ಮಂಗಳೂರು: ಜಾದೂ ಕ್ಷೇತ್ರದಲ್ಲಿ ವಿನೂತನ ಪ್ರಯೋಗಗಳ ಸರದಾರನಾಗಿ ಕೀರ್ತಿ ಪಡೆದ ಅಂತಾರಾಷ್ಟ್ರೀಯ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್, ಕಡಲಾಚೆಯ ಕೊಲ್ಲಿ ರಾಷ್ಟ್ರದ ಬಹರೈನ್ನಲ್ಲಿ ಮೈಂಡ್ ಮಿಸ್ಟರಿ ಮ್ಯಾಜಿಕ್ ಪ್ರದರ್ಶಿಸಿ ಕೊಲ್ಲಿ ರಾಷ್ಟ್ರದ ಜನರನ್ನು ರಂಜಿಸಿದರು.
ಬಹರೈನ್ನ ಮನಾಮ ಸಾಂಸ್ಕೃತಿಕ ಸಭಾಂಗಣದಲ್ಲಿ ಸೆಪ್ಟೆಂಬರ್ 8ರಂದು ನಡೆದ ಬಹರೈನ್ ಕನ್ನಡ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮ್ಯಾಜಿಕ್ ಮೈಂಡ್ ಮಿಸ್ಟರಿ ಕಾರ್ಯಕ್ರಮ ಪ್ರಸ್ತುತಪಡಿಸಿ, ಜಾದೂ ವಿಸ್ಮಯದೊಂದಿಗೆ ವಿಭಿನ್ನ ಮನರಂಜನೆ ನೀಡಿ ಕೊಲ್ಲಿ ರಾಷ್ಟ್ರದ ಕನ್ನಡಿಗರನ್ನು ಸೇರಿದಂತೆ ಸ್ಥಳೀಯರಿಗೆ ಖುಷಿ ನೀಡಿದರು.ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಆನಿವಾಸಿ ಭಾರತೀಯ ವೇದಿಕೆ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕರು ಜಾದೂ ವಿಸ್ಮಯದ ಮೋಡಿಗೆ ಆಶ್ಚರ್ಯ ಚಕಿತರಾದರು.
ಸಭಾಂಗಣದಲ್ಲಿ ತುಂಬಿದ ಜನಸ್ತೋಮದ ಮಧ್ಯೆ ಕುದ್ರೋಳಿ ಗಣೇಶ್ ಅವರ ಮೈಂಡ್ ಮ್ಯಾಜಿಕ್ ಸಮ್ಮೋಹಿನಿಗೆ ಎಲ್ಲರೂ ಬೆರಗಾದರು. ಸುಪ್ತ ಮನಸ್ಸಿನ ಗ್ರಹಿಕೆ ಗುರುತಿಸುವ ಜಾದೂ ಮೂಲಕ ಅದ್ಭುತ ನೆನಪಿನ ಸುರುಳಿಯನ್ನು ಬಿಚ್ಚಿಕೊಡುವ ಮತ್ತು ಪ್ರೇಕ್ಷಕರು ಪಾಲ್ಗೊಳ್ಳುವ ಪ್ರದರ್ಶನಗಳು ಜನಮನ ಸೂರೆಗೊಂಡವು.ಈ ಸಂದರ್ಭ ಮಾತನಾಡಿದ ಕುದ್ರೋಳಿ ಗಣೇಶ್, ನನ್ನ ಬದುಕಿನ ಮೊದಲನೇ ವಿದೇಶದ ಪ್ರಯಾಣ ಬಹರೈನ್ ರಾಷ್ಟ್ರವಾಗಿದ್ದು, 1997ರಲ್ಲಿ ನೀಡಿದ ಪ್ರದರ್ಶನ ಸೇರಿದಂತೆ ಒಟ್ಟು ಮೂರು ಬಾರಿ ಬಹರೈನ್ಗೆ ಆಗಮಿಸಿ ಕನ್ನಡ ಮನಸ್ಸುಗಳೊಂದಿಗೆ ಬೆರೆಯುವ ಅವಕಾಶ ಸಿಕ್ಕಿದೆ. ಕೊಲ್ಲಿ ರಾಷ್ಟ್ರದ ಕನ್ನಡ ಸಂಘಗಳಲ್ಲಿ ಬಹರೈನ್ ಕನ್ನಡ ಸಂಘವು ಸಾಂಸ್ಕೃತಿಕವಾಗಿ ಕನ್ನಡಿಗರನ್ನು ಬೆಸೆಯುವ ಮಹತ್ತರ ಕೆಲಸ ನಿರ್ವಹಿಸುತ್ತಿದೆ. ಇಂತಹ ಕಾರ್ಯಕ್ರಮಗಳಲ್ಲಿ ಜಾದು ಪ್ರದರ್ಶನ, ಅದರಲ್ಲೂ ಇತ್ತೀಚಿನ ವಿಶಿಷ್ಟ ಪ್ರಯೋಗ ಮೈಂಡ್ ಮಿಸ್ಟರಿ ಪ್ರದರ್ಶನಕ್ಕೆ ಅವಕಾಶ ಕೊಟ್ಟಿರುವುದಕ್ಕೆ ಧನ್ಯ ಎಂದು ಹೇಳಿದರು.ಬಹರೈನ್ ಕನ್ನಡ ಸಂಘದ ನೂತನ ಅಧ್ಯಕ್ಷ ಅಜಿತ್ ಬಂಗೇರ ಅವರು ಕುದ್ರೋಳಿ ಗಣೇಶ್ ಅವರಿಗೆ ಕನ್ನಡ ಸಂಘದ ಪರವಾಗಿ ವಿಶೇಷ ಸನ್ಮಾನ ಮಾಡಿ, ಸ್ಮರಣಕೆಯನ್ನಿತ್ತು ಗೌರವಿಸಿದರು.