ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು

KannadaprabhaNewsNetwork | Published : Jun 19, 2025 12:35 AM

ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಬೇಕು ಎಂದು ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ಹೇಳಿದರು.

ಹೊಳೆಹೊನ್ನೂರು: ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಬೇಕು ಎಂದು ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ಹೇಳಿದರು.

ಸಮೀಪ ಮಾರಶೆಟ್ಟಿಹಳ್ಳಿಯ ಛತ್ರಪತಿ ಶಿವಾಜಿ ಮರಾಠ ಸಮುದಾಯ ಭವನದಲ್ಲಿ ನಡೆದ ತಾಲೂಕಿನ ಕುಂದೂಕೊರತೆ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಭಾಗದಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ವಿನಾ ಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಸಾಕಷ್ಟು ಅರ್ಜಿಗಳು ಬಂದಿವೆ. ಯಾವುದೇ ಕಾರಣಕ್ಕೂ ಸಾಗುವಳಿ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಳೆದೊಂದು ವರ್ಷದಿಂದ ಗ್ರಾಮಾಂತರ ಕ್ಷೇತ್ರದಲ್ಲಿ ಬಗರ್ ಹುಕುಂ ಸಂಬಂಧಿಸಿದ ಸಮಸ್ಯೆಗಳೆ ಹೆಚ್ಚಾಗುತ್ತಿವೆ. ಬಹುತೇಕ ಪ್ರಕರಣಗಳಲ್ಲಿ ಅರಣ್ಯ ಸಿಬ್ಬಂದಿಗಳು ಹಾಗೂ ರೈತರ ಸಂಘರ್ಷಗಳು ತಾರಕ್ಕಕೇರಿವೆ. ರಾಜ್ಯದಲ್ಲಿ ಎಲ್ಲಿಯೂ ಇಲ್ಲದ ಅರಣ್ಯ ಸಮಸ್ಯೆ ಗ್ರಾಮಾಂತರದಲ್ಲಿ ಹೆಚ್ಚಾಗಿದೆ. ಅರಣ್ಯದಂಚಿನ ಜಮೀನುಗಳಲ್ಲಿ ಸಾಗುವಳಿ ರೈತರ ಸಂಕಷ್ಟಗಳು ತಪ್ಪುತ್ತಿಲ್ಲ. ಮಳೆಗಾಲ ಆರಂಭವಾಗಿರುವುದರಿಂದ ಜನತೆಯ ಆರೋಗ್ಯ ಕಾಳಜಿ ಬಗ್ಗೆ ಮುತುವರ್ಜಿ ವಹಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಇಲ್ಲದಂತೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸಭೆಯಲ್ಲಿದ ತಾಲೂಕು ವೈದ್ಯಾಧಿಕಾರಿಗಳಿಗೆ ತಿಳಿಸಿದರು.

ಬಡವರು ಸರ್ಕಾರಿ ಕಚೇರಿಗೆ ಅಲೆಯುವುದು ತಪ್ಪಬೇಕು. ಗ್ರಾಮಲೆಕ್ಕಿಗರು ಹಳ್ಳಿಗಳಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ಅರಣ್ಯ ಇಲಾಖೆ ರೈತಾಪಿಗಳಿಗೆ ಬೆನ್ನು ಬಿದ್ದ ಬೆತಾಳವಾಗಿ ಕಾಡುತ್ತಿದೆ. ನೂರಾರು ವರ್ಷದ ಸಾಗುವಳಿ ಜಮೀನುಗಳನ್ನು ತೆರವು ಗೊಳಿಸಲು 3000 ರೈತರಿಗೆ ನೋಟಿಸ್ ಜಾರಿಮಾಡಿ ಕಾನೂನು ಹೋರಾಟ ಆರಂಭಿಸಿದ್ದಾರೆ. ಅರಣ್ಯದಂಚಿನ ಗ್ರಾಮಸ್ಥರು ಭೂಮಿ ಹಕ್ಕು ಉಳಿಸಿಕೊಳ್ಳುವುದು ಸಂಕಷ್ಟವಾಗುತ್ತಿದೆ ಎಂದು ಕೆಲ ರೈತರು ಅರಣ್ಯ ಇಲಾಖೆ ವಿರುದ್ಧ ತೀರ್ವ ಆಕ್ರೋಶ ವ್ಯಕ್ತ ಪಡಿಸಿದರು. ವಿವಿಧ ಇಲಾಖೆಗಳಿಗೆ 80ಕ್ಕೂ ಹೆಚ್ಚು ಪಲಾನುಭವಿಗಳು ಅರ್ಜಿ ಸಲ್ಲಿಸಿದರು. ರಸ್ತೆ ಬಾಕ್ಸ್ ಚರಂಡಿ ನಿರ್ಮಾಣ ಸೇರಿದಂತೆ ಸ್ಮಶಾನ ಅಭಿವೃದ್ಧಿ ಕಾಮಾಗಾರಿಗಳ ಅನುಷ್ಠಾನದ ಅರ್ಜಿಗಳೆ ಹೆಚ್ಚಿದ್ದವು.

ಮಾಜಿ ಎಪಿಎಂಸಿ ಅಧ್ಯಕ್ಷ ಸತೀಶ್, ತಹಸೀಲ್ದಾರ್ ಪರಸಪ್ಪ ಕುರುಬ, ಉಪವಲಯ ಅರಣ್ಯಾಧಿಕಾರಿ ಉಷಾ, ತಾಲೂಕು ವೈಧ್ಯಾದಿಕಾರಿ ಅಶೋಕ್, ಪ.ಪಂ ಮುಖ್ಯಾಧಿಕಾರಿ ಮಂಜುನಾಥ್, ಗ್ರಾಪಂ ಅಧ್ಯಕ್ಷ ಕಿರಣ್‍ ಮೋರೆ, ಉಪ ತಹಸಿಲ್ದಾರ್ ವಿಜಯ್, ರಾಜಸ್ವ ನೀರಿಕ್ಷಕ ರಾಜು, ರವಿಕುಮಾರ್, ಸಿದ್ದಬಸಪ್ಪ, ಓಂಕಾರಮೂರ್ತಿ, ವಿನೋದಮ್ಮ, ಸೋಮಶೇಖರ್, ಬಸವರಾಜ್ ಇತರರಿದ್ದರು.