ರಿಯಾಜಅಹ್ಮದ ಎಂ. ದೊಡ್ಡಮನಿ
ಕನ್ನಡಪ್ರಭ ವಾರ್ತೆ ಡಂಬಳಬರದ ಮಧ್ಯೆಯೂ ಈ ಬಾರಿ ಸಾವಿರಾರು ರುಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದ ಹೋಬಳಿಯ ರೈತರಿಗೆ ದಿಢೀರ್ ಬೆಲೆ ಕುಸಿತದಿಂದ ಬರಸಿಡಿಲು ಬಡಿದಂತಾಗಿದೆ.
ಮಳೆ ಅಭಾವದಿಂದ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಉಣಿಸಿ ರೈತರು ಈರುಳ್ಳಿ ಬೆಳೆದಿದ್ದರು.ಎರಡು ವಾರಗಳ ಹಿಂದೆ ₹4 ಸಾವಿರದಿಂದ ₹5 ಸಾವಿರದ ವರೆಗೆ ವ್ಯಾಪಾರವಾಗುತ್ತಿದ್ದ ಈರುಳ್ಳಿ ಬೆಲೆ ಕುಸಿತ ಕಂಡು ಮೊದಲನೆಯ ಹಂತದ ಮಾದರಿಯ ಈರುಳ್ಳಿಗೆ ₹1800, ಎರಡನೆಯ ಹಂತದ ಮಾದರಿಯ ಈರುಳ್ಳಿ ₹300ರಿಂದ 500ರ ವರೆಗೆ ಮಾರಾಟವಾಗುತ್ತಿದೆ. ಇದು ರೈತರನ್ನು ಮತ್ತೆ ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡಿದೆ.
ಬೆಲ್ಲಾನು ಹೋಯಿತು: ಏಕಾಏಕಿ ಕೇಂದ್ರ ಸರ್ಕಾರ ಈರುಳ್ಳಿ ರಪ್ತು ನಿರ್ಬಂಧ ಹೇರುವ ಮೂಲಕ ರೈತರನ್ನು ಕಂಗೆಡಿಸಿದೆ. ಕೆಲವು ರೈತರು ಬೇರೆ ರಾಜ್ಯಗಳಿಗೆ ಸಾಗಾಟ ಮಾಡಿದ ವೆಚ್ಚವೂ ಬಾರದಿರುವುದು ''''ಕಲ್ಲು ಹೋಯಿತು, ಕಲ್ಲಿಗೆ ಹತ್ತಿದ ಬೆಲ್ಲಾನು ಹೋಯಿತು'''' ಎನ್ನುವಂತಾಗಿದೆ ರೈತರ ಪರಿಸ್ಥಿತಿ.ಕೇಂದ್ರ ಸರ್ಕಾರ ಈರುಳ್ಳಿ ರಪ್ತು ನಿರ್ಬಂಧಗೊಳಿಸಿದ ಒಂದೆರಡು ದಿನಗಳಲ್ಲಿ ಕ್ವಿಂಟಾಲ್ಗೆ 6 ಸಾವಿರ ಮಾರಾಟವಾಗುತ್ತಿದ್ದ ಈರುಳ್ಳಿ ಮಾರುಕಟ್ಟೆಯಲ್ಲಿ ದಿಢೀರನೆ ಬೆಲೆ ಕುಸಿತವಾಗಿ ₹2 ಸಾವಿರಕ್ಕೆ ಬಂದು ನಿಂತಿದೆ. ಎರಡನೇ, ಮೂರನೇ ಹಂತದ ಈರುಳ್ಳಿಯನ್ನು ಕೇಳದಂತಹ ಸ್ಥಿತಿ ಇದೆ. ಕೇಂದ್ರ ಸರ್ಕಾರ ಈರುಳ್ಳಿ ರಪ್ತು ನಿರ್ಬಂಧ ವಾಪಸ್ ಪಡೆಯಬೇಕು. ಇಲ್ಲವಾದರೆ ಈರುಳ್ಳಿ ಬೆಳೆದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಸತತವಾಗಿ ರೈತರು ಸಂಕಷ್ಟದ ದಿನಗಳನ್ನು ಕಳೆಯುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಮಾಡಿರುವ ಬೆಳೆಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಗೋಣಿಬಸಪ್ಪ ಕೋರ್ಲಹಳ್ಳಿ ಹೇಳಿದರು.
ಈರುಳ್ಳಿ ರಪ್ತು ಹಿಂಪಡೆದಿದ್ದರಿಂದ ಮತ್ತು ಮಹಾರಾಷ್ಟ್ರದಿಂದ ಈರುಳ್ಳಿ ಆವಕ ಹೆಚ್ಚಾಗಿದ್ದ ಪರಿಣಾಮ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಮಾರುಕಟ್ಟೆಗೆ ಈರುಳ್ಳಿ ಆವಕ ಹೆಚ್ಚಾದರೆ ಇನ್ನಷ್ಟು ಬೆಲೆ ಕುಸಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಬೆಂಗಳೂರು ಅಮರೇಶ್ವರ ಟ್ರೇಡಿಂಗ್ ಮಾಲೀಕ ಸಿದ್ದು ಬಳಿಗಾರ ಹೇಳಿದರು.