ಪುತ್ತೂರು: ಧ್ಯಾನವು ಮನಸ್ಸಿಗೆ, ಯೋಗವು ದೇಹಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ಮನಸ್ಸು ಮತ್ತು ದೇಹ ಎರಡೂ ಸಮತೋಲನದಲ್ಲಿ ಇದ್ದಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಬೆಳ್ಳಾರೆ ಠಾಣೆಯ ಪೊಲೀಸ್ ಉಪನಿರೀಕ್ಷಕ ಈರಯ್ಯ ದೂಂತೂರು ಹೇಳಿದರು.
ಬೆಳ್ಳಾರೆ ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಯೋಗ ಶಿಕ್ಷಕ ಕೆ. ಗಣಪಯ್ಯ ವನಶ್ರೀ ಮಾತನಾಡಿ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾನವರು ಮಾಧವರಾಗುತ್ತಾರೆ. ಯೋಗದಿಂದ ಜೀವನ ಪ್ರಕಾಶಮಾನವಾಗುತ್ತದೆ. ಪ್ರತಿಯೊಬ್ಬರೂ ನಿರಂತರವಾಗಿ ಯೋಗಾಭ್ಯಾಸ ನಡೆಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಮುಕ್ಕೂರು ನೇಸರ ದಶಪ್ರಣತಿ ಸಮಿತಿ-೨೦೨೬ರ ಅಧ್ಯಕ್ಷ ಡಾ. ನರಸಿಂಹ ಶರ್ಮ ಕಾನಾವು ಮಾತನಾಡಿ, ಯೋಗವು ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸುವ ಜೀವನ ಪದ್ಧತಿಯಾಗಿದ್ದು, ಶಿಬಿರ ಮುಕ್ತಾಯಗೊಂಡರೂ ಇಲ್ಲಿ ಕಲಿತ ಯೋಗಾಸನ ಹಾಗೂ ಪ್ರಾಣಾಯಾಮವನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಹಾಗೂ ನೇಸರ ದಶಪ್ರಣತಿ ಸಮಿತಿ-೨೦೨೬ರ ಸಂಚಾಲಕ ಕುಂಬ್ರ ದಯಾಕರ ಆಳ್ವ ಮಾತನಾಡಿದರು.ಒಂದು ವಾರ ಕಾಲ ಶಿಬಿರಾರ್ಥಿಗಳಿಗೆ ಯೋಗ ತರಬೇತಿ ನೀಡಿದ ಯೋಗ ಶಿಕ್ಷಕ ಕೆ. ಗಣಪಯ್ಯ ವನಶ್ರೀ ಅವರನ್ನು ನೇಸರ ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು. ಶಿಬಿರಾರ್ಥಿಗಳಾದ ಶ್ರೀಧರ ಗೌಡ ಕೊಂಡೆಪ್ಪಾಡಿ ಹಾಗೂ ಜಯಂತ ಕುಂಡಡ್ಕ ಅನಿಸಿಕೆ ವ್ಯಕ್ತಪಡಿಸಿದರು.