ನ್ಯಾಮತಿ: ನ್ಯಾಮತಿ ತಾಲೂಕು ರಚನೆಯಾಗಿ ಹಲವು ವರ್ಷಗಳು ಕಳೆದಿವೆ. ಆದರೆ ಪಟ್ಟಣದಲ್ಲಿ ತಾಲೂಕಿಗೆ ಸಂಬಂಧಿಸಿದ ಯಾವುದೇ ವಿಭಾಗಗಳ ಸರ್ಕಾರಿ ಕಚೇರಿಗಳೇ ಇಲ್ಲ. ನ್ಯಾಮತಿ ಎಂಬುದು ಹೆಸರಿಗೆ ಮಾತ್ರ ತಾಲೂಕು ಎನಿಸಿಕೊಂಡಿದೆ ಎಂದು ನಿವೃತ್ತ ತಹಶೀಲ್ದಾರ್ ಎನ್.ನಾಗರಾಜ್ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ದೇಗುಲದ ಆವರಣದಲ್ಲಿ ತಾಲೂಕಿಗೆ ಸಂಬಂಧಿಸಿದಂತೆ ಕಚೇರಿ ಕಟ್ಟಡಗಳ ಬಗ್ಗೆ ನಡೆದ ಚರ್ಚಾ ಸಭೆ ನೇತೃತ್ವ ವಹಿಸಿ ಅವರು ಮಾತನಾಡಿದರು.ನ್ಯಾಮತಿ- ಕೋಡಿಕೊಪ್ಪ ರಸ್ತೆಯ ಬಲಭಾಗದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಜಾಗವನ್ನು ಹೊರತುಪಡಿಸಿ, ಅದರ ಹಿಂಭಾಗದಲ್ಲಿರುವ ಜಾಗದಲ್ಲಿ ತಾಲೂಕು ಕಚೇರಿ ಕಟ್ಟಡ ಕಟ್ಟಲು ಈಗಾಗಲೇ ಸರ್ಕಾರವು ₹8.60 ಕೋಟಿ ಮಂಜೂರು ಮಾಡಿದೆ. ಆದ್ದರಿಂದ ನಾವೆಲ್ಲರೂ ಒಮ್ಮತದಿಂದ ತಾಲೂಕು ಕಚೇರಿ ಕಟ್ಟಡವನ್ನು ಕಟ್ಟಲು ಭೂಮಿಪೂಜೆ ನೆರವೇರಿಸಿ, ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಬೇಕೆಂದು ಶಾಸಕ ಡಿ.ಜಿ.ಶಾಂತನಗೌಡ ಅವರಿಗೆ ಮನವಿ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಅನುಕೂಲ ಆಗುವಂತೆ ನೂತನ ಆಸ್ಪತ್ರೆ ನಿರ್ಮಿಸಬೇಕು. ಈ ಕಟ್ಟಡಕ್ಕೆ ಪಟ್ಟಣದ ಸಂತೆ ಮೈದಾನದ ಜಾಗ ಸೂಕ್ತವಾಗಿದೆ. ಕೋರ್ಟ್ ಕಟ್ಟಡ ಪಟ್ಟಣದಲ್ಲಿಯೇ ಆಗಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ. ಇದಕ್ಕೆ ಜಾಗವನ್ನು ಗುರುತುಪಡಿಸಬೇಕಿದೆ. ತಾತ್ಕಾಲಿಕವಾಗಿ ಕೋರ್ಟ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರಾರಂಭಿಸಬಹುದು ಎಂಬ ಕುರಿತು ಸಾರ್ವಜನಿಕರೊಂದಿಗೆ ಮುಖಾಮುಖಿ ಚರ್ಚೆ ಮಾಡಲಾಯಿತು.ಎಚ್.ವಿರೂಪಾಕ್ಷಪ್ಪ, ಗೋಲ್ಡ್ಸ್ಮಿತ್ ರತ್ನಾಕರ, ಎನ್.ಆರ್. ಸುಂದ್ರೇಶ್, ಜೆ.ಹಂಪಣ್ಣ, ಕುಂಬಾರ ಶಿವರಾಜ್, ರೆಡ್ಡಿ ಸತೀಶ್, ಸಿ.ಕೆ.ಸುರೇಶ್, ಗಾರೆ ಷಣ್ಮುಖಪ್ಪ, ಪೂಜಾರ್ ಚಂದ್ರಶೇಖರ್, ವಿಜೇಂದ್ರ ಮಹೇಂದ್ರಕರ್, ಡೈರಿ ಚಂದ್ರು, ಬುದ್ಧವಂತ ಸದಾಶಿವ, ಡಿಶ್ ವೀರಭದ್ರಪ್ಪ ಮತ್ತಿತರರಿದ್ದರು.
- - -