ಅದಾಲತ್ನಲ್ಲಿ ಒಟ್ಟು 1037 ಪ್ರಕರಣ ಕೈಗೆತ್ತಿಕೊಂಡು 366 ಪ್ರಕರಣಗಳ ₹ 16.62 ಕೋಟಿ ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು. ಅಪಘಾತ ಪರಿಹಾರ ಪ್ರಕರಣಗಳ ಜೊತೆಗೆ ಭೂಸ್ವಾಧೀನ ಪರಿಹಾರ ಪ್ರಕರಣ ಇತ್ಯರ್ಥಪಡಿಸಲಾಯಿತು.
ಧಾರವಾಡ:
ಹಿರಿಯ ನ್ಯಾಯಮೂರ್ತಿ ಎಸ್. ಸುನಿಲ್ದತ್ ಯಾದವ ಅವರ ಮಾರ್ಗದರ್ಶನದಲ್ಲಿ ಇಲ್ಲಿಯ ಹೈಕೋರ್ಟ್ ಪೀಠದಲ್ಲಿ ದ್ವಿತೀಯ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ನ್ಯಾಯಮೂರ್ತಿಗಳಾದ ಸಚಿನ ಮಗದುಮ್, ಸಿ.ಎಂ. ಪೂನಚ್ಚ ಮತ್ತು ಗೀತಾ ಕೆ.ಬಿ. ಹಾಗೂ ಅವರೊಂದಿಗೆ ನ್ಯಾಯವಾದಿಗಳು, ಅದಾಲತ್ ಸದಸ್ಯರಾದ ಕೆ.ಎಲ್. ಪಾಟೀಲ, ಸಾಜಿದ ಗೂಡವಾಲಾ, ಎಂ.ಎಸ್. ಹಳ್ಳಿಕೇರಿ ಮತ್ತು ವಿದ್ಯಾವತಿ ಕೊಟ್ಟೂರಶೆಟ್ಟರ್ ಅವರೊಂದಿಗೆ ನಾಲ್ಕು ಪೀಠಗಳನ್ನು ಆಯೋಜಿಸಲಾಗಿತ್ತು.ಅದಾಲತ್ನಲ್ಲಿ ಒಟ್ಟು 1037 ಪ್ರಕರಣ ಕೈಗೆತ್ತಿಕೊಂಡು 366 ಪ್ರಕರಣಗಳ ₹ 16.62 ಕೋಟಿ ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು. ಅಪಘಾತ ಪರಿಹಾರ ಪ್ರಕರಣಗಳ ಜೊತೆಗೆ ಭೂಸ್ವಾಧೀನ ಪರಿಹಾರ ಪ್ರಕರಣ ಇತ್ಯರ್ಥಪಡಿಸಲಾಯಿತು. ಕೃಷ್ಣ ಮೇಲ್ದಂಡೆ ಯೋಜನೆ ಹಂತ-3ರ ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಭೂಮಾಲೀಕರು ಹಾಗೂ ಸರ್ಕಾರ ಸಲ್ಲಿಸಿದ್ದ ಒಟ್ಟು 46 ಮೇಲ್ಮನವಿಗಳನ್ನು ಪರಿಶೀಲಿಸಿ ಒಂದು ಎಕರೆ ನೀರಾವರಿ ಜಮೀನಿಗೆ ₹ 40 ಲಕ್ಷ ಪರಿಹಾರ ಮೊತ್ತಕ್ಕೆ ಭೂಮಿ ಕಳೆದುಕೊಂಡ ರೈತರು ಮತ್ತು ಭೂಸ್ವಾಧೀನ ಅಧಿಕಾರಿಗಳ ನಡುವೆ ಸಮಾಲೋಚನೆ ನಡೆಸುವ ಮೂಲಕ ಮೇಲ್ಮನವಿಗಳನ್ನು ಇತ್ಯರ್ಥಗೊಳಿಸಲಾಯಿತು.
ರಾಜ್ಯ ರಸ್ತೆ ಸಾರಿಗೆಯ-ನೌಕರರಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥದ ಜತೆಗೆ ಹಲವಾರು ರಿಟ್ ಅರ್ಜಿ ಮತ್ತು ಆಸ್ತಿ ವಿವಾದಕ್ಕೆ ಸಂಬಂಧಿಸಿದ ಎರಡು ಹಳೆಯ ಮೇಲ್ಮನವಿ ಪ್ರಕರಣ ಬಗೆಹರಿಸಲು ಉಭಯ ಪಕ್ಷಗಾರರಿಗೆ ತಿಳಿವಳಿಕೆ ನೀಡಿ ಪರಸ್ಪರರು ವ್ಯಾಜ್ಯ ಮತ್ತು ಕೌಟುಂಬಿಕ ಸಂಬಂಧಗಳನ್ನು ಸೌಹಾರ್ದಯುತವಾಗಿ ನಡೆಸಿಕೊಂಡು ಹೋಗುವಂತೆ ತಿಳಿಸಲಾಯಿತು ಎಂದು ಪೀಠದ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಜೆರಾಲ್ಡ್ ರುಡಾಲ್ಫ್ ಮೆಂಡೋನ್ಸಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.