೆಯಾಗಿಲ್ಲ, ಅಂಬೇಡ್ಕರ್, ಜಗಜೀವನ್‌ರಾಂ ಹಾಗೂ ವಾಲ್ಮೀಕಿ ಭವನಗಳ ಸರಿಯಾದ ನಿರ್ವಹಣೆ ಹಾಗೂ ಪ್ರತಿ ಹೋಬಳಿಯಲ್ಲಿ ಭವನಗಳ ನಿರ್ಮಾಣಕ್ಕೆ ಕನಿಷ್ಠ ೧೦ ಗುಂಟೆ ಜಮೀನು ಮೀಸಲಿರಿಸುವುದು ಸೇರಿದಂತೆ ವಿವಿಧ ಅಹವಾಲುಗಳು ಸಮುದಾಯದಿಂದ ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮಕ್ಕೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.

ತಾವು ಆಯೋಗದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಮೂರು ತಿಂಗಳ ಅವಧಿಯಲ್ಲಿ 10 ಜಿಲ್ಲೆಗಳ ಪ್ರವಾಸ ಕೈಗೊಂಡು ಪರಿಶಿಷ್ಟ ಸಮುದಾಯಗಳ ಅಹವಾಲುಗಳನ್ನು ಸ್ವೀಕರಿಸಿದ್ದಾಗಿ ತಿಳಿಸಿದ ಅವರು, ಆಯೋಗದ ನ್ಯಾಯಾಲಯದಲ್ಲಿ ಬಾಕಿಯಿದ್ದ 3,850 ಪ್ರಕರಣಗಳಲ್ಲಿ 300 ಪ್ರಕರಣಗಳನ್ನು ಇತ್ಯರ್ಥಪಡಿಸಿ ನೊಂದವರಿಗೆ ನ್ಯಾಯದಾನ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಸದಸ್ಯ ಎಂ. ಕುಂಬಯ್ಯ ಹಾಗೂ ಕಾರ್ಯದರ್ಶಿ ಡಾ: ಎಚ್.ಎಸ್. ಶಿವರಾಮು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ದಲಿತ ಸಮುದಾಯದ ವಿವಿಧ ಮುಖಂಡರಿಂದ ಅಹವಾಲು ಸ್ವೀಕರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಸರ್ಕಾರದಲ್ಲೇ ಹೆಚ್ಚು ಕಮಿಷನ್‌ ವಸೂಲಿ: ಗುತ್ತಿಗೆದಾರರ ಸಂಘದ ಮಂಜುನಾಥ
ರಾಗಿ ಬೇಡಿಕೆ, ಬೆಲೆ ಹೆಚ್ಚಾಗಲಿದೆ: ಸುರೇಶ್‌ಗೌಡ ವಿಶ್ವಾಸ