;Resize=(412,232))
ಬೆಂಗಳೂರು : ಮಾದಿಗ-ಛಲವಾದಿ ಸಮುದಾಯದವರು ತಾವು ಯಾವ ಗುಂಪಿಗೆ ಸೇರಿದ್ದೇವೆಂಬ ಕುರಿತು ಸೋಮವಾರದಿಂದ ಅಧಿಕೃತವಾಗಿ ಪ್ರಮಾಣ ಪತ್ರ ಪಡೆಯಬಹುದು ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಸಮಾಜ ಕಲ್ಯಾಣ, ಕಂದಾಯ, ಇ-ಆಡಳಿತ ಈ ಮೂರು ಇಲಾಖೆಗಳು ತಂತ್ರಾಂಶವನ್ನು ಸಿದ್ಧಪಡಿಸಿದ್ದವು. ಆದರೆ, ಒಳಮೀಸಲಾತಿ ಸೌಲಭ್ಯದಡಿ ವೈದ್ಯಕೀಯ (ಎಂಎಸ್ಎಂಡಿ) ಸೀಟು ಪಡೆಯಲು ಜಾತಿ ಪ್ರಮಾಣ ಪತ್ರ ಮಂಡಿಸಬೇಕೆಂಬ ಆದೇಶ 15 ದಿನದಿಂದ ಗೊಂದಲದೊಂದಿಗೆ ಆತಂಕಕ್ಕೆ ಎಡೆ ಮಾಡಿತ್ತು ಎಂದಿದ್ದಾರೆ.
ಈ ಕುರಿತು ಗುರುವಾರ ಮುಖ್ಯಮಂತ್ರಿ ಭೇಟಿ ಮಾಡಲಾಗಿತ್ತು. ತಕ್ಷಣವೇ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದರು. ಅದರಂತೆ ಕರ್ನಾಟಕ, ಗ್ರಾಮ ಒನ್ ಸೇರಿ ಸರ್ಕಾರಿ ಅಧೀನದಲ್ಲಿರುವ ಸೇವಾ ಕೇಂದ್ರಗಳಲ್ಲಿ ಜಾತಿ ಪ್ರಮಾಣ ಪತ್ರ ನೀಡಲು ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಸೋಮವಾರದಿಂದ ಮಾದಿಗ ಮೂಲ ಜಾತಿಯವರು ಜಾತಿಸೂಚಕ ಆದಿಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರಕ್ಕೆ ಸೇರಿದವರಾಗಿದ್ದರೆ ಪ್ರವರ್ಗ ಎ, ಹೊಲೆಯ ಮೂಲ ಜಾತಿಯವರು ಜಾತಿಸೂಚಕ ಆದಿಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರಕ್ಕೆ ಸೇರಿದವರಾಗಿದ್ದರೆ ಪ್ರವರ್ಗ ಬಿ ಗುಂಪು ಎಂದು ಪ್ರಮಾಣ ಪತ್ರ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.
ಈ ಪ್ರಮಾಣ ಪತ್ರ ಪಡೆದವರು ಒಳಮೀಸಲಾತಿಯಡಿ ಶಿಕ್ಷಣ, ಉದ್ಯೋಗ, ಸಾಲ, ಮನೆ, ಕೊಳವೆಬಾವಿ ಸೇರಿ ಎಲ್ಲ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರು ಒಳಮೀಸಲಾತಿ ಜಾರಿಗೊಳಿಸಿ ಸಾಮಾಜಿಕ ನ್ಯಾಯದ ಪರವೆಂಬ ಬದ್ಧತೆ ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದಾರೆ.
ಒಳಮೀಸಲಾತಿ ಸೌಲಭ್ಯದಡಿ ವೈದ್ಯಕೀಯ ಸೌಲಭ್ಯ ಸೀಟು ಪಡೆಯಲು ಇದ್ದ ಸಮಸ್ಯೆ ನಿವಾರಣೆಯಾಗಿದೆ. ಮಾದಿಗ- ಛಲವಾದಿ ಸಮುದಾಯದವರು ತಾವು ಯಾವ ಗುಂಪಿಗೆ ಸೇರಿದ್ದೇವೆಂಬ ಪ್ರಮಾಣ ಪತ್ರ ಪಡೆಯಲು ಇದ್ದ ಗೊಂದಲಗಳನ್ನು ಇದೀಗ ಬಗೆಹರಿಸಲಾಗಿದೆ. ಸೋಮವಾರದಿಂದಲೇ ಈ ವರ್ಗೀಕರಣದ ಪ್ರಮಾಣ ಪತ್ರ ಪಡೆದುಕೊಳ್ಳಬಹುದು.
ಎಚ್.ಆಂಜನೇಯ, ಮಾಜಿ ಸಚಿವ