ಪೊಲೀಸ್ ಇಲಾಖೆಗೆ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸಿ

KannadaprabhaNewsNetwork |  
Published : Apr 17, 2025, 12:02 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಪೊಲೀಸ್ ತರಬೇತಿ ಶಾಲೆಯಲ್ಲಿ 4ನೇ ತಂಡದ ಸಶಸ್ತ್ರ ಪೊಲೀಸ್ ಪೇದೆಗಳ ಬುನಾದಿ ತರಬೇತಿಯನ್ನು ಹೆಚ್ಚುವರಿ ಪೊಲೀಸ್ ಮಹಾನಿರೀಕ್ಷಕ ಅಲೋಕ್‍ಕುಮಾರ್ ಉದ್ಘಾಟಿಸಿದರು.

4ನೇ ತಂಡದ ಸಶಸ್ತ್ರ ಪೊಲೀಸ್ ಪೇದೆಗಳ ಬುನಾದಿ ತರಬೇತಿ ಕಾರ್ಯಕ್ರಮದಲ್ಲಿ ಅಲೋಕ್‍ಕುಮಾರ್ ಸಲಹೆ ಕನ್ನಡಪ್ರಭ ವಾರ್ತೆ ಹಿರಿಯೂರು

ಸಮಾಜದಲ್ಲಿ ಪೊಲೀಸ್ ಇಲಾಖೆಗೆ ಗೌರವ ಸ್ಥಾನಮಾನ ಇದ್ದು ಅದಕ್ಕೆ ಧಕ್ಕೆ ಉಂಟಾಗದಂತೆ ಕರ್ತವ್ಯ ನಿರ್ವಹಿಸಿ ಎಂದು ಹೆಚ್ಚುವರಿ ಪೊಲೀಸ್ ಮಹಾನಿರೀಕ್ಷಕ (ತರಬೇತಿ) ಅಲೋಕ್‍ಕುಮಾರ್ ಸಲಹೆ ನೀಡಿದರು.

ತಾಲೂಕಿನ ಐಮಂಗಲದಲ್ಲಿರುವ ಪೊಲೀಸ್ ತರಬೇತಿ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ 4ನೇ ತಂಡದ ಸಶಸ್ತ್ರ ಪೊಲೀಸ್ ಪೇದೆಗಳ ಬುನಾದಿ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಮತ್ತು ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆಗೆ ಆಯ್ಕೆಯಾಗುವವರು ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದು ಅವಶ್ಯಕ. ಇದರಿಂದ ತಮ್ಮ ಕೆಲಸವನ್ನು ಉತ್ತಮವಾಗಿ ಮಾಡಲು ಸಾಧ್ಯವಾಗುತ್ತದೆ. ಸಾರ್ವಜನಿಕರ ಆಸ್ತಿಪಾಸ್ತಿ ಕಾಪಾಡಿ ಜನರಿಗೆ ಭದ್ರತೆ ಒದಗಿಸುವ ಮಹತ್ತರ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದ್ದು ಅದಕ್ಕೆ ಪೂರಕವಾಗಿ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಆಮಿಷಗಳಿಗೆ ಬಲಿಯಾಗದೇ ನೊಂದವರಿಗೆ ನ್ಯಾಯ ದೊರಕಿಸಲು ಮುಂದಾಗಿ ಎಂದು ಹೇಳಿದರು.

ಸಮಾಜದಲ್ಲಿ ಪೊಲೀಸ್ ಇಲಾಖೆ ಅತೀ ಹೆಚ್ಚಾಗಿ ಗುರುತಿಸಿಕೊಳ್ಳುತ್ತದೆ. ಯಾವುದೇ ಒಬ್ಬ ಸಿಬ್ಬಂದಿಯಿಂದ ಸಣ್ಣ ತಪ್ಪುಗಳು ನಡೆದರು ಅದು ಅತೀ ಬೇಗ ಗೋಚರಿಸಿ ಇಲಾಖೆಯ ಮೇಲೆ ಹಾಗೂ ನಿಷ್ಠಾವಂತ ಸಿಬ್ಬಂದಿಗಳ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕೆ ಅನುವು ಮಾಡಿಕೊಡಬೇಡಿ. ಕರ್ತವ್ಯದ ವೇಳೆ ಶಿಸ್ತು ಪಾಲನೆ ಮಾಡಬೇಕು. ಈಗ ಪ್ರಶಿಕ್ಷಣಾರ್ಥಿಗಳಾ ಗಿರುವವರಲ್ಲಿ ಅನೇಕರು ವಿವಿಧ ಉನ್ನತ ಹುದ್ದೆಗಳನ್ನು ಹೊಂದುವ ಬಯಕೆ ಹೊಂದಿದ್ದಾರೆ. ಅದು ಒಳ್ಳೆಯದೇ ಆದರೆ ಭವಿಷ್ಯದ ಚಿಂತೆಯಲ್ಲಿ ನೀವು ಮಾಡುತ್ತಿರುವ ಕೆಲಸವನ್ನು ಮರೆಯಬೇಡಿ. ನಾವು ಮಾಡುವ ಕೆಲಸದ ಬಗ್ಗೆ ಗೌರವ ಪ್ರೀತಿ ಇರಬೇಕು. ಆಗ ಮಾತ್ರ ನಾವು ಮಾಡುವ ಕೆಲಸವನ್ನು ಉತ್ತಮವಾಗಿ ಮಾಡಿ ಯಶಸ್ವಿಯಾಗಲು ಸಾಧ್ಯ.

ಬೇರೆ ರಾಜ್ಯಗಳಲ್ಲಿ ತರಬೇತಿ ಅವಧಿಯಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಯಾವುದೇ ಭತ್ಯೆ ನೀಡುವುದಿಲ್ಲ. ಆದರೆ ನಮ್ಮ ರಾಜ್ಯವು 54 ಸಾವಿರ ವೇತನ ಸಹಿತ ತರಬೇತಿ ನೀಡಲಾಗುತ್ತಿದ್ದು, ತಾವುಗಳು ತರಬೇತಿ ಅವಧಿಯಲ್ಲಿ ನಿರ್ಲಕ್ಷ್ಯ ವಹಿಸದೆ ಉತ್ತಮ ತರಬೇತಿ ಹೊಂದಬೇಕು. ಇಲ್ಲಿ ಪಡೆಯುವ ಮೌಲ್ಯಯುತ ಜ್ಞಾನವನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸ್ಥಾನಮಾನ ಪಡೆಯಬೇಕು ಎಂದು ಸಲಹೆ ನೀಡಿದರು.

ತಮ್ಮ ವೃತ್ತಿ ಜೀವನದ ಜೊತೆ ಜೊತೆಗೆ ವೈಯಕ್ತಿಕ ಜೀವನಕ್ಕೂ ಹೆಚ್ಚು ಪ್ರಾಶಸ್ತ್ಯ ನೀಡಿ ತಮ್ಮನ್ನು ಆಶ್ರಯಿಸಿದವರಿಗೆ ಮಹತ್ವ ನೀಡಿ. ಇಲ್ಲಿನ ತರಬೇತಿ ಶಾಲೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸಂತೋಷದ ವಿಷಯ ಎಂದು ಪ್ರಶಂಸಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ರಂಜಿತ್‍ ಕುಮಾರ್‌ ಬಂಡಾರು ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾದರೆ ಉತ್ತಮ ತರಬೇತಿ ಪಡೆಯುವುದು ಅತೀ ಅವಶ್ಯಕ, ಕಲ್ಲಿನಿಂದ ವಿಗ್ರಹ ಕೆತ್ತುವಾಗ ಅನೇಕ ಉಳಿಪೆಟ್ಟು ಬಿದ್ದ ನಂತರ ಉತ್ತಮ ಮೂರ್ತಿಯಾಗಿ ರೂಪುಗೊಳ್ಳುತ್ತವೆ. ಅದೇ ತೆರನಾಗಿ ಈಗ ನಿಮಗೆ ತರಬೇತಿ ಕಷ್ಟಕರ ಎನಿಸಿದರು ಮುಂದಿನ ವೃತ್ತಿ ಜೀವನದಲ್ಲಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಈ ತರಬೇತಿ ಸಹಕಾರಿಯಾಗುತ್ತದೆ. ಶಿಕ್ಷಣದ ಜೊತೆ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ. ಇದರಿಂದ ಈ ಅವಧಿ ನಿಮ್ಮ ಜೀವನದಲ್ಲಿ ಉತ್ತಮ ಸ್ಮರಣಿಕೆಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ತರಬೇತಿ ಶಾಲೆಯ ಪ್ರಾಚಾರ್ಯ ಹಾಗೂ ಎಸ್‌ಪಿ ಎನ್.ಶ್ರೀನಿವಾಸ್, ಹಿರಿಯೂರು ಡಿವೈಎಸ್‌ಪಿ ಶಿವಕುಮಾರ್, ಸಿಪಿಐಗಳಾದ ಎ.ಮಂಜುನಾಥ್, ಕಾಳಿಕೃಷ್ಣ, ಎಚ್.ವಿ.ಲೋಕೇಶ್, ಶಿವಕುಮಾರ್.ಡಿಆರ್‌ಪಿಐ ಆನಂದ್‍ ಬೂದಿಗೊಪ್ಪ, ಶಾಖಾಧೀಕ್ಷಕ ಮೋಹನ್‍ಕುಮಾರ್, ಸಹಾಯಕ ಆಡಳಿತಾಕಾರಿ ಪಿ.ಪುಷ್ಪ, ಎಆರ್‌ಎಸ್‍ಐಗಳಾದ ಶ್ರೀಧರ್, ಸುಧರ್ಶನ್‍ ರೆಡ್ಡಿ, ಪಿಎಸ್‍ಐ ಮೇಘನಾ ಹಾಗೂ ಹೊರಾಂಗಣ ಬೋಧಕರು, ಸಿಬ್ಬಂದಿ ಮತ್ತು ಪ್ರಶಿಕ್ಷಣಾರ್ಥಿಗಳಿದ್ದರು.

ಚಿತ್ರದುರ್ಗ ಹಾಗೂ ದಾವಣಗೆರೆ ಡಿಎಆರ್ ಪೊಲೀಸ್ ವಾದ್ಯ ವೃಂದದಿಂದ ಪೊಲೀಸ್ ವಾದ್ಯ ನುಡಿಸಲಾಯಿತು. ಪ್ರಶಿಕ್ಷಣಾರ್ಥಿಗಳಿಗೆ ನ್ಯಾಯಾಲಯ ರೂಪುರೇಷೆಗಳನ್ನು ಪರಿಚಯಿಸುವ ಮಾದರಿ ನ್ಯಾಯಾಲಯ ಹಾಗೂ ಡ್ರಿಲ್ ನರ್ಸರಿಯನ್ನು ಹೆಚ್ಚುವರಿ ಪೊಲೀಸ್ ಮಹಾ ನಿರೀಕ್ಷಕ ಅಲೋಕ್‍ಕುಮಾರ್ ಉದ್ಘಾಟಿಸಿ ನೆನಪಿಗಗಾಗಿ ಸಸಿ ನೆಟ್ಟು ನೀರೆರೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ