ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಮೊಬೈಲ್ ಅತ್ಯವಶ್ಯಕವಾಗಿದ್ದರೂ ಕೂಡ ಶಾಲಾ ಹಂತದ ವಿದ್ಯಾರ್ಥಿಗಳು ಮೊಬೈಲ್ ಅನ್ನು ಒಂದು ತಂತ್ರಜ್ಞಾನವಾಗಿ, ಜ್ಞಾನವಾಗಿ, ಅವಶ್ಯಕ ವಿದ್ಯೆಗಾಗಿ ಮಾತ್ರ ಸದುಪಯೋಗಪಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಶಾಲಾ ಹಂತದ ವಿದ್ಯಾರ್ಥಿಗಳಿಗೆ ಪುಸ್ತಕ ಉತ್ತಮ ಗೆಳೆಯನಿದ್ದಂತೆ. ಜ್ಞಾನ ಹೆಚ್ಚಿಸುವ ಜೊತೆಗೆ ಒಳ್ಳೆಯ ಚಿಂತನೆ ಬೆಳೆಸುವ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಕನ್ನಡ ಸಂಘದ ಸಂಸ್ಥಾಪಕ ಅಧ್ಯಕ್ಷ ನಾ.ಸು.ನಾಗೇಶ್‌ ಹೇಳಿದರು.

ತಾಲೂಕಿನ ಕರಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಂಘದಿಂದ ಆಯೋಜಿಸಿದ್ದ ನಾನು ಓದಿದ ಪುಸ್ತಕ ನನ್ನ ಅನುಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಮೊಬೈಲ್ ಅತ್ಯವಶ್ಯಕವಾಗಿದ್ದರೂ ಕೂಡ ಶಾಲಾ ಹಂತದ ವಿದ್ಯಾರ್ಥಿಗಳು ಮೊಬೈಲ್ ಅನ್ನು ಒಂದು ತಂತ್ರಜ್ಞಾನವಾಗಿ, ಜ್ಞಾನವಾಗಿ, ಅವಶ್ಯಕ ವಿದ್ಯೆಗಾಗಿ ಮಾತ್ರ ಸದುಪಯೋಗಪಡಿಸಿಕೊಳ್ಳಬೇಕು. ಇನ್ನುಳಿದಂತೆ ಹೆಚ್ಚು ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು ಎಂದರು.

ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ಹೊರತುಪಡಿಸಿ ಸಾಮಾನ್ಯ ಜ್ಞಾನ ಮತ್ತು ಸಾಹಿತ್ಯಾಸಕ್ತಿ ಮೂಡಿಸುವ ಕಥೆ, ಕವನ, ಕಾದಂಬರಿ ಪುಸ್ತಕಗಳನ್ನು ಓದುವ ಹವ್ಯಾಸವಿಲ್ಲ ಎಂದು ಕೆಲವರು ಹೇಳುತ್ತಿದ್ದರು. ಆದರೆ, ಈ ಶಾಲೆಯ ಮಕ್ಕಳು ಕೆಲ ದಿನಗಳ ಹಿಂದೆ ನಾವು ಕೊಟ್ಟಿದ್ದ ಎಲ್ಲಾ ಪುಸ್ತಕಗಳನ್ನು ಓದಿ ಆ ಪುಸ್ತಕಗಳ ಸಾರಾಂಶ ಸಂದೇಶಗಳನ್ನು ಪುನರುಚ್ಚರಿಸುತ್ತಿರುವ ಬುದ್ಧಿಶಕ್ತಿಯನ್ನು ಕಂಡು ಬಹಳ ಆಶ್ಚರ್ಯ ಮತ್ತು ಸಂತೋಷವಾಯಿತು. ಇದೇ ರೀತಿ ನಿರಂತರವಾಗಿ ಕನ್ನಡ ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.

ಸಂಘದ ಸಂಚಾಲಕ ಲ.ಬಾಲಕೃಷ್ಣ ಮಾತನಾಡಿ, ಮಕ್ಕಳು ಪಠ್ಯ ಪುಸ್ತಕದ ಜೊತೆಗೆ ಕಥೆ, ಸಾಹಿತ್ಯ, ಇತಿಹಾಸದ ಪುಸ್ತಕಗಳನ್ನು ಓದಿ ಅರ್ಥೈಸಿಕೊಂಡು ಸಮಾಜದ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.

ಸಮಾರಂಭದಲ್ಲಿ ಶಾಲೆ ಮುಖ್ಯಶಿಕ್ಷಕ ಎನ್.ಸಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಸಂಘದ ಅಧ್ಯಕ್ಷ ಅಶೋಕ್, ಸದಸ್ಯ ಶ್ರೀಧರ್, ಶಿಕ್ಷಕರಾದ ಅಫ್ಷಾನ್‌ಫಿರ್ದೋಸ್, ಜಾಕಿರ್‌ಪಾಷ, ದೇವಿಕಾ, ಪುಷ್ಪ, ಹರೀಶ್ ಮತ್ತು ವಿದ್ಯಾರ್ಥಿಗಳು ಇದ್ದರು.