ಎಂ.ಎಸ್. ಶಿವಶೆಟ್ಟಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು, ಸಂಯಮ, ಉತ್ತಮ ನಾಯಕತ್ವ, ವೃತ್ತಿ ಗೌರವ, ಸಹಬಾಳ್ವೆ, ಭ್ರಾತೃತ್ವ, ಜಾತ್ಯತೀತತೆ, ಭಾವೈಕ್ಯತೆ ಹಾಗೂ ಜವಾಬ್ದಾರಿಯುತ ವ್ಯಕ್ತಿತ್ವ ಹಾಗೂ ಉತ್ತಮ ಧ್ಯೇಯ ಹಾಗೂ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಮುಂಡರಗಿ: ವಿದ್ಯಾರ್ಥಿಗಳಲ್ಲಿ ಬಾಹುಬಲ, ಬುದ್ಧಿಶಕ್ತಿ, ಆದರ್ಶ, ಉತ್ಸಾಹ ಇದ್ದು, ಸಮಾಜದ ಅಭಿವೃದ್ಧಿಗಾಗಿ ದುಡಿಯಬೇಕೆಂಬ ಹಂಬಲವೂ ಅವರಲ್ಲಿದೆ. ಶಕ್ತಿ, ಉತ್ಸಾಹಗಳನ್ನು ಸದುಪಯೋಗ ಪಡೆದುಕೊಂಡು ಅವರನ್ನು ಕ್ರಿಯಾತ್ಮಕ ಕಾರ್ಯಚಟುವಟಿಕೆಗೆ ತೊಡಗಿಸುವುದೇ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಉದ್ದೇಶವಾಗಿದೆ ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಕ.ರಾ. ಬೆಲ್ಲದ ಮಹಾವಿದ್ಯಾಲಯದ ಸಭಾಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ ವಿಭಾಗ), ಉಪನಿರ್ದೇಶಕರ ಕಚೇರಿ ಹಾಗೂ ಶ್ರೀ ಜ.ಅ. ವಿದ್ಯಾ ಸಮಿತಿಯ ಜ. ಅ. ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಮಹಿಳಾ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಮುಂಡರಗಿ, ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಆಶ್ರಯದಲ್ಲಿ ಜರುಗಿದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಜ. 17 ಹಾಗೂ 18ರಂದು ಅನ್ನದಾನೀಶ್ವರ ವಿದ್ಯಾಸಮಿತಿಯ ಶತಮಾನೋತ್ಸವ ಸಂಭ್ರಮ ಜರುಗುತ್ತಿದ್ದು, ಅದಕ್ಕಾಗಿ ಇಡೀ ಕಾಲೇಜಿನ ಆವರಣವನ್ನು ಸ್ವಚ್ಛ ಹಾಗೂ ಸುಂದರಗೊಳಿಸಿ, ಸುಣ್ಣ, ಬಣ್ಣಗಳನ್ನು ಹಚ್ಚಿ ಅಲಂಕಾರ ಮಾಡಿಸುತ್ತಿದ್ದು, ಯಾವುದೇ ವಿದ್ಯಾರ್ಥಿಗಳು ಗೋಡೆಯ ಮೇಲೆ ವಿನಾಕಾರಣ ಏನಾದರೂ ಗೀಚುವುದು, ಬಣ್ಣವನ್ನು ಅಂದಗೆಡಿಸುವುದು ಮಾಡಬಾರದು. ಎಲ್ಲರೂ ಸೇರಿ ಹಬ್ಬದಂತೆ ಆಚರಿಸಬೇಕು ಎಂದರು.ಅನ್ನದಾನೀಶ್ವರ ಮಹಿಳಾ ಪಪೂ ಕಾಲೇಜಿನ ಕಾರ್ಯಾಧ್ಯಕ್ಷ ಎಂ.ಎಸ್. ಶಿವಶೆಟ್ಟಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು, ಸಂಯಮ, ಉತ್ತಮ ನಾಯಕತ್ವ, ವೃತ್ತಿ ಗೌರವ, ಸಹಬಾಳ್ವೆ, ಭ್ರಾತೃತ್ವ, ಜಾತ್ಯತೀತತೆ, ಭಾವೈಕ್ಯತೆ ಹಾಗೂ ಜವಾಬ್ದಾರಿಯುತ ವ್ಯಕ್ತಿತ್ವ ಹಾಗೂ ಉತ್ತಮ ಧ್ಯೇಯ ಹಾಗೂ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದರು.ಜ.ಅ.ಸಂ.ಪ.ಪೂ. ಕಾಲೇಜಿನ ಕಾರ್ಯಾಧ್ಯಕ್ಷ ಕರಬಸಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಶತಮಾನೋತ್ಸವ ಸಂಭ್ರಮದಲ್ಲಿರುವ ನಮ್ಮ ವಿದ್ಯಾ ಸಮಿತಿ ಗ್ರಾಮೀಣ ಭಾಗದಲ್ಲಿ 30ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಚನ್ನಬಸವ ಸ್ವಾಮೀಜಿ, ಪ್ರೊ. ಆರ್.ಎಲ್. ಪೊಲೀಸಪಾಟೀಲ, ಶಿಬಿರಾಧಿಕಾರಿ ಶ್ರೀಕಾಂತ ಎಂ.ಎಲ್. ಉಪಸ್ಥಿತರಿದ್ದರು. ಜ.ಅ. ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಮಾತನಾಡಿದರು. ಜ.ಅ.ಸಂ.ಪ.ಪೂ. ಕಾಲೇಜಿನ ಪ್ರಾ. ಪಿ.ಎಂ. ಕಲ್ಲನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನ್ನದಾನೀಶ್ವರ ಮಹಿಳಾ ಪ.ಪೂ. ಕಾಲೇಜಿನ ಪ್ರಾ. ಐ.ಎನ್. ಪೂಜಾರ ಸ್ವಾಗತಿಸಿದರು. ಉಪನ್ಯಾಸಕ ಹರ್ತಿ ನಿರೂಪಿಸಿದರು. ಶಿಬಿರಾಧಿಕಾರಿ ಮಂಜುನಾಥ ಲೆಂಡ್ವೆ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.