ಕನ್ನಡಪ್ರಭ ವಾರ್ತೆ ಆಲಮಟ್ಟಿ
ಎರಡೂ ಪ್ರತ್ಯೇಕ ಪ್ರಕರಣಗಳಲ್ಲಿ ಎಂಡಿ ಕಚೇರಿಗೆ ಸೇರಿದ ಒಂದು ಇನ್ನೋವಾ ಕಾರು, ಒಂದು ಜೀಪ್, ಫ್ಯಾಕ್ಸ್, ಝರಾಕ್ಸ್ ಯಂತ್ರ, 16 ಅಲಮಾರಾ, 13 ಕಂಪ್ಯೂಟರ್, 20 ಕುರ್ಚಿ, 22 ಟೇಬಲ್, 1 ಫ್ಯಾಕ್ಸ್ ಮಶಿನ್, ಬಲ್ಪಗಳು, ಪ್ರಿಂಟರ್, ಸಿಲಿಂಗ್ ಫ್ಯಾನ್ ಜಪ್ತಿ ಸೇರಿದಂತೆ ಇತರೆ ವಸ್ತುಗಳನ್ನು ಪಂಚರ ಸಮ್ಮುಖದಲ್ಲಿ ಜಪ್ತಿ ಮಾಡಿ ಕೋರ್ಟ್ಗೆ ಸಲ್ಲಿಸಲಾಗಿದೆ.
ಬಬಲೇಶ್ವರ ತಾಲ್ಲೂಕಿನ ಅರ್ಜುಣಗಿ ಗ್ರಾಮದ ಮಹಾಲಿಂಗಪ್ಪ ಮಹಾದೇವಪ್ಪ ಲಿಗಾಡೆಗೆ ಸೇರಿದ 1 ಎಕರೆ 4 ಗುಂಟಾ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಅದಕ್ಕೆ ವಿಜಯಪುರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ₹62,59,734 ಪರಿಹಾರ ನೀಡಬೇಕೆಂದು ಆದೇಶಿಸಿತ್ತು ಎಂದು ವಕೀಲ ಆರ್.ಜಿ.ಪಾಟೀಲ ತಿಳಿಸಿದರು.ಇನ್ನೊಂದು ಪ್ರಕರಣದಲ್ಲಿ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಅಕ್ರುಮಸಾಬ್ ಹುಸೇನಸಾಬ್ ಮುಲ್ಲಾಗೆ ಸೇರಿದ 1 ಎಕರೆ 33 ಗುಂಟಾ ಜಮೀನನ್ನು ಕಾಲುವೆಗಾಗಿ ವಶಪಡಿಸಿಕೊಳ್ಳಲಾಗಿತ್ತು. ಅವರಿಗೆ ವಿಜಯಪುರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ₹4,28,68,020 ಪರಿಹಾರ ನೀಡಲು ಆದೇಶಿಸಿತ್ತು ಎಂದು ರೈತ ಪರ ವಕೀಲ ಜಿ.ಎಸ್.ಬಿಜ್ಜೂರ ತಿಳಿಸಿದರು.
ಈ ಎರಡೂ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡುವಂತೆ ಕೆಬಿಜೆಎನ್ಎಲ್ ಎಂಡಿಗೆ, ಯುಕೆಪಿಯ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪರಿಹಾರ ನೀಡಿರಲಿಲ್ಲ. ಸದ್ಯ ನ್ಯಾಯಾಲಯದ ಆದೇಶದಂತೆ ಜಪ್ತಿ ಕಾರ್ಯ ಮಾಡಲಾಗುತ್ತಿದೆ ಎಂದು ರೈತರ ಪರ ವಕೀಲರು ತಿಳಿಸಿದ್ದಾರೆ.