ಚನ್ನಪಟ್ಟಣ: ರಾಷ್ಟ್ರೀಯ ಶಿಕ್ಷಣ ನೀತಿ ನವೀನ ಕಲಿಕೆಗೆ ಒತ್ತು ನೀಡಿದೆ. ಸದಾ ಹೊಸತನ, ಆಲೋಚನೆ, ವೈಚಾರಿಕ ಚಿಂತನೆ ಮೂಡಿಸಲು ಹೊಂಗನೂರು ಶಾಲೆಯಲ್ಲಿ ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜೊತೆಗೆ ವ್ಯಕ್ತಿತ್ವ ವಿಕಸನದಂತಹ ಕಾಗದ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವುದು ಶ್ಲಾಘನೀಯ ಎಂದು ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ಹೇಳಿದರು.
ಮುಖ್ಯ ಶಿಕ್ಷಕ ಎಸ್.ಎಂ.ನಾಗೇಶ್ ಮಾತನಾಡಿ, ತರಗತಿ ಕಲಿಕೆಯಲ್ಲಿ ಸಾಂಝಿ ಕಲೆ ಮಕ್ಕಳು ಲವಲವಿಕೆಯಿಂದ ಕಲಿಯಲು ಅನುಕೂಲವಾಗಿದೆ. ಶಿಕ್ಷಕರು ಕಡಿಮೆ ವೆಚ್ಚದ ಕಾಗದದಲ್ಲಿ ಪ್ರಾಣಿ, ಪಕ್ಷಿ, ಪರಂಪರೆ ಬಿಂಬಿಸುವ ರಾಮಾಯಣ, ಮಹಾಭಾರತದ ಚಿತ್ರ ತಯಾರಿಸಿ ತರಗತಿ ಕೋಣೆಗಳಲ್ಲಿ ಪಾಠೋಪಕರಣಗಳಾಗಿ ಬಳಸಬಹುದು ಎಂದು ವಿವರಿಸಿದರು.
ಕಲಾವಿದ ಮೈಸೂರು ಹುಸೇನಿ ಮಕ್ಕಳಿಗೆ ಸಾಂಝಿ ಕಲೆಯಲ್ಲಿ ಬಣ್ಣದ ಕಾಗದ ಬಳಸಿ, ಅಂದವಾದ ಚಿತ್ರಗಳನ್ನು ಗಾಳಿಯಲ್ಲಿ ತೇಲಿಬಿಟ್ಟರು. ಕಾರ್ಯಾಗಾರ ಮಕ್ಕಳಿಗೆ ವಿಶಿಷ್ಟ ಅನುಭವ ಕಟ್ಟಿಕೊಟ್ಟಿತು. ಮಕ್ಕಳು ಲಘು ಬಗೆಯಿಂದ ಕೆಂಪು, ಬಿಳುಪು, ಹಸಿರು, ಗುಲಾಬಿ ಬಣ್ಣದ ಕಾಗದಗಳಲ್ಲಿ ಜೋಡಿ ನವಿಲು, ಎಲೆ, ಮುಖವಾಡ, ಗಣೇಶ, ಚಿಟ್ಟೆಯ ಚಿತ್ರಗಳನ್ನು ಕೊರೆದು ಗಮನ ಸೆಳೆದರು.ಶಿಬಿರದಲ್ಲಿ ಕಾರ್ಯಾಗಾರದ ಪ್ರಾಯೋಜಕರಾದ ರಾಮದಾಸ್, ಶಿಕ್ಷಕರಾದ ಸುಕನ್ಯ, ಕೃಷ್ಣಕುಮಾರ್ , ಸವಿತಾ, ರಮ್ಯಾ, ಸುಮಾ , ಪವಿತ್ರ, ಉಷಾ ಹಾಗೂ ಹೊಂಗನೂರು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದರು.