ಹನುಮಸಾಗರ: ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಬೇಕು ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ನ ಎಸ್ಡಿಎಂಸಿ ಉಪಾಧ್ಯಕ್ಷ ಬಸವರಾಜ ದ್ಯಾವಣ್ಣನವರ ಹೇಳಿದರು.
ಕ್ರೀಡೆ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಯುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡೆಗೂ ಸಮಾನ ಆದ್ಯತೆ ನೀಡಬೇಕು ಎಂದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ನಾಗರಾಜ ಬಿಳಿಯಪ್ಪನವರ ಮಾತನಾಡಿ, ಇಲಾಖೆಯ ನಿಯಮಗಳ ಚೌಕಟ್ಟಿನಲ್ಲಿ ಕ್ರೀಡಾಕೂಟ ಯಶಸ್ವಿಯಾಗಿ ನಡೆಸಲಾಗುತ್ತಿದ್ದು, ಪ್ರತಿಯೊಂದು ಪಂದ್ಯದಲ್ಲೂ ನಿರ್ಣಾಯಕರ ನಿರ್ಣಯವೇ ಅಂತಿಮವಾಗಿರುತ್ತದೆ. ವಿದ್ಯಾರ್ಥಿಗಳು ಯಾವುದೇ ರೀತಿಯ ಒತ್ತಡ ಅಥವಾ ಗೊಂದಲಕ್ಕೆ ಒಳಗಾಗದೆ ಕ್ರೀಡಾ ಸ್ಫೂರ್ತಿಯಿಂದ ಆಟವಾಡಬೇಕು. ಉತ್ತಮವಾಗಿ ಆಡುವ ವಿದ್ಯಾರ್ಥಿಗಳಿಗೆ ಶಿಕ್ಷಕರು, ಪೋಷಕರು ಹಾಗೂ ಸಹಪಾಠಿಗಳು ಪ್ರೋತ್ಸಾಹ ನೀಡಬೇಕು. ಕ್ರೀಡಾಕೂಟದಲ್ಲಿ ನಿರ್ಣಯ ನೀಡುವ ಅಧಿಕಾರ ನಿರ್ಣಾಯಕರಿಗೆ ಮಾತ್ರ ಇದ್ದು, ಹೊರಗಿನವರು ಅನಗತ್ಯ ಮಧ್ಯಪ್ರವೇಶಿಸಿ ಗೊಂದಲ ಸೃಷ್ಟಿಸಬಾರದು. ನಿರ್ಣಾಯಕರು ಸಹ ಯಾವುದೇ ಒತ್ತಡಕ್ಕೆ ಒಳಗಾಗದೆ ಆತ್ಮಸಾಕ್ಷಿಯಾಗಿ ಹಾಗೂ ನಿಯಮಾನುಸಾರವಾಗಿ ಪಂದ್ಯ ನಡೆಸಬೇಕು ಎಂದರು.ಕಾರ್ಯಕ್ರಮದಲ್ಲಿ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಗಯ್ಯ ವಸ್ತ್ರದ, ನಿವೃತ್ತ ದೈಹಿಕ ಶಿಕ್ಷಕ ಅಬ್ದುಲ್ ಕರೀಂ ವಂಟೆಳಿ, ಚಂದಾಲಿಂಗಪ್ಪ ಹಳ್ಳೂರು, ಇಕ್ಬಾಲ್ ಡಾಲಾಯತ್, ಬಸವರಾಜ ಚಿನಿವಾಲರ, ಪ್ರಭುದೇವ ಬ್ಯಾಳಿ, ಶರಣಪ್ಪ ಬೋದೂರು, ಸಿದ್ದಪ್ಪ ಚಿನಿವಾಲರ, ಉಪಪ್ರಾಚಾರ್ಯ ಮಹಾಂತಯ್ಯ ಸೊಪ್ಪಿಮಠ, ಮುಖ್ಯ ಶಿಕ್ಷಕ ಶರಣಪ್ಪ ಗುಳೇದ, ಹುಸೇನಸಾಬ ಕಳಕಾಪುರ, ರವಿಕಾಂತಯ್ಯ ಅಮಲಿಕೊಪ್ಪಮಠ, ವಸಂತ ರಾಜೂರು, ಮಲ್ಲಪ್ಪ ಹೆಬ್ಬಾಳ, ನಾಗಪ್ಪ ಗಡ್ಡಿಗನೂರು ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.