ಕುದೂರು: ಇತಿಹಾಸವನ್ನು ಓದದವನು ಇತಿಹಾಸ ಸೃಷ್ಟಿಸಲಾರ. ರಾಜಕೀಯ ಇತಿಹಾಸ ಕುರಿತು ನಮ್ಮ ಸುತ್ತಮುತ್ತಲಿನಲ್ಲಿಯೇ ಹೆಚ್ಚು ಆಧಾರಗಳು ಸಿಗುತ್ತವೆ. ಅದನ್ನು ಹುಡುಕುವ ಕುತೂಹಲ ಮತ್ತು ಶ್ರದ್ಧೆನಮ್ಮಲ್ಲಿರಬೇಕು ಎಂದು ಶಾಸನ ತಜ್ಞ ಧನಪಾಲ್ ತಿಳಿಸಿದರು.
ಶಾಸನಗಳ ಮಹತ್ವವನ್ನು ಇಂದಿನ ತರುಣರು ಅರ್ಥ ಮಾಡಿಕೊಳ್ಳಬೇಕು. ಎಷ್ಟೋ ಕಡೆ ಶಾಸನ ಕಲ್ಲುಗಳು ಬಚ್ಚಲಿನ ಕಲ್ಲುಗಳಾಗಿವೆ. ವೀರಗಲ್ಲುಗಳು ಮತ್ತು ಮಾಸ್ತಿ ಕಲ್ಲುಗಳು ಅತ್ಯಂತ ರೋಚಕ ಚರಿತ್ರೆಯನ್ನು ತೆರೆದಿಡುತ್ತವೆ. ಇತಿಹಾಸ ಎನ್ನುವುದೇ ಅತ್ಯಂತ ಕುತೂಹಲ ಹುಟ್ಟಿಸುವ ವಿಷಯವಾಗಿದೆ. ಅದರ ಹಿಂದೆ ಓಡಿದರೆ ನಿಜವಾದ ಚರಿತ್ರೆ ನಮ್ಮ ಮುಂದೆ ಅನಾವರಣಗೊಳ್ಳುತ್ತದೆ ಎಂದು ತಿಳಿಸಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಜ್ಕುಮಾರ್ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಇತಿಹಾಸ ಅಂಶಗಳು ಪ್ರತಿನಿತ್ಯ ದಾಖಲಾಗುತ್ತವೆ. ಈ ದಾಖಲೆಗಳು ಮುಂದಿನ ತಲೆಮಾರಿಗೆ ಅತ್ಯಂತ ಉಪಕಾರಿಯಾಗುತ್ತದೆ. ಇಂತಹ ದಾಖಲೆಗಳಿಂದ ಸ್ಪಷ್ಟವಾದ ಇತಿಹಾಸ ತಲೆಮಾರಿನಿಂದ ತಲೆಮಾರಿಗೆ ವರ್ಗವಾಗುತ್ತವೆ ಎಂದು ತಿಳಿಸಿದರು.ಪ್ರಾಧ್ಯಾಪಕ ಪುಟ್ಟಲಕ್ಷ್ಮಯ್ಯ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳು ಸಂಶೋಧನೆಯ ವಿಷಯದಲ್ಲಿ ಕುತೂಹಲವನ್ನು ಮೂಡಿಸಿಕೊಳ್ಳಬೇಕು. ಇಂತಹ ಕುತೂಹಲ ಬೆಳಸಿಕೊಂಡಿದ್ದೇ ಆದರೆ ನಿಜಕ್ಕೂ ಕನ್ನಡ ನಾಡಿನ ಸಾಂಸ್ಕೃತಿಕ ಸರದಾರರೇ ಆಗಿ ಮೆರೆಯುತ್ತೀರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥ ದೇವರಾಜ್, ಪ್ರಾಧ್ಯಾಪಕ ಜಗದೀಶ್, ರಾಘವೇಂದ್ರ, ಶಿವರಾಜ್, ತ್ಯಾಗರಾಜ್, ಕೃಷ್ಣವೇಣಿ. ಡಾ.ಮುರುಳಿಕೂಡ್ಲೂರು ಹಾಜರಿದ್ದರು.ಬಾಕ್ಸ್.................
ಧನಪಾಲ್ ವೃತ್ತಿಯಲ್ಲಿ ಬಿಎಂಟಿಸಿ ಚಾಲಕ. ಆದರೆ ಶಾಸನಗಳ ಅಧ್ಯಯನ ಇವರ ಹವ್ಯಾಸ. ಇವರ ಸಾಧನೆಯನ್ನು ಗುರುತಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಧನಪಾಲ್ರವರ ಕಾರ್ಯವನ್ನು ಶ್ಲಾಘಿಸಿದ್ದರು. ಧನಪಾಲ್ ಅವರಿಗಿರುವ ಇತಿಹಾಸ ಪ್ರೀತಿ, ಅದಕ್ಕಾಗಿ ಶಾಸನ ಸಂಶೋಧನೆ ಮಾಡುವುದರ ಮೂಲಕ ವಿದ್ಯಾರ್ಥಿ ಸಮುದಾಯವನ್ನು ಇತಿಹಾಸದ ಕುರಿತು ಆಸಕ್ತಿ ಮೂಡಿಸುವ ಕಾರ್ಯಕ್ಕೆ ಶ್ಲಾಘಿಸಿದ್ದರು.ಪೊಟೋ೫ಸಿಪಿಟಿ೧: