ವಿವಾದಿತ ಪರಶುರಾಮ ಥೀಮ್ ಪಾರ್ಕ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾಂಗ್ರೆಸ್ ನಡುವೆ ಜಟಾಪಟಿ ಮುಂದುವರಿದಿದ್ದು ಈ ಬಗ್ಗೆ ಶನಿವಾರ ಒಟ್ಟು 20 ಮಂದಿಯ ವಿರುದ್ಧ ಕೇಸ್ ದಾಖಲಾಗಿದೆ.
ಕಾರ್ಕಳ: ವಿವಾದಿತ ಪರಶುರಾಮ ಥೀಮ್ ಪಾರ್ಕ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾಂಗ್ರೆಸ್ ನಡುವೆ ಜಟಾಪಟಿ ಮುಂದುವರಿದಿದ್ದು ಈ ಬಗ್ಗೆ ಶನಿವಾರ ಒಟ್ಟು 20 ಮಂದಿಯ ವಿರುದ್ಧ ಕೇಸ್ ದಾಖಲಾಗಿದೆ. ನಿರ್ಮಿತಿ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿದ ನಂತರ ಅ.19ರಂದು ಕೆಲವರು ಪರಶುರಾಮ ಥೀಮ್ ಪಾರ್ಕ್ನಲ್ಲಿ ಮೂರ್ತಿಯ ಪಕ್ಕಕ್ಕೆ ಹೋಗಿ ಮೂರ್ತಿಯ ಪಾದಕ್ಕೆ ಸುತ್ತಿಗೆಯಿಂದ ಹೊಡೆದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ. ಇದರಿಂದ ನನ್ನ ಮತ್ತು ಇತರ ಸಮಾನ ಮನಸ್ಕರ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿದೆ ಎಂದು ದಿವ್ಯಾ ನಾಯಕ್ ಎಂಬವರು ಸುಹಾಸ್ ಶೆಟ್ಟಿ ಮುಟ್ಟುಪಾಡಿ, ಮಹಾವೀರ್ ಹೆಗ್ಡೆ ಸುಮಿತ್ ಶೆಟ್ಟಿ ಕೌಡೂರು, ವಿಖ್ಯಾತ್ ಶೆಟ್ಟಿ, ಮುಸ್ತಾಫ ಜಾರ್ಕಳ, ರಾಕೇಶ್ ಶೆಟ್ಟಿ ಕುಕ್ಕುಂದೂರು ಹಾಗೂ ಸಮೃದ್ಧಿ ಪ್ರಕಾಶ್ ಶೆಟ್ಟಿ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 13 ಮಂದಿ ವಿರುದ್ಧ ದಾಖಲು: ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸದ್ಯ ಥೀಮ್ ಪಾರ್ಕ್ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ಈ ಆದೇಶವನ್ನು ಉಲ್ಲಂಘಿಸಿ ಉಮಿಕಲ್ ಬೆಟ್ಟದ ಮೇಲೆ ಹೋಗಿ ಪರಶುರಾಮ ವಿಗ್ರಹಕ್ಕೆ ಹೊದಿಸಿದ ರಕ್ಷಣಾ ಕವಚವನ್ನು ಹರಿದು ಹಾಕಿ ಕಂಚಿನ ಮೂರ್ತಿಯ ಮೇಲಿದ್ದ ಫಿನಿಷಿಂಗ್ ಲೇಪನವನ್ನು ಹರಿದು ಮೂರ್ತಿಯ ಮೂಲ ಸ್ವರೂಪವನ್ನು ವಿರೂಪಗೊಳಿಸಿ ಹಾನಿ ಮಾಡಿ ಸರ್ಕಾರಕ್ಕೆ ನಷ್ಟವುಂಟುಮಾಡಿದ್ದಾರೆ ಎಂದು ಎರ್ಲಪಾಡಿ ಗ್ರಾಮದ ಗೋವಿಂದೂರು ಜೋಗಬೆಟ್ಟು ಮನೆಯ ಸುನೀಲ್ ಹೆಗ್ಡೆ ಎಂಬವರು 13 ಮಂದಿಯ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುನಿಲ್ ನೀಡಿದ ದೂರಿನ ಪ್ರಕಾರ ಪೊಲೀಸರು ಶುಭದ ರಾವ್, ದೀಕ್ಷಿತ್ ಶೆಟ್ಟಿ ದೊಂಡೇರಂಗಡಿ, ದೀಪಕ್ ಶೆಟ್ಟಿ ದೊಂಡೇರಂಗಡಿ, ಸುಬಿತ್ ಎನ್. ಆರ್., ವಿವೇಕಾನಂದ ಶೆಣೈ, ಯೋಗೀಶ ನಯನ್ ಇನ್ನಾ, ಸೂರಜ್ ಶೆಟ್ಟಿ ನಕ್ರೆ, ಪ್ರದೀಪ್ ಶೆಟ್ಟಿ ನಲ್ಲೂರು, ಅಲ್ಪಾಜ್, ಐವಾನ್ ಮಿರಾಂಡ ರಂಗನಪಲ್ಕೆ ದಿವ್ಯಾ ನಾಯಕ್ ನೀರೆ, ಕೃಷ್ಣ ಶೆಟ್ಟಿ ನಲ್ಲೂರು, ಹರೀಶ್ ಪೂಜಾರಿ ಕಡಲ ಮತ್ತಿತರರ ವಿರುದ್ಧ ಕೇಸು ದಾಖಲಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.