ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಪಂ ಕಾವೇರಿ ಸಭಾಂಗಣದಲ್ಲಿ ಎರಡು ದಿನಗಳ ಕೃಷಿ ಉದ್ಯಮಶೀಲ ಅಧಿವೇಶನದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದರು. ಪ್ರಸ್ತುತ ಅಡಿಕೆ ಉತ್ಪಾದನೆ ಮಿತಿ ಮೀರಿದೆ. ಮಲೆನಾಡಿಗಷ್ಟೇ ಸೀಮಿತವಾಗಿದ್ದ ಅಡಿಕೆ ಬೆಳೆ ಈಗ ಕರಾವಳಿ, ಬಯಲುಸೀಮೆಗೆ ವ್ಯಾಪಿಸಿದೆ. ಎಲ್ಲೆಡೆ ಹೇರಳವಾಗಿ ಅಡಿಕೆ ಉತ್ಪಾದನೆಯಾಗುತ್ತಿದೆ. ಬೇಡಿಕೆಗಿಂತಲೂ ಅತಿ ಹೆಚ್ಚು ಅಡಿಕೆ ಮಾರುಕಟ್ಟೆಗೆ ಬರುತ್ತಿರುವುದರಿಂದ ಹಾಗೂ ಅಡಿಕೆ ಬೆಳೆಯುವ ಜಿಲ್ಲೆಗಳು ವಿಸ್ತರಣೆಯಾಗುತ್ತಲೇ ಇರುವುದರಿಂದ ಬೆಲೆಯಲ್ಲಿ ಸ್ಥಿರತೆಯನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ಸೂಚ್ಯವಾಗಿ ಹೇಳಿದರು.
ಎಂಬತ್ತರ ದಶಕದಲ್ಲಿ ಪ್ರತಿ ಕೆ.ಜಿ. ಅಡಿಕೆ ಬೆಲೆ ೯ ರಿಂದ ೧೮ ರು.ಗಳಿತ್ತು. ೧೯೯೦ರಲ್ಲಿ ೧೦೦ ರು. ಇದ್ದ ಅಡಿಕೆ ಬೆಲೆ ಈಗ ೬೦೦ ರು. ತಲುಪಿದೆ. ಹಾಗಂತ ಅಡಿಕೆ ಬೆಳೆಯಬೇಡಿ ಎನ್ನುವುದಿಲ್ಲ. ೧೦ ಎಕರೆ ಭೂಮಿ ಇದ್ದರೆ ಎರಡು ಎಕರೆಯಲ್ಲಿ ಅಡಿಕೆ ಬೆಳೆದು ಉಳಿದ ಜಮೀನನಲ್ಲಿ ಆಹಾರೋತ್ಪನಗನಳನ್ನು ಬೆಳೆಯಿರಿ ಎಂದು ಸಲಹೆ ನೀಡಿದರು.ಕೃಷಿ ಕ್ಷೇತ್ರಕ್ಕೆ ಎಂದಿಗೂ ಸಾವಿಲ್ಲ. ಕೂಲಿಯಾಳುಗಳ ಕೊರತೆ ಕಾಡುತ್ತಿರಬಹುದು. ಆದರೆ, ಮನುಷ್ಯನಿಗೆ ತಿನ್ನಲು ಬೇಕಿರುವುದು ಆಹಾರ. ಅದನ್ನು ಬೆಳೆದೇ ತಿನ್ನಬೇಕು. ಹಾಗಾಗಿ ಕೃಷಿಯನ್ನು ಕಡೆಗಣಿಸದೆ ಶ್ರಮದಿಂದ ದುಡಿದು ಅತ್ಯುತ್ತಮ ಗುಣಮಟ್ಟದ ಆಹಾರೋತ್ಪನ್ನಗಳನ್ನು ಮಾರುಕಟ್ಟೆಗೆ ತನ್ನಿ. ವಿಷಮುಕ್ತ ಆಹಾರವೆಂಬ ಲೇಬಲ್ ಬಿದ್ದರೆ ಆ ಉತ್ಪನ್ನಗಳಿಗೆ ಇಡೀ ವಿಶ್ವದ್ಲೇ ಮಾರುಕಟ್ಟೆ ಸೃಷ್ಟಿಯಾಗಲಿದೆ. ಮೌಲ್ಯವೂ ಹೆಚ್ಚಳವಾಗಲಿದೆ ಎಂದು ನುಡಿದರು.
ಜಿಲ್ಲೆಯಲ್ಲೇ ಮೊದಲ ಬಾರಿಗೆ ರೈತ ಬಜಾರ್ ಜಿಲ್ಲಾ ಪಂಚಾಯ್ತಿ ಕಚೇರಿ ಪಕ್ಕದಲ್ಲೇ ಶನಿವಾರದಿಂದ ಕಾರ್ಯಾರಂಭಗೊಂಡಿದೆ. ರಾಜ್ಯದಲ್ಲಿರುವ ೧೨೦೦ ರೈತ ಉತ್ಪಾದಕ ಕಂಪನಿಗಳ ಪೈಕಿ ಸುಮಾರು ೨೦ ಜಿಲ್ಲೆಗಳ ರೈತ ಉತ್ಪಾದಕ ಕಂಪನಿಗಳಿಂದ ೨೦ಕ್ಕೂ ಹೆಚ್ಚು ಉತ್ಪನ್ನಗಳಿಗೆ ಬ್ರ್ಯಾಂಡ್ ರೂಪ ನೀಡಿ ಮಾರಾಟಕ್ಕಿಡಲಾಗಿದೆ. ಜಿಲ್ಲಾ ಮಹಿಳಾ ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು, ಸಂಜೀವಿನಿ ಒಕ್ಕೂಟದವರು ತಯಾರಿಸುವ ಆಹಾರೋತ್ಪನ್ನಗಳನ್ನು ಪ್ಯಾಕಿಂಗ್ ಮಾಡಿ ಮಾರಾಟ ಮಾಡಲಾಗುವುದು. ಬೆಲ್ಲ, ಅಕ್ಕಿ, ಅಡುಗೆ ಎಣ್ಣೆ, ತರಕಾರಿ, ಹಣ್ಣು ಸೇರಿದಂತೆ ಎಲ್ಲ ಬಗೆಯ ಉತ್ಪನ್ನಗಳನ್ನು ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ದರದಲ್ಲಿ ಗ್ರಾಹಕರಿಗೆ ಸಿಗಲಿದೆ.