ಹಾನಗಲ್ಲ: ಹಾನಗಲ್ಲಿನ ಎಪಿಎಂಸಿ ಹಾಗೂ ಬಸ್ಡಿಪೋ ಎದುರಿಗಿನ ತಡಸ್ ಗೊಂದಿ ರಸ್ತೆಯನ್ನು ಪೂರ್ವಾನುಮತಿ ಇಲ್ಲದೆ ಅಗೆದು, ವಾಹನ ಸಂಚಾರಕ್ಕೆ ವ್ಯತ್ಯಯ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಈಗ ಲೋಕೋಪಯೋಗಿ ಇಲಾಖೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ನೋಟಿಸ್ ನೀಡಿ ಕಾಮಗಾರಿ ಸ್ಥಗಿತಕ್ಕೆ ಸೂಚಿಸಿದೆ.
ಅಗೆದ ರಸ್ತೆ ಮರು ಕಾಮಗಾರಿಗೆ ತಗಲುವ ವೆಚ್ಚವನ್ನು ಭರಿಸಿ, ಇಲಾಖೆಯ ನಿಯಮಗಳನ್ವಯ ಪರವಾನಗಿ ಪಡೆದು ಕಾಮಗಾರಿ ಆರಂಭಿಸಬೇಕು. ಈಗಾಗಲೇ ಹಲವು ಬಾರಿ ಸೂಚನೆ ನೀಡಿದರೂ ನಮ್ಮ ಸೂಚನೆ ನಿರಾಕರಿಸಿರುವುದು ಸರಿ ಅಲ್ಲ. ಇನ್ನು ಪರವಾನಗಿ ಪಡೆಯದೇ ಕಾಮಗಾರಿ ಆರಂಭಿಸಿದರೆ ಕಾನೂನು ಕ್ರಮ ಅನಿವಾರ್ಯ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಸ್.ದೇವರಾಜ ಎಚ್ಚರಿಸಿದ್ದಾರೆ.
ನಿರಂತರ ಮಳೆ ಬೀಳುತ್ತಿರುವ ಸಂದರ್ಭದಲ್ಲಿ ರಸ್ತೆ ಅಗೆದಿದ್ದರಿಂದ ವಾಹನ ಓಡಾಟಕ್ಕೆ ಅನಾನುಕೂಲವಾಗಿದೆ. ಸಂಚಾರಕ್ಕೆ ಅನುಕೂಲಕರವಾದ ರಸ್ತೆಯನ್ನು ಎಲ್ಲೆಂದರಲ್ಲಿ ಅಗೆದಿರುವುದು, ಫುಟ್ಪಾತ್ ಇಲ್ಲದಂತಾಗಿರುವುದು, ಹಾನಗಲ್ಲ ಪಟ್ಟಣ ವ್ಯಾಪ್ತಿಯಲ್ಲಿ ಮೂರು ಕಿಮೀಗೂ ಅಧಿಕ ರಸ್ತೆ ಅಗೆಯುವುದು ಈ ಕಾಮಗಾರಿಯ ಅನಿವಾರ್ಯತೆ ಎನ್ನಲಾಗಿದೆಯಾದರೂ, ಅಗೆದ ರಸ್ತೆಯನ್ನು ಕೂಡಲೇ ಮರು ಕಾಮಗಾರಿ ಮಾಡಿ ಡಾಂಬರೀಕರಣ ಮಾಡುವುದು ತೀರ ಅಗತ್ಯ. ಈ ಬಗ್ಗೆ ಯಾವುದೇ ಕಾಳಜಿ ಇಲ್ಲದ ರಸ್ತೆ ಅಗೆದು ಪೈಪ್ಲೈನ್ ಹಾಕುತ್ತಿರುವುದು ಸಾರ್ವಜನಿಕರ ದೂರಿಗೆ ಕಾರಣವಾಗಿದೆ.ರಸ್ತೆ ಅಗೆದು ಪೈಪ್ಲೈನ್ ಹಾಕುತ್ತಿರುವುದರ ಬಗ್ಗೆ ಮೌಖಿಕವಾಗಿ ಬಂದ್ ಮಾಡಲು ತಿಳಿಸಲಾಗಿತ್ತು. ಆದಾಗ್ಯೂ ಮೇಘಾ ಕನಸ್ಟ್ರಕ್ಷನ್ ಏಜೆನ್ಸಿಯವರು ರಸ್ತೆ ಅಗೆಯಲು ಮುಂದಾಗಿರುವುದನ್ನು ತಡೆದು ನೋಟಿಸ್ ನೀಡಲಾಗಿದೆ. ಕಾನೂನು ರೀತಿಯಲ್ಲಿ ಪರವಾನಗಿ ಪಡೆದ ನಂತರವೇ ಕಾಮಗಾರಿಗೆ ಅವಕಾಶ ನೀಡಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಎಸ್.ದೇವರಾಜ ಹೇಳಿದರು.