ಉಡುಪಿ: ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಸ್ಥಾಪಿಸಲ್ಪಟ್ಟ ಸುಗುಣ ಶ್ರೀ ಭಜನಾ ಮಂಡಳಿಯ ಗುರುಗಳಾದ ಸಂಗೀತ ವಿದುಷಿ ಡಾ. ಉಷಾ ಹೆಬ್ಬಾರ್ ಅವರಿಗೆ ಗುರುಪೂರ್ಣಿಮೆಯ ನಿಮಿತ್ತ ಜು. 29 ರಂದು ಗುರುವಂದನ ಕಾರ್ಯಕ್ರಮ ನಡೆಯಿತು.
ಗೀತಾ ಮಂದಿರದ ಶ್ರೀ ಪುತ್ತಿಗೆ ನೃಸಿಂಹ ಆಡಿಟೋರಿಯಂನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀಮಠದ ದಿವಾನರಾದ ನಾಗರಾಜ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀಪುತ್ತಿಗೆ ಮಠದ ನಿಕಟಪೂರ್ವ ವಿಶ್ವಗೀತಾ ಪರ್ಯಾಯುದುದ್ದಕ್ಕೂ ಉಷಾ ಹೆಬ್ಬಾರ್ ಸಲ್ಲಿಸಿದ ಸೇವೆಯನ್ನು ನೆನಪಿಸಿಕೊಂಡ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಜೀಯವರು ಪಾಲ್ಗೊಂಡ ಯಶಸ್ವೀ ಲಕ್ಷ ಕಂಠ ಗೀತಾ ಪಾರಾಯಣ ಸಂದರ್ಭದಲ್ಲಿ ಅವರು ನೀಡಿದ ವಿಶೇಷ ತರಬೇತಿಯನ್ನು ಪ್ರಶಂಸಿಸಿ, ಇತ್ತೀಚೆಗೆ ಗೌರವ ಡಾಕ್ಟರೇಟ್ ಪಡೆದಿರುವುದಕ್ಕೆ ವಿಶೇಷ ಅಭಿನಂದನೆ ಸಲ್ಲಿಸಿದರು.ಕಾರ್ಯಕ್ರಮ ಆಯೋಜಿಸಿದ್ದ ಸುಗುಣ ಶ್ರೀಭಜನಾ ಮಂಡಳಿಯ ಯಶೋದ ಆರ್., ವಿದ್ಯಾ ರಾವ್, ಭಾರತಿ, ಬ್ರಾಹ್ಮಿ ಭಜನಾ ಮಂಡಳಿಯ ಆಶಾ ರಾವ್, ದಿವ್ಯಾ , ಬೆಂಗಳೂರಿನ ದಾಸ ನಮನ ಭಜನಾ ತಂಡದ ರಶ್ಮಿ, ಉಷಾ ಹೆಬ್ಬಾರ್ ಪುತ್ರ ಕೌಶಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮೂರು ತಂಡಗಳ ವತಿಯಿಂದ ಶಾಲು, ಸೀರೆ, ಹಾರ, ಫಲತಾಂಬೂಲ, ಅರಸಿನ ಕುಂಕುಮ, ಸ್ಮರಣಿಕೆ, ಗುರುದಕ್ಷಿಣೆ ಸಹಿತ ಗುರುವಂದನೆ ಸಲ್ಲಿಸಲಾಯಿತು.
ಅಭಿನಂದನಾ ಮಾತುಗಳನ್ನಾಡಿದ ಶ್ರೀಮಠದ ವಿದ್ವಾನ್ ಕೆ.ವಿ. ರಮಣಾಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 200 ಕ್ಕೂ ಅಧಿಕ ಭಜನಾ ಶಿಷ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.