ಬಳ್ಳಾರಿ: ಕೇಂದ್ರ ಸರ್ಕಾರದಿಂದ ಮನರೇಗಾ ಹೆಸರನ್ನು ವಿಬಿ- ಜಿ ರಾಮ್ ಜಿ ಎಂದು ಬದಲಾವಣೆ ಮಾಡಿದ ಹಿನ್ನೆಲೆ ಕಾಂಗ್ರೆಸ್ನಿಂದ ಅನೇಕ ಗೊಂದಲಗಳನ್ನು ಸೃಷ್ಟಿಸಿ ಜನರನ್ನು ದಿಕ್ಕು ತಪ್ಪಿಸಲು ಮುಂದಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಗಾಂಧೀಜಿ ಕಾಣುವ ದೇವರು, ಶ್ರೀರಾಮ ಕಾಣದ ದೇವರು. ಹೀಗಾಗಿ, ಗಾಂಧೀಜಿ ಬೇರೆ ಅಲ್ಲ ಹಾಗೂ ರಾಮ ಬೇರೆ ಅಲ್ಲ. ಅಂದು ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ, ಈಗಿನ ನಕಲಿ ಗಾಂಧಿಗಳು ಹಣ ಲೂಟಿ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಗಾಂಧೀಜಿ ಹೆಸರು ಹೇಳಲು ಯಾವ ನೈತಿಕತೆಯಿಲ್ಲ. ಈಗ ಹೆಸರು ಬದಲಾವಣೆ ಮಾಡಿದೆ ಎಂದು ಗೊಂದಲ ಸೃಷ್ಟಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಕೆಡಿಸಲು ಕಾಂಗ್ರೆಸ್ನಿಂದ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಇದು ಎಲ್ಲ ಬೋಗಸ್. ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಪ್ರಧಾನಿ ಮೋದಿ ಅವರನ್ನು ತೆಗಳುವ ಕಾರ್ಯ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕ ಸೇರಿ ದೇಶದ ಮೂರು ರಾಜ್ಯಗಳಲ್ಲಿಯೂ ಕಾಂಗ್ರೆಸ್ ಸಂಪೂರ್ಣವಾಗಿ ನಿರ್ನಾಮವಾಗುತ್ತದೆ ಎಂದರು.
ಹುಬ್ಬಳ್ಳಿಯಲ್ಲಿನ ಮಹಿಳೆಯ ವಿವಸ್ತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮಹಿಳೆಗೆ ಅಪಮಾನವಾಗಿದ್ದು, ಇದಕ್ಕೆ ಸರ್ಕಾರವೇ ಕಾರಣವಾಗಿದೆ. ಆಂಧ್ರ, ಕೇರಳ ಸೇರಿ ನಾನಾ ಭಾಗದ ಗಡಿಭಾಗದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸುವ ಕಾರ್ಯ ರಾಜ್ಯ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿಮಾಜಿ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಟಿ.ಎಚ್. ಸುರೇಶ್ ಬಾಬು ಇದ್ದರು.