ಸಿ.ಟಿ.ರವಿ ವಿರುದ್ಧ ಗೂಂಡಾಗಿರಿಗೆ ತುಮಕೂರು ಜಿಲ್ಲಾ ಬಿಜೆಪಿ ಮುಖಂಡರ ಆಕ್ರೋಶ

KannadaprabhaNewsNetwork |  
Published : Dec 21, 2024, 01:15 AM IST
ತುಮಕೂರಿನಲ್ಲಿ ಬಿಜೆಪಿ ಪ್ರತಿಭಟನೆ | Kannada Prabha

ಸಾರಾಂಶ

ಸಿ.ಟಿ.ರವಿ ಅವರ ಮೇಲೆ ಗೂಂಡಾ ವರ್ತನೆ, ಕೊಲೆ ಬೆದರಿಕೆ ಹಾಕಿ, ಅವರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿರುವ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾ ಬಿಜೆಪಿ ಮುಖಂಡರು ಶುಕ್ರವಾರ ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು ಸುವರ್ಣಸೌಧದಲ್ಲಿ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಮೇಲೆ ಗೂಂಡಾ ವರ್ತನೆ, ಕೊಲೆ ಬೆದರಿಕೆ ಹಾಕಿ, ಅವರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿರುವ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾ ಬಿಜೆಪಿ ಮುಖಂಡರು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಅಶಾಂತಿ, ಅರಾಜಕತೆ, ಅಭದ್ರತೆ ಸೃಷ್ಟಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ವಿಧಾನಸೌಧದ ಬಳಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದವನ ವಿರುದ್ಧ ಕ್ರಮ ತೆಗೆದುಕೊಳ್ಳದೆ ಎಫ್‌ಎಸ್‌ಎಲ್ ವರದಿ ಪರಿಶೀಲಿಸುತ್ತೇವೆ, ಪರಿಶೀಲನೆ ಮಾಡುತ್ತೇವೆ ಎಂದು ಹೇಳಿಕೊಂಡ ಕಾಂಗ್ರೆಸ್ ಸರ್ಕಾರ ಆತನ ವಿರುದ್ಧ ಈವರೆಗೂ ಕ್ರಮ ತೆಗೆದುಕೊಂಡಿಲ್ಲ. ಆದರೆ, ಸರ್ಕಾರದ ಲೋಪದೋಷಗಳನ್ನು ಪ್ರಶ್ನಿಸಲು ಮುಂದಾದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರನ್ನು ಹತ್ತಿಕ್ಕಲು ಸುಳ್ಳು ಆರೋಪದ ವಿವಾದ ಸೃಷ್ಟಿಸಲಾಗಿದೆ. ಅವರ ಮೇಲೆ ಹಲ್ಲೆ ಮಾಡಿ, ಕೊಲೆ ಬೆರದಿಕೆ ಹಾಕಲಾಗಿದೆ. ಆದರೆ ಸಿ.ಟಿ.ರವಿಯವರು ಅಭಿಪ್ರಾಯ ಹೇಳಲೂ ಅವಕಾಶ ನೀಡಿದೆ ಅವರನ್ನು ಪೊಲೀಸರು ವಶಕ್ಕೆ ಪಡೆದು ಭಯೋತ್ಪಾದಕರ ರೀತಿ ನಡೆಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹಾಳಾಗುತ್ತಿದೆ. ಅಭಿವೃದ್ಧಿ ಕಾರ್ಯ ಮಾಡದ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಚರ್ಚೆ ಮಾಡಲು ಹೊರಟಿ ಸಿಟಿ ರವಿ ಅವರನ್ನು ನಿಯಂತ್ರಿಸುವ ಪ್ರಯತ್ನ ಮಾಡಿದ್ದಾರೆ. ಗೂಂಡಾಗಳಿಂದ ಹಲ್ಲೆ ಮಾಡಿಸಿ, ಪೊಲೀಸರನ್ನು ಬಳಸಿಕೊಂಡು ಕೇಸು ದಾಖಲಿಸಿದ್ದಾರೆ. ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಈ ಭ್ರಷ್ಟ, ಜನವಿರೋಧಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, ಅಂಬೇಡ್ಕರ್ ಅವರನ್ನು ಕಾಂಗ್ರೆಸ್‌ನವರು ಯಾವರೀತಿ ನಡೆಸಿಕೊಂಡರು, ಚುನಾವಣೆಯಲ್ಲಿ ಸೋಲಿಸಿದರು, ಭಾರತ ರತ್ನ ಪ್ರಶಸ್ತಿ ನೀಡದೆ, ಅಂಬೇಡ್ಕರ್‌ಗೆ ಅವಮಾನ ಮಾಡಿದವರಿಗೆ ಪ್ರಶಸ್ತಿ ನೀಡಿದರು. ಇಂತಹ ಕಾಂಗ್ರೆಸ್‌ನವರು ಅಂಬೇಡ್ಕರ್ ಬಗ್ಗೆ ತಮ್ಮ ಬಣ್ಣ ಬಯಲಾಗುತ್ತದೆ ಎಂದು ಪಾರ್ಲಿಮೆಂಟಿನಲ್ಲಿ ಅಮಿತ್ ಶಾ ವಿರುದ್ಧ ಹುನ್ನಾರ ನಡೆಸಿ ವಿಷಯಾಂತರ ಮಾಡಿ ಗೊಂದಲ ಸೃಷ್ಟಿಸಿದರು ಎಂದು ಆರೋಪಿಸಿದರು.ಸುವರ್ಣಸೌಧದಲ್ಲಿ ಸಭಾಪತಿಗಳ ಅನುಮತಿ ಪಡೆಯದೆ ಸಿ.ಟಿ.ರವಿಯವರನ್ನು ಬಂಧಿಸಿದರು. ಅವರ ಮೇಲೆ ಹಲ್ಲೆಯಾಗಿದೆ, ಕೊಲೆ ಬೆದರಿಕೆ ಮಾಡಲಾಗಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕು ಕಾರಣ ಎಂದರು.ಗುಬ್ಬಿ ತಾಲೂಕು ಬಿಜೆಪಿ ಅಧ್ಯಕ್ಷ ಪಂಚಾಕ್ಷರಿ ಮಾತನಾಡಿ, ಸಿ.ಟಿ.ರವಿಯವರೊಂದಿಗೆ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿರುವ ವರ್ತನೆ ಪ್ರಜಾಪ್ರಭುತ್ವದ ಕಗ್ಗೊಲೆ. ಸಿ.ಟಿ.ರವಿಯವರು ಮಾತನಾಡಿವಾಗ ವೈಯಕ್ತಿಕವಾಗಿ ನಿಂದನೆ ಮಾಡಿ , ಅವರ ಮಾತಿಗೆ ಅಡ್ಡಿ ಮಾಡಿದರು. ಹಲ್ಲೆ ಮಾಡಿಸಿದರು. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ, ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್‌ನವರು ಇಂದು ಅಂಬೇಡ್ಕರ್ ಬಗ್ಗೆ ಮಾತನಾಡುತ್ತಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸಿ.ಟಿ.ರವಿ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಸರ್ಕಾರ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡಿ ಸಿ.ಟಿ.ರವಿಯವರನ್ನು ಬಂಧಿಸಿ ಗೂಂಡಾ ವರ್ತನೆ ತೋರಿದೆ. ಸರ್ಕಾರ ಕೂಡಲೇ ರವಿಯವರ ಮೇಲಿನ ಕೇಸನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಸ್.ಶಿವಪ್ರಸಾದ್, ಜಿಲ್ಲಾ ಕಾರ್ಯದರ್ಶಿ ಹೆಚ್.ಎಂ.ರವೀಶಯ್ಯ, ಉಪಾಧ್ಯಕ್ಷ ಭೈರಪ್ಪ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದರಾಮಣ್ಣ, ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ಆಂಜನಪ್ಪ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಚೇತನ್, ನಗರ ಅಧ್ಯಕ್ಷ ಟಿ.ಹೆಚ್.ಹನುಮಂತರಾಜು, ಮುಖಂಡರಾದ ಬನಶಂಕರಿಬಾಬು, ಗಣೇಶ್‌ಪ್ರಸಾದ್, ಕೆ.ಪಿ.ಮಹೇಶ್, ಧನುಷ್, ಮಲ್ಲಿಕಾರ್ಜುನ್, ಮಂಜುನಾಥ್, ಮಹೇಶ್‌ಬಾಬು, ಜಗದೀಶ್, ತಿಪ್ಪೇಸ್ವಾಮಿ, ಬಂಬೂ ಮೋಹನ್, ಅಕ್ಷಯ್ ಚೌಧರಿ, ವಿಜಯಕುಮಾರ್, ನಿಸರ್ಗ ರಮೇಶ್, ಶಬ್ಬೀರ್ ಅಹ್ಮದ್, ರಾಮಚಂದ್ರರಾವ್, ವೆಂಕಟೇಶಾಚಾರ್, ಜಯಶ್ರೀ ಸುರೇಶ್, ಗಾಯತ್ರಿ ಮಂಜುನಾಥ್, ವಸಂತ ಮತ್ತಿತರರು ಭಾಗವಹಿಸಿದ್ದರು.

ಸುವರ್ಣ ಸೌಧದಲ್ಲಿ ಸುಳ್ಳು ಪ್ರಕರಣವನ್ನು ಮಹಿಳೆಯ ಮೇಲಿನ ದೌರ್ಜನ್ಯ ಎಂದು ಬಿಂಬಿಸುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಾಜ್ಯದಲ್ಲಿ ದೌರ್ಜನ್ಯಕ್ಕೀಡಾದ ಎಷ್ಟು ಮಹಿಳೆಯರ ಪರವಾಗಿ ಸ್ಪಂದಿಸಿದ್ದಾರೆ? ಬಾಂಣತಿಯರ ಸರಣಿ ಸಾವಿನ ಪ್ರಕರಣಗಳ ಬಗ್ಗೆ ಉಡಾಫೆಯಿಂದ ನಡೆದುಕೊಂಡ ಲಕ್ಷ್ಮಿ ಹೆಬ್ಬಾಳ್ಕರ್ ಸಚಿವೆಯಾಗಿ ಮುಂದುವರೆಯಲು ನೈತಿಕತೆಯಿಲ್ಲ.

ಜ್ಯೋತಿ ತಿಪ್ಪೇಸ್ವಾಮಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇಷ್ಟು ದಿನದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ, ಜನರನ್ನು ವಂಚಿಸುತ್ತಾ ಬಂದಿದೆ. ತನ್ನ ಆಡಳಿತ ಹುಳುಕನ್ನು ಜನ ಪ್ರಶ್ನೆ ಮಾಡಬಾರದು ಎಂದು ವಿವಾದಗಳನ್ನು ಸೃಷ್ಟಿಮಾಡಿಕೊಂಡು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವನ್ನು ಸರ್ಕಾರ ಮಾಡುತ್ತಿದೆ ಎಂದು ದೂರಿದರು.

ಎಚ್.ಎಸ್.ರವಿಶಂಕರ್ ಹೆಬ್ಬಾಕ, ಜಿಲ್ಲಾ ಬಿಜೆಪಿ ಅಧ್ಯಕ್ಷ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ