)
ವಿಜಯಪುರ: ಕಂದಾಯ ಇಲಾಖೆಯಿಂದ ಆಗಬೇಕಾಗಿರುವ ನಾಗರಿಕರ ಕೆಲಸ ಕಾರ್ಯಗಳನ್ನು ಹೋಬಳಿಯ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ನಿಗದಿತ ಸಮಯಕ್ಕೆ ಕಚೇರಿಗಳಲ್ಲಿ ಇರುವುದಿಲ್ಲ ಎಂದು ಆರೋಪಿಸಿ ಕರ್ನಾಟಕ ದಲಿತ ಜನಸೇನೆ ಸಂಘಟನೆಯ ಪದಾಧಿಕಾರಿಗಳು ನಾಡಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಕರ್ನಾಟಕ ದಲಿತ ಜನಸೇನೆಯ ರಾಜ್ಯಾಧ್ಯಕ್ಷ ಟಿ.ಭರತ್ ಮಾತನಾಡಿ, ಸರ್ಕಾರದ ಆದೇಶದಂತೆ ೧೦ ಗಂಟೆಗೆ ಕಚೇರಿಗೆ ಬರುತ್ತಿಲ್ಲ, ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಉಳಿಯುತ್ತಿಲ್ಲ. ವರದಿಗಳನ್ನು ಬರೆಯುವಾಗ, ಸ್ಥಳ ಮಹಜರು ಮಾಡದೇ, ತಾವಿರುವ ಸ್ಥಳದಿಂದಲೇ ವರದಿಗಳನ್ನು ಕಳುಹಿಸುತ್ತಾರೆ. ಕಂದಾಯ ಇಲಾಖೆಯಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳು ನಿಗದಿತ ಸಮಯದಲ್ಲಿ ಸಾರ್ವಜನಿಕರಿಗೆ ಸಿಗಬೇಕು, ಸಾರ್ವಜನಿಕರು ಅರ್ಜಿಗಳು ಸಲ್ಲಿಸುವಾಗ ಯಾವುದಾದರೂ ದಾಖಲೆಗಳು ಒದಗಿಸಿಲ್ಲವಾದರೆ, ಸಂಬಂಧಪಟ್ಟ ಅರ್ಜಿದಾರರ ಗಮನಕ್ಕೆ ತಂದು ಸೂಕ್ತ ದಾಖಲೆ ಪಡೆದುಕೊಳ್ಳಬೇಕು, ಯಾವುದೇ ಅರ್ಜಿಯನ್ನೂ ಸಕಾರಣವಿಲ್ಲದೆ ವಜಾಗೊಳಿಸಬಾರದು. ಅಧಿಕಾರಿಗಳ ಕರ್ತವ್ಯ ಲೋಪ ಕಂಡು ಬಂದರೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಮನವಿ ಪತ್ರ ಸ್ವೀಕರಿಸಿದ ಉಪ ತಹಶೀಲ್ದಾರ್ ಮೋಹನ್ ಕುಮಾರ್ ಮಾತನಾಡಿ, ನಮ್ಮ ಕಚೇರಿಯಲ್ಲಿ ಯಾವುದೇ ಅರ್ಜಿಗಳನ್ನು ವಿನಾಕಾರಣ, ಬಾಕಿ ಉಳಿಸಿಕೊಳ್ಳುತ್ತಿಲ್ಲ, ಕೇವಲ ನಾಲ್ವರು ಗ್ರಾಮ ಆಡಳಿತಾಧಿಕಾರಿಗಳಿದ್ದು, ಯಾವುದೇ ಕೆಲಸ ಬಾಕಿ ಉಳಿಸುತ್ತಿಲ್ಲ. ಇತ್ತೀಚೆಗೆ ಜಿಲ್ಲಾಧಿಕಾರಿಗಳು ಪ್ರಶಂಸನಾಪತ್ರವನ್ನೂ ಸಹ ಕೊಟ್ಟಿದ್ದಾರೆ. ಹಾಗೇನಾದ್ರೂ ಸಿಬ್ಬಂದಿಯಿಂದ ವಿಳಂಬವಾಗಿದ್ದರೆ ಸರಿಪಡಿಸುತ್ತೇವೆ ಎಂದರು.ಪ್ರತಿಭಟನೆಯಲ್ಲಿ ಸಂಘಟನೆ ಪದಾಧಿಕಾರಿಗಳಾದ ಪುನೀತ್, ವೇಣು, ಪ್ರಕಾಶ್, ನರಸಿಂಹರೆಡ್ಡಿ, ಮೋಹನ್ ಕುಮಾರ್, ಗಂಗಾಧರ್, ಹರೀಶ್, ಗಜೇಂದ್ರ, ಗಗನ್, ವೆಂಕಟೇಶ್, ಕೃಷ್ಣಮೂರ್ತಿ, ಮುಖಂಡ ಮುರಳೀಧರ್, ಪುರ ಕೃಷ್ಣಪ್ಪ, ಮುನೀಂದ್ರ ಇತರರು ಹಾಜರಿದ್ದರು.