ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ದೇಶಪ್ರೇಮ, ಸಾಮಾಜಿಕ ಸಕ್ರೀಯವಾಗಿರಲು ಎನ್ನೆಸ್ಸೆಸ್‌ ಪೂರಕ

KannadaprabhaNewsNetwork | Published : Jun 16, 2025 1:08 AM

ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚುಸುವಲ್ಲಿ ಎನ್ನೆಸ್ಸೆಸ್‌ ಪ್ರಮುಖ ಪಾತ್ರ ವಹಿಸಿದೆ. ಯುವಕರಲ್ಲಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಬೆಳೆಯಲು ನಾಯಕತ್ವದ ಅವಶ್ಯಕತೆ ಇದ್ದು, ಅದು ಎನ್ನೆಸ್ಸೆಸ್‌ನಿಂದ ಸಾಧ್ಯ.

ಧಾರವಾಡ: ಯುವ ಜನರಲ್ಲಿ ದೇಶಪ್ರೇಮ‌ ಬೆಳೆಸುವಲ್ಲಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಎನ್ನೆಸ್ಸೆಸ್‌ ಯೋಜನೆ ಪೂರಕವಾಗಿದೆ ಎಂದು ನವದೆಹಲಿಯ ವರ್ಲ್ಡ್ ಯೂತ್ ಆರ್ಗನೈಸೇಷನ್‌ ಅಧ್ಯಕ್ಷ ಡಾ. ಜಾವೀದ್ ಜಮಾದಾರ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯ ಎನ್ನೆಸ್ಸೆಸ್‌ ಕೋಶವು ಕವಿವಿ ಗಾಂಧಿ ಭವನದಲ್ಲಿ ಆಯೋಜಿಸಿದ ಏಳು ದಿನಗಳ ನಾಯಕತ್ವದ ತರಬೇತಿ ಶಿಬಿರದ ಸಮಾರೋಪದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚುಸುವಲ್ಲಿ ಎನ್ನೆಸ್ಸೆಸ್‌ ಪ್ರಮುಖ ಪಾತ್ರ ವಹಿಸಿದೆ. ಯುವಕರಲ್ಲಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಬೆಳೆಯಲು ನಾಯಕತ್ವದ ಅವಶ್ಯಕತೆ ಇದ್ದು, ಅದು ಎನ್ನೆಸ್ಸೆಸ್‌ನಿಂದ ಸಾಧ್ಯ ಎಂದರು.

ಸಿಂಡಿಕೇಟ್ ಸದಸ್ಯ ರಾಬರ್ಟ್‌ ದದ್ದಾಪೂರಿ ಮಾತನಾಡಿ, ತಂದೆ- ತಾಯಿ, ಗುರು- ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ವಿದ್ಯಾರ್ಥಿಗಳು ಕಲಿಯಬೇಕು. ಜತೆಗೆ ದೇಶಪ್ರೇಮ ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವವನ್ನು ಬೆಳೆಸಿಕೊಂಡು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂಬ ಸಲಹೆ ನೀಡಿದರು.

ಕವಿವಿ ಎನ್ನೆಸ್ಸೆಸ್‌ ಕೋಶದ ಸಂಯೋಜಕ ಡಾ. ಎಂ.ಬಿ. ದಳಪತಿ, ರಾಜ್ಯದಲ್ಲೇ ಕರ್ನಾಟಕ ವಿಶ್ವದ್ಯಾಲಯದಲ್ಲಿ ಸುಮಾರು 19,500 ಸ್ವಯಂ ಸೇವಕರಿದ್ದಾರೆ. ಇಲ್ಲಿಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ದೇಶದಲ್ಲಿ ಮಾದರಿ ವಿಶ್ವವಿದ್ಯಾಲಯವಾಗಿದೆ. ಇಲ್ಲಿಯ ಉತ್ತಮ ಎನ್.ಎಸ್.ಎಸ್ ಸ್ವಯಂ ಸೇವಕರಿಗೆ ಮತ್ತು ಅಧಿಕಾರಿಗಳಿಗೆ ಡಾ.ಡಿ.ಸಿ.ಪಾವಟೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸುಮಾರು 6000 ಹಳ್ಳಿಗಳಲ್ಲಿ ಶೌಚಾಲಯಗಳನ್ನು ಎನ್.ಎಸ್.ಎಸ್ ಮೂಲಕ ನಿರ್ಮಿಸಲಾಗಿದೆ. ಗ್ರಾಮಗಳಲ್ಲಿರುವ ಕೆರಗಳನ್ನು ದತ್ತು ತೆಗೆದುಕೊಂಡು ಕೆರೆಯನ್ನು ಅಭಿವೃದ್ಧಿ ಮಾಡಲಾಗಿದೆ ಎಂಬ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಪರೀಕ್ಷಾಂಗ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿ, ನಾಯಕನಾದವನು ಮಹತ್ವಾಕಾಂಕ್ಷೆ ಒಳಗೊಂಡಿರಬೇಕು, ಕ್ರಿಯಾಶೀಲತೆಯನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿರಬೇಕು.‌ ಸಾಮಾನ್ಯ ವ್ಯಕ್ತಿ ನಾಯಕನಾಗ ಬೇಕಾದರೆ ಅನೇಕ ಸವಾಲುಗಳಿವೆ. ಅವುಗಳನ್ನು ಮೆಟ್ಟಿನಿಂತು ನಾಯಕನಾಗಿ ಹೊರಹೊಮ್ಮಬೇಕು ಎಂದರು.

ಸಿಂಡಿಕೇಟ್‌ನ ಇನ್ನೋರ್ವ ಸದಸ್ಯ ಡಾ. ಬಸವರಾಜ ಗೊರವರ ಮಾತನಾಡಿದರು. ಏಳು ದಿನಗಳ ‌ಕಾಲ‌ ನಡೆದ ನಾಯಕತ್ವ ಶಿಬಿರದ ಕುರಿತು ಅನಿಸಿಕೆ ಹಂಚಿಕೊಂಡರು. ಡಾ‌. ಎನ್.ಎಸ್‌. ತಳವಾರ, ಡಾ‌. ಎಸ್.ಎಸ್. ದೊಡಮನಿ, ಪ್ರೊ. ಕೊಟಬಾಗಿ, ಪ್ರೊ. ಮಂಜುನಾಥ, ಪ್ರೊ. ರವಿ ಶೇಷಗಿರಿ, ಪ್ರೊ. ದಯಾನಂದ ಹಟ್ಟಿ, ಪ್ರೊ. ಶಿವಯೋಗಿ ಹಾವೇರಿ ಸೇರಿದಂತೆ ಹಲವರಿದ್ದರು.