- ಕೇರಳ ಹಿಂದೂ ಸಮಾಜದಿಂದ 3 ನೇ ವರ್ಷದ ವಾರ್ಷಿಕೋತ್ಸವ ಹಾಗೂ 4 ನೇ ವರ್ಷದ ಓಣಂ ಹಬ್ಬ ಆಚರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮಲೆಯಾಳಿ ಭಾಷೆ ಆಡುವ ರಾಜ್ಯಗಳಲ್ಲಿ ಹೆಚ್ಚಾಗಿ ಓಣಂ ಹಬ್ಬ ಆಚರಿಸುತ್ತಾರೆ. ಆದರೆ, ಓಣಂ ಹಬ್ಬ ಮಲೆಯಾಳಿಗಳ ಹಬ್ಬವಾಗಿರದೆ ಎಲ್ಲಾ ಹಿಂದೂಗಳ ಹಬ್ಬವಾಗಿದೆ ಎಂದು ಕೇರಳ ರಾಜ್ಯದ ಮಣ್ಣಾರ್ ಕಾಡ್ ನ ಯುವ ಆಧ್ಯಾತ್ಮಿಕ ಪ್ರವಚನಕಾರ ಹಾಗೂ ಅಮೃತ ಟಿವಿ ಸಂದ್ಯಾದೀಪಂ ನಿರೂಪಕ ಪಿ.ಎಂ.ವ್ಯಾಸನ್ ತಿಳಿಸಿದರು.
ಭಾನುವಾರ ಬಿ.ಎಚ್.ಕೈಮರದ ನಾರಾಯಣ ಗುರು ಸಮುದಾಯ ಭವನದಲ್ಲಿ ಕೇರಳ ಹಿಂದೂ ಸಮಾಜದ 3ನೇ ವರ್ಷದ ವಾರ್ಷಿಕೋತ್ಸವ ಹಾಗೂ 4 ನೇ ವರ್ಷದ ಓಣಂ ಹಬ್ಬ ಆಚರಣೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ನಾನು ಹಿಂದೂ ಎಂದು ಅಭಿಮಾನದಿಂದ ಹೇಳಲು ಹಿಂಜರಿಕೆ ಬೇಕಾಗಿಲ್ಲ. ಹಿಂದೂ ಎಂಬ ಧರ್ಮ ಸಂಘಟನೆಗೆ ನಮ್ಮನ್ನು ಸೇರಿಸಿದ ಆದಿ ಶಂಕರಾರ್ಚಾರರ ಪಾದಗಳಿಗೆ ನಮಿಸಬೇಕಾಗಿದೆ. ಅದ್ವೈತ ಸಿದ್ದಾಂತವನ್ನು ಲೋಕಕ್ಕೆ ಪರಿಚಯಿಸಿದ ಶಂಕರಾಚಾರ್ಯರ ಮಣ್ಣಲ್ಲಿ ನಿಂತು ಪ್ರವಚನ ಮಾಡಲು ನನಗೆ ಹೆಮ್ಮೆ ಎನಿಸಿದೆ. ಈಶ್ವರ, ಬ್ರಹ್ಮ,ವಿಷ್ಣು, ಮಹಾದೇವ, ದೇವಿ ಸೇರಿದಂತೆ ಎಲ್ಲಾ ದೇವರು ಒಂದೇ ಆಗಿದ್ದು ವಿವಿಧ ರೂಪಗಳಲ್ಲಿದೆ. ಎಲ್ಲಾ ದೇವರ ಚೈತನ್ಯಒಂದೇ ಆಗಿದೆ. ಎಲ್ಲರಲ್ಲೂ ಇರುವುದು ಸನಾತನ ಧರ್ಮ. ಹಿಂದೂಗಳ ಸಂಘಟನೆಯಾಗಬೇಕಾದ ಅಗತ್ಯವಿದೆ. ಸಂಘಟನೆಯಿಂದ ಶಕ್ತಿಯುತರಾಗಬಹುದು. ವಿದ್ಯೆಯಿಂದ ಪ್ರಬುದ್ಧರಾಗಬಹುದು ಎಂದರು.ಮುಖ್ಯ ಅತಿಥಿಯಾಗಿದ್ದ ಶ್ರೀ ನಾರಾಯಣಗುರು ಸಮಾಜದ ತಾಲೂಕು ಅಧ್ಯಕ್ಷ ಪಿ.ಆರ್.ಸದಾಶಿವ ಮಾತನಾಡಿ, ಕೇರಳ ಹಿಂದೂ ಸಮಾಜ ಜಿಲ್ಲೆಯಲ್ಲಿ ಸಂಘಟನೆಯಾಗುತ್ತಿದೆ. ನಮ್ಮ ತಾಲೂಕು ಸಂಘ ಜಿಲ್ಲೆಗೆ ಮಾದರಿ ಸಂಘ ವಾಗಬೇಕಾಗಿದೆ. ಕೇರಳ ಹಿಂದೂ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕಲಿಸಬೇಕು. ಗ್ರಾಮ ಪಂಚಾಯಿತಿ ಮಟ್ಟ ದಲ್ಲೂ ನಾಯಕತ್ವ ಬೆಳೆಯಬೇಕು ಹಾಗೂ ಸಂಘಟನೆಯಾಗಬೇಕಾಗಿದೆ. ಮುಂದಿನ ಪೀಳಿಗೆಗೆ ನಾವು ಉತ್ತಮ ಸಮಾಜ ಹಸ್ತಾಂತರಿಸಬೇಕು. ಸಮಾಜದ ಪ್ರತಿಯೊಬ್ಬರೂ ಇನ್ನೊಬ್ಬರನ್ನು ಪ್ರೀತಿ, ಗೌರವದಿಂದ ಕಾಣಬೇಕು. ಸಮಾಜಕ್ಕೆ ನಾವು ಏನು ಕೊಡುಗೆಯಾಗಿ ನೀಡಿದ್ದೇವೆ ಎಂದು ನಾವು ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ. ನಾವು ಸ್ವಾರ್ಥಕ್ಕಾಗಿ ಬದುಕದೆ ನಮ್ಮ ಬದುಕಿನ ಹೆಜ್ಜೆ ಗುರುತನ್ನು ಬಿಟ್ಟು ಹೋಗಬೇಕು ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇರಳ ಹಿಂದೂ ಸಮಾಜದ ತಾಲೂಕು ಅಧ್ಯಕ್ಷ ಪಿ.ಆರ್. ಸುಕುಮಾರ್ ಮಾತನಾಡಿ, ಈ ವರ್ಷ 4 ನೇ ವರ್ಷದಲ್ಲಿ ಓಣಂ ಹಬ್ಬ ಆಚರಣೆ ಮಾಡುತ್ತಿದ್ದೇವೆ. ಕೇರಳ ಹಿಂದೂ ಸಮಾಜದವರು ಕಾರ್ಯಾಕಾರಿ ಸಮಿತಿ ಸಹಕಾರದಿಂದ ಸಂಘಟನೆಯಾಗಿ ಕೆಲಸಮಾಡುತ್ತಿದ್ದೇವೆ. ನಮ್ಮ ಸಮಾಜದಲ್ಲಿ ಯಾರಾದರೂ ಮೃತಪಟ್ಟರೆ ಅವರ ಮನೆ ಯಲ್ಲಿ ನಮ್ಮ ಸಂಘದ ಸದಸ್ಯರು ಹೋಗಿ ಪಾರಾಯಣ, ವಾಚನ ಮಾಡುತ್ತಿದ್ದಾರೆ. ಕಷ್ಟದಲ್ಲಿರುವ ಸಮಾಜದ ಕುಟುಂಬದವರಿಗೆ ಸಹಾಯ ಧನ ನೀಡಿದ್ದೇವೆ. ಕೆಲವು ವರ್ಷಗಳ ಹಿಂದೆ ನಮ್ಮ ಸಮಾಜದ ಕೆಲವರು ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡಿದ್ದರು. ಮುಂದೆ ಯಾರೂ ಮತಾಂತರಗೊಳ್ಳಬಾರದು. ಭದ್ರಾವತಿ, ಶಿವಮೊಗ್ಗ, ಬಾಳೆಹೊನ್ನೂರು, ಕೊಪ್ಪ, ಜಯಪುರ, ಮೂಡಿಗೆರೆ, ಉಡುಪಿಯಲ್ಲಿ ಕೇರಳ ಹಿಂದೂ ಸಮಾಜದ ಸಂಘ ಸ್ಥಾಪನೆ ಮಾಡಿದ್ದೇವೆ ಎಂದರು.ಸರ್ಕಾರದ ಪ್ರತಿನಿಧಿಗಳು ಜನಗಣತಿಗಾಗಿ ಮನೆ, ಮನೆಗೆ ಬರಲಿದ್ದಾರೆ. ಕೇರಳ ಹಿಂದೂ ಸಮಾಜದವರು ಎಚ್ಚರಿಕೆಯಿಂದ ಬರೆಯಬೇಕು. ಇಲ್ಲದಿದ್ದರೆ ಮುಂದೆ ನಮ್ಮ ಸಮಾಜಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯ ಸಿಗುವುದಿಲ್ಲ ಎಂದರು.
ಅತಿಥಿಯಾಗಿದ್ದ ಕೇರಳ ಹಿಂದೂ ಸಮಾಜದ ಮುಖಂಡ ಹಾಗೂ ವಕೀಲ ಕೆ.ಪಿ.ಸುರೇಶ್ ಕುಮಾರ್ ಮಾತನಾಡಿ, ಹಿಂದೂ ಎನ್ನುವುದೇ ನಮಗೆ ಹೆಮ್ಮೆಯಾಗಿದೆ. ಹಿಂದೂಗಳು ಒಗ್ಗಟ್ಟು ಕಾಪಾಡಬೇಕಾಗಿದೆ. ಕಾಶ್ಮೀರದಲ್ಲಿ ಹಿಂದೂಗಳ ಸಿಂಧೂರ ಅಳಿಸಲಾಗಿತ್ತು. ನಮ್ಮ ಹೆಮ್ಮೆ ಸೈನಿಕರು ಇದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಸಿಂಧೂರ ಎನ್ನುವುದು ಹಿಂದು ಮಹಿಳೆ ಹೆಮ್ಮೆ ಗುರುತಾಗಿದೆ. 140 ಕೋಟಿ ಹಿಂದೂಗಳಿಗೆ ಇರುವುದು ಭಾರತ ದೇಶ ಮಾತ್ರ. ಪ್ರಪಂಚದಲ್ಲೇ ಹಿಂದೂಗಳಿಗೆ ಇರುವುದು ಹಿಂದೂಸ್ತಾನ ಒಂದೇ. ಆದ್ದರಿಂದ ಹಿಂದೂಗಳು ಸಂಘಟರಾಗಬೇಕು ಎಂದು ಕರೆ ನೀಡಿದರು. ಕೇರಳ ಹಿಂದೂ ಸಮಾಜದ ಕಾರ್ಯದರ್ಶಿ ಕೆ.ಎನ್.ಅಶೋಕ್ ವರದಿ ವಾಚಿಸಿದರು.ಓಣಂ ಪ್ರಯುಕ್ತ ಆಕರ್ಷಕ ಹೂವಿನ ರಂಗೋಲಿ ಹಾಕಲಾಗಿತ್ತು. ಅತಿಥಿಗಳಾಗಿ ಕೇರಳ ಹಿಂದೂ ಸಮಾಜದ ಮುಖಂಡ ಶೀಗುವಾನಿ ಕೆ.ಎನ್.ಶಿವದಾಸ್, ಗಾಂದಿಗ್ರಾಮ ನಾಗರಾಜ, ಬಿ.ಎಚ್.ಕೈಮರ ಬಿನು, ಕೆರೆಮನೆ ಜನಾರ್ದನ್, ಚಿಟ್ಟಿಕೊಡುಗೆ ಮನೋಹರ್,ಕಿಚ್ಚಬ್ಬಿ ತಂಗಪ್ಪನ್, ಸಂಚಾಲಕ ಪಿ.ಆರ್. ಅರವಿಂದ್, ಕೇರಳದ ಮುಖಂಡ ಸ್ವಾಮಿನಾಥನ್ಕು.ವಿಶ್ರೇಯ, ಸುಧಾಕರ ಆಚಾರ್, ಸೌಖ್ಯ ಇದ್ದರು.