ಏ.5ರಂದು ಡಾ. ಬಾಬು ಜಗಜೀವನರಾಮ್‌ ಜಯಂತ್ಯುತ್ಸವ

KannadaprabhaNewsNetwork | Published : Apr 3, 2024 1:34 AM

ಸಾರಾಂಶ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕರ ಸಂಘ ದ ಆಸರೆಯಲ್ಲಿ ಏ.5ರಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ 117ನೇ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ವಕ್ತಾರ ವೈಜನಾಥ ಝಳಕಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಜೈ ಭಾರತ ಮಾತಾ ಸೇವಾ ಸಮಿತಿ, ಬಾಬೂಜಿ ಅಭಿಮಾನಿ ಸಂಘ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕರ ಸಂಘ ದ ಆಸರೆಯಲ್ಲಿ ಏ.5ರಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ 117ನೇ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ವಕ್ತಾರ ವೈಜನಾಥ ಝಳಕಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಹವಾ ಮಲ್ಲೀನಾಥ ಮಹಾರಾಜ ನಿರಗುಡಿಯವರ ಸಾನ್ನಿಧ್ಯದಲ್ಲಿ ಅದ್ಧೂರಿಯಾಗಿ ಜಯಂತ್ಯುತ್ಸವ ಆಚರಿಸಲಾಗುತ್ತಿದೆ.

ಏ.5 ರಂದು ಬೆಳಗ್ಗೆ 10ಕ್ಕೆ ನಗರದ ಹೀರಾಪುರ ಹತ್ತಿರದ ಗಣೇಶ ಲಿಂಗ ಹವಾ ಮಲ್ಲಿನಾಥ ಆಶ್ರಮದಿಂದ ಅನ್ನಪೂರ್ಣ ಕ್ರಾಸ್ ಸಮೀಪದ ಡಾ. ಜಗಜೀವನರಾಮ್ ಪುತ್ಥಳಿ ವರೆಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ.

ಈ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಹಲಗೆ ನಾದದೊಂದಿಗೆ ವಿವಿಧ ಕಲಾ ಪ್ರದರ್ಶನದೊಂದಿಗೆ ನಗರದ ಆಳಂದ ಚೆಕ್ ಪೋಸ್ಟ್ ಮಾರ್ಗವಾಗಿ ಸೂಪರ್ ಮಾರ್ಕೆಟ್ ಮೂಲಕ ಡಾ.ಜಗಜೀವನರಾಮ್ ಪುತ್ಥಳಿ ವರೆಗೆ ಮೆರವಣಿಗೆ ಜರುಗಲಿದೆ ಎಂದರು.

ಈ ಕಾರ್ಯಕ್ರಮದ ಭಾಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ನಂತರ ಕಲೆ, ಶಿಕ್ಷಣ, ಸಮಾಜ ಸೇವೆ, ಕೃಷಿ, ಮಾಧ್ಯಮ, ಕಾರ್ಮಿಕ , ವೈದ್ಯಕೀಯ ಕ್ಷೇತ್ರದ ಸಾಧಕರಿಗೆ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕು ಎಂದು ಝಳಕಿ ಮನವಿ ಮಾಡಿದರು.

ಮುಖಂಡರಾದ ಗಣೇಶ ಅಲಗೂಡ್‌, ಎಂಎಸ್‌ ಪಾಟೀಲ್‌ ನರಿಬೋಳ್‌, ದುರ್ಗಪ್ಪ ಶಿರಡೋಣ್‌, ಪರಮೇಶ್ವರ ಆಲಗೂಡ್‌, ದತ್ತು ಹೈಯ್ಯಾಳಕರ್‌, ಸಂದೀಪ ಪವಾರ್‌, ರಾಂಪ್ರಸಾದ್‌ ಹೊಡಲ್‌, ದಯಾನಂದ ಪಾಟೀಲ್‌ ಇತರರಿದ್ದರು.

Share this article