ಮುಂಡರಗಿ ಪಟ್ಟಣದ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಶುಕ್ರವಾರ ಪಾಲಕ-ಶಿಕ್ಷಕರ ಮಹಾಸಭೆ ನಡೆಯಿತು.
ಮುಂಡರಗಿ: ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ ಹಿರಿದಾಗಿದ್ದು, ಶಾಲಾ ಶಿಕ್ಷಕರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಪಾಲಕರು ಮಕ್ಕಳು ಕಲಿಕೆಯಲ್ಲಿ ಸಾಧಿಸುತ್ತಿರುವ ಪ್ರಗತಿಯ ಬಗ್ಗೆ ನಿಗಾ ವಹಿಸಬೇಕು. ಮನೆಯಲ್ಲಿ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿ ಕೊಡಬೇಕು ಎಂದು ಚಿಕ್ಕ ಮಕ್ಕಳ ತಜ್ಞವೈದ್ಯ ಡಾ. ಗೋಣೇಶ ಮೇವುಂಡಿ ಹೇಳಿದರು.
ಪಟ್ಟಣದ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಾಲಕ-ಶಿಕ್ಷಕರ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಹಕ್ಕುಗಳನ್ವಯ ಮಕ್ಕಳಿಗೆ ಆರೋಗ್ಯ ಮತ್ತು ಶಿಕ್ಷಣ ಆದ್ಯತೆಯಾಗಬೇಕು. ಪ್ರತಿಯೊಬ್ಬ ತಂದೆ, ತಾಯಿ ಬಾಲ್ಯದಲ್ಲಿದ್ದಾಗ ಈ ಎರಡು ವಿಷಯಗಳ ಬಗ್ಗೆ ಗಮನ ಹರಿಸಿ, ಮಕ್ಕಳನ್ನು ಪೋಷಿಸಿ ಬೆಳೆಸಿದರೆ ಭವಿಷ್ಯದಲ್ಲಿ ಕುಟುಂಬದ ಜವಾಬ್ದಾರಿಯುತ ವ್ಯಕ್ತಿಯಾಗಿ, ನಾಡಿನ ಶಕ್ತಿಯಾಗಿ ಸಬಲರಾಗಿ ಬೆಳೆಯುತ್ತಾರೆ. ಪಾಲಕರಿಗೆ ಮಕ್ಕಳ ಆರೋಗ್ಯಕ್ಕೆ ಪೂರಕ ಆಹಾರದ ನೀಡುವ ಕುರಿತು ತಿಳಿವಳಿಕೆ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯ ಡಾ. ನಿಂಗು ಸೊಲಗಿ ಮಾತನಾಡಿ, ಶಾಲೆಗಳ ಅಭಿವೃದ್ಧಿಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ, ಮಕ್ಕಳ ನಿಯಮಿತ ಹಾಜರಾತಿ, ಶಾಲೆಯಲ್ಲಿ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವುದು, ಮಕ್ಕಳ ಸ್ವಯಂ ಕಲಿಕೆಗೆ ಪೂರಕವಾಗಿ ಪಾಲಕ ಶಿಕ್ಷಕರ ಗಮನ ಹರಿಸುವಿಕೆಯ ಕುರಿತು ವಿಸ್ತೃತವಾಗಿ ತಿಳಿಸಿದರು. ಶಿಕ್ಷಕ ಎಂ.ಆರ್. ಗುಗ್ಗರಿ ಅವರು ಎಲ್.ಬಿ.ಎ. ಆಧಾರಿತ ಘಟಕವಾರು ಮೌಲ್ಯಾಂಕನ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಎಫ್.ಎಲ್.ಎನ್. ಆಧರಿಸಿ ವಿಶೇಷ ತರಬೇತಿ ನೀಡುವ ಕುರಿತು ಮಾಹಿತಿ ನೀಡಿದರು.
ಕಲಿಕೋಪಕರಣ ಪ್ರದರ್ಶನ: ಶಾಲೆಯಲ್ಲಿರುವ ಕಲಿಕೋಪಕರಣಗಳು, ಕ್ರೀಡಾ ಸಾಧನ-ಸಲಕರಣೆಗಳು, ವಿಜ್ಞಾನ ಮಾದರಿಗಳು, ಗಣಿತ ಸಾಮಗ್ರಿಗಳು ಹಾಗೂ ವಾಚನಾಲಯದ ಮಕ್ಕಳ ಪುಸ್ತಕಗಳನ್ನು ಪಾಲಕ-ಪೋಷಕರು ವೀಕ್ಷಿಸಲು ನೆರವಾಗುವಂತೆ ತರಗತಿ ಕೋಣೆಗಳಲ್ಲಿ ಪ್ರದರ್ಶಿಸಲಾಗಿತ್ತು. ಮಕ್ಕಳ ಕಲಿಕಾ ಪ್ರಗತಿಯ ಕುರಿತು ಶಿಕ್ಷಕರೊಂದಿಗೆ ಪಾಲಕರು ಸಂವಾದ ನಡೆಸಿದರು.
ದೇಣಿಗೆ: ಶಿಕ್ಷಕ ಎಂ.ಆರ್. ಗುಗ್ಗರಿ ಅವರು ಶಾಲೆಗಳಿಗೆ ಮಕ್ಕಳ ಊಟಕ್ಕೆ ಅನುಕುಲವಾಗುವಂತೆ 50 ಸ್ಟೀಲ್ ತಟ್ಟೆಗಳನ್ನು ದೇಣಿಗೆ ನೀಡಿದರು. ಇದೇ ರೀತಿ ಮಕ್ಕಳ ವೈದ್ಯರಾದ ಡಾ. ಗೋಣೇಶ ಮೇವುಂಡಿ ಅವರು ಶಾಲಾ ಮಕ್ಕಳ ಕಲಿಕೆಗೆ ಆಧುನಿಕ ಸ್ಪರ್ಶ ನೀಡಲು ಮಲ್ಟಿ ಮಿಡಿಯಾ ತರಗತಿಗಳ ಕಲ್ಪನೆ ಸಾಕಾರಗೊಳಿಸಲು ಎರಡು ಟಿವಿ ಕೊಡಿಸುವ ವಾಗ್ದಾನ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.