ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಬಾವಿಯ ಕಲುಷಿತ ನೀರು ಸೇವಿಸಿದವರಿಗೆ ಜ್ವರ, ಮನವಿ

KannadaprabhaNewsNetwork | Updated : Jun 11 2025, 11:45 AM IST

ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಮ್ಯಾನ್ ಹೋಲ್ ನಿಂದ ನೀರು ತುಂಬಿ ರಸ್ತೆಯ ಮೇಲೆ ಹರಿದು ಮಳೆ ನೀರಿನ ಜತೆಗೆ ಕುಡಿಯುವ ನೀರಿನ ಬಾವಿಗಳಿಗೆ ಸೇರುತ್ತಿದೆ.

ಭಟ್ಕಳ: ಪುರಸಭೆಯ ಅವೈಜ್ಞಾನಿಕ ಒಳಚರಂಡಿ ಕಾಮಗಾರಿಯಿಂದ ಪಟ್ಟಣದ ಆಸರಕೇರಿಯಲ್ಲಿ ಒಳಚರಂಡಿ ಮ್ಯಾನ್ ಹೋಲ್ ನಿಂದ ನೀರು ಸೋರಿಕೆಯಾಗಿ ಬಾವಿ ಸೇರಿ ಕಲುಷಿತಗೊಂಡಿದ್ದು, ಇದರ ನೀರು ಸೇವನೆ ಮಾಡಿದ ಜನರು ಜ್ವರದಿಂದ ಆಸ್ಪತ್ರೆ ಸೇರುತ್ತಿದ್ದು. ಈ ಬಗ್ಗೆ ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮಂಗಳವಾರ ಆಸರಕೇರಿಯ ಸಾರ್ವಜನಿಕರು ತಹಸೀಲ್ದಾರಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ಪಟ್ಟಣದ ಆಸರಕೇರಿಯಲ್ಲಿ ಅವೈಜ್ಞಾನಿಕ ಒಳಚರಂಡಿ ಕಾಮಗಾರಿಯಿಂದ ಮ್ಯಾನ್ ಹೋಲ್ ನಿಂದ ನೀರು ಸೋರಿಕೆಯಾಗಿ ಗ್ರಾಮದ ಸುತ್ತಮುತ್ತಲ ಬಾವಿಗಳು ಕಲುಷಿತಗೊಂಡಿದೆ.ಇದರಿಂದ ಪ್ರತಿನಿತ್ಯ ಜನರು ಕುಡಿಯುವ ನೀರಿಗಾಗಿ ಅಲೆದಾಡುವ ಸ್ಥಿತಿ ಇದೆ. ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಮ್ಯಾನ್ ಹೋಲ್ ನಿಂದ ನೀರು ತುಂಬಿ ರಸ್ತೆಯ ಮೇಲೆ ಹರಿದು ಮಳೆ ನೀರಿನ ಜತೆಗೆ ಕುಡಿಯುವ ನೀರಿನ ಬಾವಿಗಳಿಗೆ ಸೇರುತ್ತಿದೆ. ಇದನ್ನು ಕುಡಿದ ಹಲವರು ಈಗಾಗಲೇ ಅಸ್ವಸ್ಥಗೊಂಡು ತೀವ್ರತರದ ಜ್ವರ ಬಾಧೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಸರ್ಕಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸರಕೇರಿ ವಾರ್ಡ್‌ನ ಪ್ರತಿ ಮನೆಯ ಸದಸ್ಯರು ಜ್ವರದ ಬಾಧೆಯಿಂದ ಬಳಲುತ್ತಿದ್ದು, ಬಾವಿ ನೀರು ಕಲುಷಿತಗೊಂಡಿರುವುದೇ ಸಾಮೂಹಿಕ ಜ್ವರಕ್ಕೆ ಕಾರಣವಾಗಿದೆ. ಈಗಾಗಲೇ ಪುರಸಭೆಯವರಿಗೆ ಒಳಚರಂಡಿ ಮ್ಯಾನ್ ಹೋಲ್ ಸೋರಿಕೆ ಬಗ್ಗೆ ಮನವಿ ಮಾಡಿದರೂ ಕ್ರಮವಹಿಸಿಲ್ಲ. ಹೀಗಾಗಿ ತಾವೇ ಖುದ್ದಾಗಿ ಸ್ಥಳಕ್ಕೆ ಬಂದು ಪರಿಶೀಲಿಸುವಂತೆ ಆಗ್ರಹಿಸಲಾಗಿದೆ.

ಮನವಿ ಸ್ವೀಕರಿಸಿದ ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಈ ಬಗ್ಗೆ ಸ್ಥಳಕ್ಕಾಗಮಿಸಿ ಪರಿಶೀಲಿಸುವ ಭರವಸೆ ನೀಡಿದರು. ಸಾರ್ವಜನಿಕರು ಬಳಿಕ ತಾಲೂಕು ಆರೋಗ್ಯಾಧಿಕಾರಿ ಡಾ.ಸವಿತಾ ಕಾಮತ್‌ ಅವರಿಗೆ ಮನವಿ ಸಲ್ಲಿಸಿ ಆಸರಕೇರಿ ವಾರ್ಡ್‌ನ ಬಾವಿಗಳ ನೀರು ಮತ್ತು ಸಾಮೂಹಿಕ ರಕ್ತ ಪರೀಕ್ಷೆ ನಡೆಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯರಾದ ವೆಂಕಟೇಶ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ಶ್ರೀಧರ ನಾಯ್ಕ, ಶ್ರೀಕಾಂತ ನಾಯ್ಕ, ಈಶ್ವರ ನಾಯ್ಕ, ಗಣಪತಿ ನಾಯ್ಮ, ಮನಮೋಹನ ನಾಯ್ಕ, ಪ್ರಕಾಶ ನಾಯ್ಕ,ಆರ್.ಜಿ.ನಾಯ್ಕ ಮುಂತಾದವರಿದ್ದರು.

ಮನವಿಗೆ ಸ್ಪಂದನೆ:

ಆಸರಕೇರಿಯ ಸಾರ್ವಜನಿಕರ ಮನವಿಗೆ ತಕ್ಷಣ ಸ್ಪಂದಿಸಿದ ತಹಸೀಲ್ದಾರ ನಾಗೇಂದ್ರ ಕೊಳಶೆಟ್ಟಿ ಮಂಗಳವಾರ ಸಂಜೆ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ತಾಲೂಕು ಆರೋಗ್ಯಾಧಿಕಾರಿ ಡಾ.ಸವಿತಾ ಕಾಮತ್‌ ಜೊತೆಗೂಡಿ ಆಸರಕೇರಿ ವಾರ್ಡ್‌ಗೆ ತೆರಳಿ ಪರಿಶೀಲನೆ ನಡೆಸಿದರು.

ಸಾರ್ವಜನಿಕರು ಒಳಚರಂಡಿ ಮ್ಯಾನ್ ಹೋಲ್ ಸೋರಿಕೆ ಆಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ತೋರಿಸಿಕೊಟ್ಟರು. ಇದನ್ನು ನೋಡಿದ ತಹಸೀಲ್ದಾರ ನಾಗೇಂದ್ರ ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ವಹಿಸುವಂತೆ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡಗೆ ಸೂಚಿಸಿದರು.