ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಹಂಪಾಪುರ ಗ್ರಾಮದಲ್ಲಿ ಪ್ರಭಾವಿ ವ್ಯಕ್ತಿಯ ಪ್ರಭಾವಕ್ಕೆ ಮಣಿದು ಅವರ ಮನೆ ಮುಂದೆ ಸರ್ಕಾರಿ ಕಾಮಗಾರಿಯ ಜೊತೆಗೆ ಡಾಂಬರ್ ಹಾಕಲು ಗುತ್ತಿಗೆದಾರ ಸಹ ಮುಂದಾಗಿರುವುದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ರಮೇಶ್ ಬಂಡಿಸಿದ್ದೇಗೌಡರ ಬೆಂಬಲಿಗ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣ ಗ್ರಾಮ ಠಾಣೆಗೆ ಸೇರಿದ ರಸ್ತೆಯಲ್ಲಿ ಅಡ್ಡಲಾಗಿ ದನದ ಶೆಡ್ ನಿರ್ಮಿಸಿ ರಸ್ತೆಯನ್ನು ಬಂದ್ ಮಾಡುವ ಮೂಲಕ ನಮ್ಮ ಮೇಲೆ ದಬ್ಬಾಳಿಕೆ ಮತ್ತು ದೌರ್ಜನ್ಯವೆಸಗುತ್ತಿರುವುದಾಗಿ ಆರೋಪಿಸಿದ್ದಾರೆ.ಗ್ರಾಮ ಠಾಣಾ ಜಾಗ ತನಗೆ ಸೇರಿದೆ. ಅದಕ್ಕೆ ರಸ್ತೆ ಮಧ್ಯೆ ಕೊಟ್ಟಿಗೆ ನಿರ್ಮಾಣ ಮಾಡಿದ್ದೇನೆ ಎಂದು ಗ್ರಾಮಸ್ಥರಿಗೆ ಧಮ್ಕಿ ಹಾಕುವ ಜೊತೆಗೆ ತನ್ನ ಮನೆವರೆಗೆ ಮಾತ್ರ ರಸ್ತೆ ಮಾಡಿ ಎಂದು ಗುತ್ತಿಗೆದಾರನಿಗೆ ಬೆದರಿಕೆ ಹಾಕಿರುವುದಾಗಿ ಕೇಳಿ ಬಂದಿದೆ.
ಇದನ್ನು ಪ್ರಶ್ನಿಸಲು ಹೋದರೆ ನಮ್ಮ ಮೇಲೆ ಹಲ್ಲೆ ಮಾಡಲು ಬರುತ್ತಾರೆ. ನನಗೆ ಒಬ್ಬನೇ ಮಗನಿದ್ದು, ಈಗಾಗಲೇ ಹಲವು ಬಾರಿ ಜಗಳವಾಗಿದೆ. ಬಲಾಢ್ಯರ ದಬ್ಬಾಳಿಕೆಗೆ ನೊಂದಿದ್ದೀನಿ. ನನಗೆ ನ್ಯಾಯ ಕೊಡಿಸಿಕೊಡಿ ಎಂದ ಬಡ ಮಹಿಳೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದೇ ವೇಳೆ ಪರಸ್ಪರ ಮಾತಿನ ಚಕಮುಕಿ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿತ್ತು. ಯಾವುದೇ ಕಾರಣಕ್ಕೂ ಪಕ್ಕದ ಮನೆ ವರೆವಿಗೂ ರಸ್ತೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.