ಕ್ರಿಯಾಶೀಲತೆ ಮೇಲೆ ಬೆಳಕು ಚೆಲ್ಲುವ ಚಿತ್ರಕಲೆ: ಡಾ.ಅನಿಲ್ ಆನಂದ್

KannadaprabhaNewsNetwork |  
Published : Dec 14, 2025, 02:30 AM IST
೧೩ಕೆಎಂಎನ್‌ಡಿ-೧ಮಂಡ್ಯದ ಕಾರ್ಮೆಲ್ ಕಾನ್ವೆಂಟ್‌ನಲ್ಲಿ ಕನ್ನಡಪ್ರಭ-ಸುವರ್ಣನ್ಯೂಸ್ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಖ್ಯಾತ ವೈದ್ಯ ಡಾ.ಅನಿಲ್ ಆನಂದ್ ಬಹುಮಾನ ವಿತರಿಸಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳಲ್ಲಿ ಅದ್ಭುತವಾದ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಚಾತುರ್ಯ ಶಿಕ್ಷಕರು- ಪೋಷರಲ್ಲಿ ಇರಬೇಕು. ಅವರಿಗೆ ಉತ್ತಮ ಪ್ರೋತ್ಸಾಹ, ಮಾರ್ಗದರ್ಶನ ಮಾಡುತ್ತಿರಬೇಕು. ಒಳ್ಳೆಯ ಅವಕಾಶಗಳು ಸಿಕ್ಕಾಗ ಸುಪ್ತ ಪ್ರತಿಭೆ ಹೊರಬರಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಚಿತ್ರಕಲೆ ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆಯನ್ನು ಹೊರಹೊಮ್ಮಿಸುತ್ತದೆ. ಅವರ ಕಲ್ಪನಾ ಲಹರಿ, ಕ್ರಿಯಾಶೀಲತೆಯ ಮೇಲೆ ಬೆಳಕು ಚೆಲ್ಲುತ್ತದೆ. ಇಂತಹ ಕಲೆಯನ್ನು ಮೈಗೂಡಿಸಿಕೊಂಡರೆ ಉತ್ತಮ ಭವಿಷ್ಯ ಕಟ್ಟಿಕೊಳ್ಳುವುದಕ್ಕೆ ಸಾಧ್ಯವಿದೆ ಎಂದು ಖ್ಯಾತ ನರರೋಗ ಮತ್ತು ಮಾನಸಿಕ ತಜ್ಞ ಡಾ.ಅನಿಲ್ ಆನಂದ್ ಅಭಿಪ್ರಾಯಪಟ್ಟರು.

ನಗರದ ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆಯ ಆಡಿಟೋರಿಯಂನಲ್ಲಿ ಕನ್ನಡಪ್ರಭ- ಸುವರ್ಣನ್ಯೂಸ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಕಲೆ ಎಲ್ಲರನ್ನೂ ಅಪ್ಪಿಕೊಳ್ಳುವುದಿಲ್ಲ. ಒಲಿಸಿಕೊಂಡವರನ್ನು ಎಂದಿಗೂ ಕೈಬಿಡುವುದಿಲ್ಲ. ಚಿಕ್ಕ ವಯಸ್ಸಿನಿಂದಲೇ ಚಿತ್ರಕಲೆಯನ್ನು ಆಸಕ್ತಿಯಿಂದ ಕಲಿಯಬೇಕು. ಸಿಗುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಸಾಧನೆಯತ್ತ ಹೆಜ್ಜೆ ಇಡುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸ್ಪರ್ಧೆ ಎಂದ ಮೇಲೆ ಸೋಲು- ಗೆಲುವು ಸಾಮಾನ್ಯ. ಸೋಲಿಗೆ ಅಂಜಬಾರದು. ಸೋಲುಂಟಾಗುವುದಕ್ಕೆ ಮಾಡಿರಬಹುದಾದ ತಪ್ಪುಗಳನ್ನು ತಿದ್ದಿಕೊಂಡು ಗೆಲುವಿನತ್ತ ಮುನ್ನಡೆಯಬೇಕು. ಒಂದು ಸೋಲು ಮುಂದಿನ ಗೆಲುವಿಗೆ ಪಾಠವಾಗಬೇಕು. ಶ್ರದ್ಧೆ, ಆಸಕ್ತಿ, ವಿಭಿನ್ನ ಆಲೋಚನೆ, ವಿಶಿಷ್ಟ ಕಲ್ಪನಾ ಶಕ್ತಿಯನ್ನು ಬೆಳೆಸಿಕೊಂಡು ಚಿತ್ರಕಲೆಯಲ್ಲಿ ತೊಡಗಿದಾಗ ಪರಿಪೂರ್ಣ ಚಿತ್ರಕಲಾವಿದನಾಗಿ ಹೊರಹೊಮ್ಮುವುದಕ್ಕೆ ಸಾಧ್ಯವಾಗಲಿದೆ ಎಂದು ನುಡಿದರು.

ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅದ್ಭುತವಾದ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಚಾತುರ್ಯ ಶಿಕ್ಷಕರು- ಪೋಷರಲ್ಲಿ ಇರಬೇಕು. ಅವರಿಗೆ ಉತ್ತಮ ಪ್ರೋತ್ಸಾಹ, ಮಾರ್ಗದರ್ಶನ ಮಾಡುತ್ತಿರಬೇಕು. ಒಳ್ಳೆಯ ಅವಕಾಶಗಳು ಸಿಕ್ಕಾಗ ಸುಪ್ತ ಪ್ರತಿಭೆ ಹೊರಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಅದನ್ನು ಯಾರಿಂದಲೂ ಕದಿಯುವುದಕ್ಕೂ ಸಾಧ್ಯವಿಲ್ಲ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಉಜ್ವಲವಾಗಿ ಬೆಳೆಸಿಕೊಳ್ಳುವಂತಹ ಶಕ್ತಿ, ಸಾಮರ್ಥ್ಯಗಳೆರಡೂ ನಿಮ್ಮಲ್ಲೇ ಇರುತ್ತದೆ. ಬುದ್ಧಿ ಚಾತುರ್ಯ, ಕುಂಚದಿಂದ ಕಲೆಯನ್ನು ಅಭೂತಪೂರ್ಣವಾಗಿ ಸೃಷ್ಟಿಸುವ ನೈಪುಣ್ಯತೆಯನ್ನು ಸಾಧಿಸಬೇಕು ಎಂದು ಸಲಹೆ ನೀಡಿದರು.

ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಹದೇವು ಮಾತನಾಡಿ, ಮಕ್ಕಳು ಪಠ್ಯ ಚಟುವಟಿಕೆಗಳಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಪಠ್ಯೇತರ ಚಟುವಟಿಕೆಗಳೂ ನೀಡಬೇಕು. ಇದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಉತ್ತಮ ಆಲೋಚನೆಗಳು ಮೂಡಲು ಸಾಧ್ಯವಾಗುತ್ತದೆ. ಚಿತ್ರಕಲೆಯನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡು ಮುನ್ನಡೆದಾಗ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಿದೆ ಎಂದು ಹೇಳಿದರು.

ಚಿತ್ರಕಲೆಗೆ ಹಿಂದೆ ಹೆಚ್ಚಿನ ಅವಕಾಶಗಳು ಇರಲಿಲ್ಲ. ಈಗ ಅವಕಾಶಗಳ ಬಾಗಿಲು ಮುಕ್ತವಾಗಿ ತೆರೆದುಕೊಂಡಿವೆ. ಚಿತ್ರಕಲೆಯನ್ನು ಕಲಿಯುವುದಕ್ಕೆ ನಾನಾ ರೀತಿಯ ದಾರಿಗಳಿವೆ. ಅವೆಲ್ಲವನ್ನೂ ಬಳಸಿಕೊಂಡು ನಿಮ್ಮೊಳಗಿರುವ ಪ್ರತಿಭೆಯನ್ನು ತೆರೆದಿಡುವುದಕ್ಕೆ ಮುಂದಾಗಬೇಕು. ಕುಂಚ ಪ್ರತಿಭೆಯಿಂದ ಮೋಹಕವೆನಿಸುವಂತಹ ಚಿತ್ರಗಳನ್ನು ಮೂಡಿಸಿ ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುವ ಕಲೆಗಾರಿಕೆಯನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

ಕನ್ನಡಪ್ರಭ ವಿಶೇಷ ಯೋಜನೆಗಳ ಸಂಪಾದಕ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಚಿತ್ರಕಲಾ ಸ್ಪರ್ಧೆಯನ್ನು ತಾಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೆ ಆಯೋಜಿಸಲಾಗುತ್ತಿದೆ. ಇದರ ಹಿಂದೆ ಯಾವುದೇ ಸ್ವಾರ್ಥದ ಉದ್ದೇಶವಿಲ್ಲ. ಮಕ್ಕಳ ಮನಸ್ಸು ಕ್ರಿಯಾಶೀಲವಾಗಿ ಬೆಳವಣಿಗೆ ಸಾಧಿಸಬೇಕು ಎಂದು ನುಡಿದರು.

ವಿದ್ಯಾರ್ಥಿಗಳ ವಯಸ್ಸು ಇನ್ನೂ ಚಿಕ್ಕದು. ಆಲೋಚನೆಗಳು ಸಾಗರದಷ್ಟಿದೆ. ಒಬ್ಬೊಬ್ಬರ ಕಲ್ಪನೆಗಳು ನಿರೀಕ್ಷೆಗೂ ಮಿಗಿಲಾಗಿರುತ್ತದೆ. ಅವು ಚಿತ್ರಗಳಲ್ಲಿ ಅಭಿವ್ಯಕ್ತಪಡಿಸಿದಾಗ ನೋಡುಗರನ್ನು ಆಕರ್ಷಿಸುತ್ತದೆ. ಕಲಾವಿದರ ಕುಂಚ ಶೈಲಿಗೆ ಜಗತ್ತೇ ಶರಣಾಗುತ್ತದೆ. ಅಂತಹ ಚಿತ್ರಗಾರಿಕೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಂಡು ಭವಿಷ್ಯದಲ್ಲಿ ಅಪ್ರತಿಮ ಚಿತ್ರಕಾರರಾಗುವಂತೆ ಸಲಹೆ ನೀಡಿದರು.

ಮಳವಳ್ಳಿ ತಾಲೂಕು ಹಲಗೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಸುರೇಂದ್ರ, ಕಾರ್ಮೆಲ್ ಕಾನ್ವೆಂಟ್ ಶಾಲೆಯ ಗಣಿತ ಶಿಕ್ಷಕ ಸಂಗೀತರಾಜ್, ಚಿತ್ರಕಲಾ ಶಿಕ್ಷಕ ಪ್ರಶಾಂತ್ ಇದ್ದರು.

---------

ಚಿತ್ರಕಲೆ ಸ್ಪರ್ಧೆ ವಿಜೇತರು

ಮಂಡ್ಯ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪಾಂಡವಪುರ ತಾಲೂಕು ಚಿನಕುರಳಿಯ ಕೆಪಿಎಸ್ ಶಾಲೆಯ ಸಂದೇಶ್ ಪ್ರಿನ್ಸ್ (ಪ್ರಥಮ),ಮಂಡ್ಯ ಕರ್ನಾಟಕ ಪಬ್ಲಿಕ್ ಶಾಲೆಯ ವಿ.ಹೇಮಂತ್‌ಕುಮಾರ್ (ದ್ವಿತೀಯ), ಮಂಡ್ಯ ಕಾರ್ಮೆಲ್ ಕಾನ್ವೆಂಟ್‌ನ ಆರ್. ಯಶಿಕ ಶ್ರಾವಣಿ (ತೃತೀಯ), ಮಂಡ್ಯ ಸಂತ ಜೋಸೆಫರ ಬಾಲಕಿಯರ ಪ್ರೌಢಶಾಲೆಯ ಎಸ್.ಶ್ರೀಲಕ್ಷ್ಮೀ (ಸಮಾಧಾನಕರ) ಮತ್ತು ನಾಗಮಂಗಲ ತಾಲೂಕು ಬಿ.ಜಿ.ನಗರದ ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆಯ ಗಾನವಿ ಸಿ.ಗೌಡ (ಸಮಾಧಾನಕರ) ಬಹುಮಾನ ಪಡೆದುಕೊಂಡರು.

ಪ್ರಥಮ ಬಹುಮಾನ ೧೦ ಸಾವಿರ ರು., ದ್ವಿತೀಯ ಬಹುಮಾನ ೭ ಸಾವಿರ ರು., ತೃತೀಯ ಬಹುಮಾನ ೪ ಸಾವಿರ ರು., ಸಮಾಧಾನಕರ ಬಹುಮಾನ ತಲಾ ೨ ಸಾವಿರ ರು., ಪ್ರಶಸ್ತಿ ಫಲಕ, ಪ್ರಮಾಣಪತ್ರಗಳನ್ನು ನೀಡಲಾಯಿತು. ಅಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಚೇತನ್, ಪ್ರಕಾಶ್ ಮತ್ತು ಸೋಮು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ