ಕಾರ್ಕಳ: ಮಾನವನ ಅತಿಯಾದ ಹಸ್ತಕ್ಷೇಪದಿಂದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭೂ ಕುಸಿತ, ಬರ ಹಾಗೂ ವಿವಿಧ ಪ್ರಕೃತಿ ವಿಕೋಪಗಳು ಹೆಚ್ಚುತ್ತಿವೆ. ಸಾರ್ವಜನಿಕರು ಮತ್ತು ಸರ್ಕಾರ ಪರಿಸರಕ್ಕೆ ಮಾರಕವಾಗುವ ಯೋಜನೆಗಳನ್ನು ವಿರೋಧಿಸಿ ಪಶ್ಚಿಮ ಘಟ್ಟದ ಸಂರಕ್ಷಣೆಗೆ ಮುಂದಾಗಬೇಕು ಎಂದು ಕಲಾವಿದ ಹಾಗೂ ಪರಿಸರ ಪ್ರೇಮಿ ದಿನೇಶ್ ಹೊಳ್ಳ ಹೇಳಿದರು.ಹೆಬ್ರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಅಮೃತ ಭಾರತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ಪಶ್ಚಿಮ ಘಟ್ಟ ಉಳಿಸುವಲ್ಲಿ ಮಾಧ್ಯಮಗಳ ಹೊಣೆ’ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಹೆಬ್ರಿ ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಭಾರ್ಗವಿ ಆರ್. ಐತಾಳ್ ಮಾತನಾಡಿ, ಡಿಜಿಟಲ್ ಯುಗದಲ್ಲಿಯೂ ಮುದ್ರಣ ಮಾಧ್ಯಮದ ಮಹತ್ವ ಕಡಿಮೆಯಾಗಿಲ್ಲ. ಮಕ್ಕಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಅಮೃತ ಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ್ ಶೆಣೈ ಮಾತನಾಡಿ, ಪತ್ರಿಕೆಗಳು ಸಮಾಜದ ಪ್ರಮುಖ ಅಂಗ ಎಂದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಮಾತನಾಡಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರೇಂದ್ರ ಎಸ್. ಮರಸಣಿಗೆ ಅಧ್ಯಕ್ಷತೆ ವಹಿಸಿದ್ದರು.

ಪರಿಸರ ಪ್ರೇಮಿ ದಿನೇಶ್ ಹೊಳ್ಳ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧನೆಗಾಗಿ ಸಂಘದ ಸದಸ್ಯೆ ಧನ್ವಿ ಹೆಬ್ಬಾರ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಳೆದ 25 ವರ್ಷಗಳಿಂದ ಪತ್ರಿಕಾ ವಿತರಕರಾಗಿರುವ ಮಾಧವ ನಾಯಕ್ ಅವರನ್ನೂ ಸನ್ಮಾನಿಸಲಾಯಿತು.ಅಮೃತ ಭಾರತಿ ಟ್ರಸ್ಟ್‌ನ ಬಾಲಕೃಷ್ಣ ಮಲ್ಯ, ಯೋಗೀಶ ಭಟ್, ರಾಮಕೃಷ್ಣ ಆಚಾರ್ಯ, ವಿಜಯ ಕುಮಾರ್ ಶೆಟ್ಟಿ, ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕರು ಹಾಗೂ ಹೆಬ್ರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುಕುಮಾರ್ ಮುನಿಯಾಲ್, ಉಪಾಧ್ಯಕ್ಷ ಸಂಜೀವ ಆರ್.ಡಿ., ಕೋಶಾಧಿಕಾರಿ ಸುಮಲತಾ ಹೆಬ್ಬಾರ್ ಮತ್ತಿತರರಿದ್ದರು.


ಅಮೃತ ಭಾರತಿ ಶಿಕ್ಷಣ ಸಂಸ್ಥೆಯ ಸಂಸ್ಕೃತ ಶಿಕ್ಷಕ ಮಡಾಮಕ್ಕಿ ವೇದವ್ಯಾಸ ತಂತ್ರಿ ನಿರೂಪಿಸಿದರು. ನರೇಂದ್ರ ಎಸ್. ಮರಸಣಿಗೆ ಸ್ವಾಗತಿಸಿ, ಸಂಜೀವ ಆರ್.ಡಿ. ವಂದಿಸಿದರು.