ಅಂಬ್ಲಿಕೊಪ್ಪದಲ್ಲಿ ಬೀರಲಿಂಗೇಶ್ವರ ವಿಗ್ರಹ ಧ್ವಂಸಕ್ಕೆ ಆಕ್ರೋಶ

KannadaprabhaNewsNetwork |  
Published : Jul 14, 2026, 02:00 AM IST
ಧಾರವಾಡ ತಾಲೂಕಿನ ಅಂಬ್ಲಿಕೊಪ್ಪ ಗ್ರಾಮದಲ್ಲಿ ಕಿಡಿಗೇಡಿಗಳು ಶ್ರೀ ಬೀರಲಿಂಗೇಶ್ವರ ದೇವರ ವಿಗ್ರಹವನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಿ ಅದೇ ಸ್ಥಳದಲ್ಲಿ ಪ್ರತಿಭಟಿಸಲಾಯಿತು.  | Kannada Prabha

ಸಾರಾಂಶ

ಅಂಬ್ಲಿಕೊಪ್ಪ ಗ್ರಾಮದಲ್ಲಿ ಭಾನುವಾರ ರಾತ್ರಿ ಕಿಡಿಗೇಡಿಗಳು ಶ್ರೀ ಬೀರಲಿಂಗೇಶ್ವರ ದೇವರ ವಿಗ್ರಹವನ್ನು ಧ್ವಂಸಗೊಳಿಸಿರುವ ದುರ್ಘಟನೆ ನಡೆದಿದ್ದು, ಇದರಿಂದಾಗಿ ಇಡೀ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಧಾರವಾಡ:

ಸಮೀಪದ ಅಂಬ್ಲಿಕೊಪ್ಪ ಗ್ರಾಮದಲ್ಲಿ ಭಾನುವಾರ ರಾತ್ರಿ ಕಿಡಿಗೇಡಿಗಳು ಶ್ರೀ ಬೀರಲಿಂಗೇಶ್ವರ ದೇವರ ವಿಗ್ರಹವನ್ನು ಧ್ವಂಸಗೊಳಿಸಿರುವ ದುರ್ಘಟನೆ ನಡೆದಿದ್ದು, ಇದರಿಂದಾಗಿ ಇಡೀ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಅಂಬ್ಲಿಕೊಪ್ಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುರುಬ ಸಮಾಜದ ಸಮುದಾಯವಿದ್ದು, ಗ್ರಾಮದ ಪ್ರಮುಖ ಆರಾಧ್ಯ ದೈವ ಬೀರಲಿಂಗೇಶ್ವರ ದೇವರು. ಈ ದೇವರ ಮೂರ್ತಿಯನ್ನು ದುಷ್ಕರ್ಮಿಗಳು ಹಾಳುಗೆಡವಿರುವುದು ತಿಳಿಯುತ್ತಿದ್ದಂತೆ ನೂರಾರು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಮಾಜದ ಮುಖಂಡ ಮಂಜುನಾಥ ಮಕ್ಕಳಗೇರಿ, ಈ ಹೀನ ಕೃತ್ಯದ ಕುರಿತು ತೀವ್ರ ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದರು.

ಶಾಂತಿ, ಸೌಹಾರ್ದತೆಯಿಂದ ಇರುವ ಗ್ರಾಮದಲ್ಲಿ ಇಂತಹ ದುಷ್ಕೃತ್ಯ ನಡೆಸಿರುವುದು ಅತ್ಯಂತ ಖಂಡನೀಯ. ದೇವರ ವಿಗ್ರಹ ಧ್ವಂಸ ಮಾಡಿ ಸಮಾಜದ ಶಾಂತಿ ಕದಡಲು ಯತ್ನಿಸಿರುವ ವಿಕೃತ ಮನಸ್ಸುಗಳ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಕೃತ್ಯ ನಡೆದ ಸ್ಥಳದಲ್ಲೇ ಕುಳಿತು ಮಕ್ಕಳಗೇರಿ ಗ್ರಾಮಸ್ಥರೊಂದಿಗೆ ಧರಣಿ ನಡೆಸಿದರು. ಪ್ರಮುಖರಾದ ರಾಜೇಶ್ವರಿ ಸಾಲಗಟ್ಟಿ, ಗುರು ಕರಡೆಣ್ಣವರ, ಶಿವಕುಮಾರ ಕಸಳ್ಳಿ ಹಾಗೂ ಗ್ರಾಮಸ್ಥರು ಇದ್ದರು.

ಗ್ರಾಮ ಪಂಚಾಯ್ತಿ ಜಾಗದಲ್ಲಿ ಈ ಮೂರ್ತಿ ಪ್ರತಿಷ್ಠಿಪಿಸಿದ್ದು ಈ ಜಾಗದಲ್ಲಿ ದೇವಸ್ಥಾನ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಆದರೆ, ಜಾಗದ ವಿವಾದ ಎದ್ದು ನ್ಯಾಯಾಲಯದಲ್ಲಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬೀರಲಿಂಗೇಶ್ವರ ದೇವರನ್ನು ಸಮೀಪದ ಪಂಚಾಯ್ತಿ ಜಾಗದಲ್ಲಿಟ್ಟು ಕಳೆದ ಹಲವು ವರ್ಷಗಳಿಂದ ಅಲ್ಲಿಯ ಜನರು ಪೂಜಿಸುತ್ತ ಬಂದಿದ್ದರು. ಇದೀಗ ಭಾನುವಾರ ನಡೆದ ಘಟನೆಯಿಂದ ಗ್ರಾಮಸ್ಥರು ಆಕ್ರೋಶಿತರಾಗಿದ್ದು, ದುಷ್ಕರ್ಮಿಗಳನ್ನು ಬಂಧಿಸಲುವಂತೆ ತೀವ್ರ ಒತ್ತಡ ಹೇಳಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್‌ ಆರ್ಯ ಗ್ರಾಮೀಣ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ದುಷ್ಕೃತ್ಯ ನಡೆಸಿದವರ ಹುಡುಕಾಟ ನಡೆದಿದ್ದು, ಶೀಘ್ರ ಬಂಧಿಸುವುದಾಗಿಯೂ ಗ್ರಾಮಸ್ಥರಿಗೆ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕ ಅದಾಲತ್‌: ಹೈಕೋರ್ಟ್‌ನಲ್ಲಿ 366 ಪ್ರಕರಣ ಇತ್ಯರ್ಥ
ಜೀವ ರಕ್ಷಣೆಯ ಪವಿತ್ರ ವೃತ್ತಿ ವೈದ್ಯರದು