ಗಜೇಂದ್ರಗಡ: ಹೋಳಿ ಹಬ್ಬದ ಪ್ರಯುಕ್ತ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟ ರತಿ- ಕಾಮಣ್ಣರಿಗೆ ವಿವಿಧ ಪೂಜೆ ಪುನಸ್ಕಾರಗಳೊಂದಿಗೆ ಬುಧವಾರ ಅದ್ಧೂರಿಯಾಗಿ ಮೂರ್ತಿಗಳ ಮೆರವಣಿಗೆ ಹಾಗೂ ಬಣ್ಣದೋಕುಳಿ ಸಂಭ್ರಮದಿಂದ ನಡೆಯಿತು.
ಯುವಕರು ಹಾಗೂ ಮಹಿಳೆಯರು ರಂಗದೋಕುಳಿಯನ್ನು ಸಂಭ್ರಮದಿಂದ ಆಚರಿಸಿದರು. ಪರಸ್ಪರ ಬಣ್ಣ ಎರಚಿದರು. ಬಣ್ಣದಲ್ಲಿ ಮಿಂದೆದ್ದ ಯುವತಿಯರ ಮೋಜಿನಾಟ ಗಮನ ಸೆಳೆಯಿತು.ಕೆಲವರು ಸ್ವಇಚ್ಛೆಯಿಂದ ಬಣ್ಣದೋಕುಳಿಯಲ್ಲಿ ಭಾಗವಹಿಸಿದ್ದರೆ, ಬಣ್ಣದಿಂದ ದೂರ ಇರಬಯಸಿದವರಿಗೆ ಗೆಳತಿಯರು, ಬಂಧು-ಬಾಂಧವರು ಒತ್ತಾಯದಿಂದ ಬಣ್ಣ ಹಾಕಿದರು. ಯುವತಿಯರು, ಮಕ್ಕಳು ಪರಸ್ಪರ ಬಣ್ಣ ಎರಚಿ, ಹಲಗೆ ಬಾರಿಸುವ ಮೂಲಕ ಸಂತಸಪಟ್ಟರು. ರತಿ- ಕಾಮಣ್ಣನಿಗೆ ವಿಶೇಷ ಉಡಿಗೆ- ತೊಡಿಗೆ ಮೂಲಕ ಅಲಂಕರಿಸಿ ಭಕ್ತರು ತಮ್ಮ ಬೇಡಿಕೆಗಳನ್ನು ಸಲ್ಲಿಸುವ ಮೂಲಕ ಟ್ರ್ಯಾಕ್ಟರ್ ವಾಹನದಲ್ಲಿ ರತಿ- ಮನ್ಮಥರನ್ನು ಕುಳ್ಳಿರಿಸಿ, ವೇಷ ಧರಿಸಿದ ಗಂಡುಮಕ್ಕಳು, ಗೂಟಕ್ಕೆ ಬಡಿದ ಕೃತಕ ಶವದ ಮುಂದೆ ಬೊಬ್ಬೆ ಹಾಕಿ ಅತ್ತು, ಬಾಯಿ ಬಡಿದುಕೊಂಡು ಮನರಂಜಿಸುವುದು ಹೋಳಿ ಹಬ್ಬದ ಒಂದು ವಿಶೇಷವಾಗಿತ್ತು.ಕಳೆದ ಶಿವರಾತ್ರಿ ಅಮಾವಾಸ್ಯೆ ನಂತರ ಆಕಾಶದಲ್ಲಿ ಚಂದಿರ ಕಂಡಾಗ ಚಿಕ್ಕ ಮಕ್ಕಳು, ಯುವಕರು ತಂಡೋಪ ತಂಡವಾಗಿ ಹಲಗೆ ಬಾರಿಸುತ್ತಾ, ಕೃತಕ ಶವ ಮಾಡಿ ಶವದ ಹೆಸರಿನಲ್ಲಿ ಆಡ್ಯಾಡಿಕೊಂಡು ಅಳುತ್ತಾ ಬಾಯಿ, ಬಾಯಿ ಬಡಿದುಕೊಂಡರು. ಹೀಗೆ ೧೫ ದಿನಗಳ ಕಾಲ ನಡೆದ ಹೋಳಿ ಆಚರಣೆ ಹುಣ್ಣಿಮೆ ಮರುದಿನ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಪಟ್ಟಣದ ಕೊಳ್ಳಿಯವರ ಕತ್ರಿ, ಡೊಳ್ಳಿನವರ ಓಣಿ, ವಾಣಿಪೇಟೆ, ಸಿಂಹಾಸನ ಪೇಟೆ, ಕಾಗಿಯವರ ಓಣಿ ಮುಂತಾದ ಕಡೆ ಪ್ರತಿಷ್ಠಾಪಿಸಿದ ರತಿ, ಮನ್ಮಥರರನ್ನು ಮೆರವಣಿಗೆ ನಡೆದ ಬಳಿಕ ಕಾಮದಹನ ನಡೆಸಿ, ಕೊನೆಯಲ್ಲಿ ಹೊಯ್ಯಕೊಂಡ ಬಾಯಿಗೆ ಹೋಳಿಗೆ,ತುಪ್ಪ ಹಾಕಿ ಸಂತಸ ಪಡೆದು, ಹೋಳಿ ಹಬ್ಬಕ್ಕೆ ವಿದಾಯ ಹೇಳಿದರು.