ಹಗರಿಬೊಮ್ಮನಹಳ್ಳಿ: ಸಿದ್ದರಾಮಯ್ಯನವರ ದೂರದರ್ಶಿತ್ವದ ಪರಿಣಾಮವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಸಾಮಾನ್ಯ ಜನರ ಬದುಕಿಗೆ ಆರ್ಥಿಕ ಭದ್ರತೆ ಒದಗಿಸುವ ಮೂಲಕ ಸ್ವಾವಲಂಬಿ ಜೀವನಕ್ಕೂ ಕಾರಣವಾಗಿವೆ ಎಂದು ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಸೊನ್ನದ ಗುರುಬಸವರಾಜ್ ಅಭಿಪ್ರಾಯಪಟ್ಟರು.
ಕಳೆದ ಸಭೆಯ ನಡಾವಳಿಗಳನ್ನು ಮತ್ತು ಪರಿಹರಿಸಲಾಗಿರುವ ಸಮಸ್ಯೆಗಳನ್ನು ಸಭೆಯಲ್ಲಿ ಮಂಡಿಸುವಂತೆ ಅಧಿಕಾರಿಗಳಿಗೆ ಅವರು ಕೋರಿದರು.
ಸಾರಿಗೆ ಅಧಿಕಾರಿ ಸಂತೋಷ್ ನಾಯ್ಕ ಮಾತನಾಡಿ, ಕಳೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಡಿಸಿದ್ದ ಬೇಡಿಕೆಯಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಪಟ್ಟಣದಿಂದ ಚಿಲಗೋಡು, ಗುಳೇದಾಳು, ಆನೇಕಲ್ ತಾಂಡಾಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಟ್ಟಣದ ಬಸ್ ಡಿಪೋಗೆ 15 ಹೊಸ ಬಸ್ಗಳು ಮಂಜೂರಾಗಿದ್ದು, ತಾಲೂಕಿನ ಬಹುತೇಕ ಕಡೆ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.ಶಕ್ತಿ ಯೋಜನೆ ಪ್ರಾರಂಭವಾದಾಗಿನಿಂದ ತಾಲೂಕಿನಲ್ಲಿ ಈ ವರೆಗೂ 1,85,00,731 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಒಟ್ಟು ಮೊತ್ತ ₹74,80,80,233 ಇಲಾಖೆಗೆ ಸಂದಾಯವಾಗಿದೆ ಎಂದು ವರದಿ ಮಂಡಿಸಿದರು.
ಜೆಸ್ಕಾಂ ಎಇಇ ಹೇಮರೆಡ್ಡಿ ಮಾತನಾಡಿ, ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಮರು ಸರ್ವೆ ಕಾರ್ಯ ಶೇ. 95 ಮುಗಿದಿದೆ ಎಂದು ಸ್ಪಷ್ಟಪಡಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಾಧಿಕಾರದ ಉಪಾಧ್ಯಕ್ಷ ಜಂದಿಸಾಬ್ ಮಾತನಾಡಿ, ಗ್ಯಾರಂಟಿ ಯೋಜನೆಗಳು ಕ್ಷೇತ್ರದ ಅಭಿವೃದ್ಧಿಗೂ ಪೂರಕವಾಗಿದ್ದು, ಸಮರ್ಪಕ ಅನುಷ್ಠಾನಕ್ಕಾಗಿ ಅಧಿಕಾರಿಗಳು ಶ್ರಮಿಸಲು ಸೂಚಿಸಿದರು.