ಬ್ಯಾಡಗಿ: ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಸುವ ಮುದೇನೂರ ಬಳಿಯಿರುವ ಜಾಕವೆಲ್ಗೆ ನಿರಂತರ ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗುತ್ತಿದೆ. ಶೀಘ್ರದಲ್ಲೇ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ₹2 ಕೋಟಿ ವೆಚ್ಚದಲ್ಲಿ ಪ್ರತ್ಯೇಕ ವಿದ್ಯುತ್ ಸಂಪರ್ಕಕ್ಕೆ ಪ್ರಯತ್ನಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.
ಹೆಸ್ಕಾಂ ಅಧಿಕಾರಿಗಳಿಗೆ ಖಡಕ್ ಸೂಚನೆ: ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಈ ಸಮಸ್ಯೆ ಇದೀಗ ನನ್ನ ಗಮನಕ್ಕೆ ಬಂದಿದ್ದು, ಸುಮಾರು 2 ಕಿಮೀ ಹೊಸದಾಗಿ ವಿದ್ಯುತ್ ಲೈನ್ ಮತ್ತು ನಿರ್ವಾಹಕಗಳು ಪರಿವರ್ತಕಗಳು(ಟಿಸಿ) ಅವಶ್ಯವಿದ್ದು, ಸಂಬಂಧಿಸಿದ ಎಲ್ಲ ವೆಚ್ಚಗಳನ್ನು ಸೇರಿಸಿಕೊಂಡು ಶೀಘ್ರದಲ್ಲೇ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದರು.ಶೀಘ್ರದಲ್ಲೇ ಕೆರೆ ನಿರ್ಮಾಣ: ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ಮಾತನಾಡಿ, ಬೆಟ್ಟದ ಮಲ್ಲೇಶ್ವರ ಗುಡ್ಡದಲ್ಲಿ ಮಳೆ ನೀರು ಸಂಗ್ರಹಕ್ಕೆ ₹1.50 ಕೋಟಿ ವೆಚ್ಚದ ಕೆರೆ ನಿರ್ಮಾಣ ಕಾಮಗಾರಿಗೆ ಶೀಘ್ರದಲ್ಲೇ ಭೂಮಿಪೂಜೆ ಮಾಡಲಾಗುವುದು. ಅಲ್ಲದೇ ₹10 ಕೋಟಿ ವೆಚ್ಚದಲ್ಲಿ ಪುರಸಭೆ ವತಿಯಿಂದ ಕೆರೆ ಅಭಿವೃದ್ಧಿಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಮನವಿ ಕೊಡುವುದಾಗಿ ತಿಳಿಸಿದರು.ರಾಜಕಾಲುವೆ ವಿವಾದಕ್ಕೆ ಸಿಲುಕಿಸಬೇಡಿ: ಸದಸ್ಯ ಬಸವರಾಜ ಛತ್ರದ ಮಾತನಾಡಿ, ಬಹಳಷ್ಟು ವರ್ಷಗಳ ಹೋರಾಟದ ಫಲದಿಂದ ಪಟ್ಟಣದಲ್ಲಿ ಒಂದು ಸುಸಜ್ಜಿತ ರಾಜ ಕಾಲುವೆ ನಿರ್ಮಾಣವಾಗುತ್ತಿದೆ. ಅಲ್ಲಿನ ಕೆಲವರು ಅನಗತ್ಯವಾಗಿ ತಕರಾರು ಮಾಡುತ್ತಿದ್ದಾರೆ. ಇಂಥವುಗಳಿಗೆ ಕಡಿವಾಣ ಹಾಕುವ ಕೆಲಸವಾಗಬೇಕು. ಸಂಬಂಧಿಸಿದ ಸದಸ್ಯರು ಸೇರಿದಂತೆ ಅಲ್ಲಿನ ಮುಖಂಡರು ಅನಗತ್ಯವಾಗಿ ಕಾಮಗಾರಿಗೆ ತೊಂದರೆ ಕೊಡುವವರನ್ನು ತಿಳಿವಳಿಕೆ ನೀಡುವಂತೆ ಮನವಿ ಮಾಡಿದರು.
ಮಹಿಳಾ ಸದಸ್ಯೆಯರಿಗೆ ಗೌರವ ಸಿಗುತ್ತಿಲ್ಲ: ಸದಸ್ಯೆ ಕಲಾವತಿ ಬಡಿಗೇರ ಮಾತನಾಡಿ, ಒಂದನೇ ವಾರ್ಡ್ನಲ್ಲಿ ಕಳೆದ 4 ತಿಂಗಳಿನಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಈ ಕುರಿತು ಸಿಬ್ಬಂದಿ ಜತೆಗೆ ಹಲವು ವಾಗ್ವಾದ ನಡೆಸಿದ್ದೇವೆ. ಆದರೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನ್ಯಾಯಸಮ್ಮತ ಕಾಮಗಾರಿಗಳಿಗೆ ಅನುದಾನ ಕೊಡುತ್ತಿಲ್ಲ. ಅದರಲ್ಲೂ ಮಹಿಳಾ ಸದಸ್ಯೆಯರಿಗೆ ಪುರಸಭೆಯಲ್ಲಿ ಗೌರವ ಸಿಗುತ್ತಿಲ್ಲ ಎಂದು ಆರೋಪಿಸಿದರು.ಪಟ್ಟಣದೆಲ್ಲೆಡೆ ಬೆಂಚ್ ವ್ಯವಸ್ಥೆ: ಪುರಸಭೆ ವತಿಯಿಂದ ಸಿಮೆಂಟ್ನಿಂದ ತಯಾರಿಸಿದ ಬೆಂಚ್ಗಳನ್ನು ಉದ್ಯಾನವನ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಬಹಳಷ್ಟು ಕಡೆಗಳಿಂದ ಬೇಡಿಕೆಗಳು ಬಂದಿದ್ದು, ಸಭೆಯ ಅನುಮತಿಯೊಂದಿಗೆ ಇನ್ನಷ್ಟು ಸಿಮೆಂಟ್ ಬೆಂಚ್ಗಳನ್ನು ಅಳವಡಿಸಲಾಗುವುದು. ಸಭೆಯು ಇದಕ್ಕೆ ಸರ್ವಾನುಮತದ ತೀರ್ಮಾನದೊಂದಿಗೆ ಅನುಮತಿ ನೀಡುವಂತೆ ಕೇಳಿದರು. ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಸುಭಾಸ್ ಮಾಳಗಿ, ಸ್ಥಾಯಿ ಸಮಿತಿ ಚೇರಮನ್ ಚಂದ್ರಣ್ಣ ಶೆಟ್ಟರ ಸೇರಿದಂತೆ ಪುರಸಭೆ ಸರ್ವ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.