ಜನರ ಭಾವನೆಗೆ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ

KannadaprabhaNewsNetwork |  
Published : Mar 02, 2026, 02:30 AM IST
1ಕೆಪಿಎಲ್26 ಕೊಪ್ಪಳ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟನಾ ಸಮಾರಂಭ 1ಕೆಪಿಎಲ್27 ಕೊಪ್ಪಳ ನಗರದಲ್ಲಿ  ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಮೆರವಣಿಗೆಯಲ್ಲಿ ಭಾಗವಹಿಸಿರುವುದು. | Kannada Prabha

ಸಾರಾಂಶ

ತುಂಗಭದ್ರಾ ಕ್ರಸ್ಟ್ ಅಳವಡಿಸುವ ಕಾರ್ಯಕ್ಕೂ ರಾಜ್ಯ ಸರ್ಕಾರ ಹಣ ಕೊಟ್ಟು, ವಾಪಸ್‌ ಪಡೆಯುವುದು ಎಂದರೆ ಏನರ್ಥ

ಕೊಪ್ಪಳ: ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಅರಿಯಬೇಕು. ಕಾರ್ಖಾನೆಗಳ ತ್ಯಾಜ್ಯದಿಂದ ಸಂಕಷ್ಟದಲ್ಲಿ ಇರುವ ಜನರ ಭಾವನೆಗೆ ಸ್ಪಂದಿಸಬೇಕು. ಅದು ಬಿಟ್ಟು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಇಲ್ಲಿನ ಶಿವಶಾಂತ ಮಂಗಲಭವನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಆದರೆ, ಕಾರ್ಖಾನೆಗಳಿಗೆ ಅನುಮತಿ ನೀಡುವ ಕೀಲಿ ಕೈ ರಾಜ್ಯ ಸರ್ಕಾರದ ಬಳಿ ಇದೆ. ಹೀಗಾಗಿ, ಸ್ಥಳೀಯ ಜನಪ್ರತಿನಿಧಿಗಳು ಜನರ ಭಾವನೆಗೆ ಸ್ಪಂದಿಸಿ, ಅವರ ಸಮಸ್ಯೆ ನೀಗಿಸುವ ದಿಸೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಎಚ್ಚರಿಸಿದರು.

ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳೇ ಹೇಳಿದ್ದಾರೆ. ಆದರೂ ಸ್ಪಂದಿಸದಿದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದ ಅವರು, ಶಾಸಕ, ಸಂಸದರ ಹೆಸರು ಹೇಳದೆಯೇ ತೀವ್ರ ತರಾಟೆಗೆ ತೆಗೆದುಕೊಂಡರು.

ತುಂಗಭದ್ರಾ ಕ್ರಸ್ಟ್ ಅಳವಡಿಸುವ ಕಾರ್ಯಕ್ಕೂ ರಾಜ್ಯ ಸರ್ಕಾರ ಹಣ ಕೊಟ್ಟು, ವಾಪಸ್‌ ಪಡೆಯುವುದು ಎಂದರೆ ಏನರ್ಥ? ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಸಂಕಷ್ಟಕ್ಕೆ ಸಿಲುಕಿರುವಾಗ ಅದನ್ನು ತುರ್ತಾಗಿ ಮಾಡಬೇಕಾಗಿದ್ದರೂ ಅದಕ್ಕೂ ಹಣ ಕೊಡುವಲ್ಲಿ ಮೀನಮೇಷ ಮಾಡಿದ್ದು ಯಾವ ನ್ಯಾಯ ಎಂದು ಕಿಡಿಕಾರಿದರು.

ಜೆಡಿಎಸ್ ಕೋರ್ ಕಮಿಟಿ ರಾಜ್ಯ ಸದಸ್ಯ ಸಿ.ವಿ. ಚಂದ್ರಶೇಖರ ಮಾತನಾಡಿ, ರಾಜ್ಯದಲ್ಲಿ ಕೆಟ್ಟ ಸರ್ಕಾರ ಇದ್ದು, ಅದನ್ನು ಬಿಜೆಪಿಯೊಂದಿಗೆ ಕೈಜೋಡಿ ಕಿತ್ತೊಗೆಯಬೇಕಾಗಿದೆ. ಜನರ ಹಿತಕ್ಕಾಗಿ ಈ ಕಾರ್ಯ ತುರ್ತಾಗಿ ಆಗಬೇಕಾಗಿದ್ದು, ಜನರು ಸಹ ಸಿದ್ಧವಾಗಿದ್ದಾರೆ ಎಂದರು.

ನಾನು ಈಗ ವನವಾಸ ಅನುಭವಿಸುತ್ತಿದ್ದೇನೆ, ಇನ್ನೆರಡು ವರ್ಷ ವನವಾಸ ಅನುಭವಿಸುತ್ತೇನೆ, ಅದಾದ ಮೇಲೆ ಮತದಾರರು ಈ ಬಾರಿ ಅದಕ್ಕೆ ಮುಕ್ತಿ ನೀಡಲು ಸನ್ನದ್ಧವಾಗಿದ್ದಾರೆ ಎಂದರು.

ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ಕಾರ್ಖಾನೆ ಧೂಳಿನಿಂದ ಸಾಕಷ್ಟು ಸಮಸ್ಯೆಯಾಗಿದ್ದು, ಜನರ ಆರೋಗ್ಯ ಹಾಳಾಗಿ ಹೋಗಿದೆ. ಅಷ್ಟಾದರೂ ಸ್ಥಳೀಯ ಶಾಸಕರು, ಸಂಸದರು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಶಾಸಕ ನೇಮಿರಾಜ ಮಾತನಾಡಿ, ಕೊಪ್ಪಳದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿರುವ ಸಿ.ವಿ. ಚಂದ್ರಶೇಖರ ಅವರನ್ನು ಗೆಲ್ಲಿಸಿ, ಶಾಸಕರನ್ನಾಗಿ ಮಾಡಬೇಕಾಗಿದೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಮಾತನಾಡಿ, ಜೆಡಿಎಸ್‌ಗೆ ಕೊಪ್ಪಳ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಕಾರ್ಯಕರ್ತರ ಪಡೆ ಇದೆ. ಅವರೆಲ್ಲರನ್ನು ಒಗ್ಗೂಡಿ, ಪಕ್ಷ ಸಂಘಟಿಸಬೇಕಾಗಿದೆ. ಪಕ್ಷ ಬಲಪಡಿಸಲು ಸ್ವಯಂ ಪ್ರೇರಿತವಾಗಿ ಶ್ರಮಿಸುತ್ತಿದ್ದಾರೆ ಎಂದರು.

ಕರಿಯಪ್ಪ ಹಾಲವರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜು ನಾಯಕ, ಶಿವಶಂಕರ, ಮಲ್ಲನಗೌಡ ಕೋನನಗೌಡ, ಮೂರ್ತೆಪ್ಪ ಗಿಣಿಗೇರಿ, ಸೋಮನಗೌಡ ಹೊಗರನಾಳ, ಈಶಪ್ಪ ಮಾದಿನೂರು, ರಶ್ಮಿ ಚಳಿಗೇರಿ, ಗವಿಯಪ್ಪ ಹಾಲವರ್ತಿ, ಮಂಜುನಾಥ ಸೊರಟೂರು, ರಮೇಶ ಡಂಬ್ರಳ್ಳಿ, ಶಾಂತಪ್ಪ ದೊಡ್ಡಮನಿ, ಬಸವರಾಜ ಗುಳಗಳಿ, ಶರಣಪ್ಪ ಕುಂಬಾರ, ಮೃತ್ಯುಂಜಯ, ದೇವಪ್ಪ ಕಟ್ಟಿಮನಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಡೋಟ ಬೇಡವೆಂದು ಸಿಎಂ ಬಳಿಗೆ ಸರ್ವ ಪಕ್ಷಗಳ ನಿಯೋಗ
ಕೊಟ್ಟೂರು ಕೆರೆ ತುಂಬಿಸುವ ಯೋಜನೆಗೆ ಸಿಗುತ್ತಾ ಹಸಿರು ನಿಶಾನೆ?