-ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಜಂಟಿ ಕ್ರಿಯಾಸಮಿತಿ ರಾಷ್ಟ್ರಪತಿಗೆ ಮನವಿ
----ಕನ್ನಡಪ್ರಭ ವಾರ್ತೆ ಯಾದಗಿರಿ
ಸಂಸತ್ತಿನಲ್ಲಿ ಅಂಗೀಕರಿಸಲಾದ ವಕ್ಫ್ (ತಿದ್ದುಪಡಿ) ಮಸೂದೆಯನ್ನು ರದ್ದುಪಡಿಸುವಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಯಾದಗಿರಿ ಜಂಟಿ ಕ್ರಿಯಾಸಮಿತಿಯು ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ ಮಾಡಿದ್ದಾರೆ.ಸಂಸತ್ತಿನಲ್ಲಿ ಅಂಗೀಕರಿಸಲಾದ ವಕ್ಫ್ (ತಿದ್ದುಪಡಿ) ಮಸೂದೆಯು ಸಂವಿಧಾನ ವಿರೋಧಿಯಾಗಿದ್ದು, ಇದು ಸಂವಿಧಾನ ಮೂಲತತ್ವಗಳಾದ ಸಮಾನತೆ, ಧರ್ಮದ ಆಧಾರದ ಮೇಲೆ ತಾರತಮ್ಯದ ನಿಷೇಧ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಹೀಗಾಗಿ, ಈ ಮಸೂದೆಯನ್ನು ಕಾನೂನು ಆಗಿ ಮಾಡಲು ಅವಕಾಶ ಕೊಡಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಕಳೆದ ಐದು ವರ್ಷಗಳಿಂದ ಧರ್ಮವನ್ನು ಪಾಲಿಸದ ಕಾರಣಕ್ಕೆ ಮುಸ್ಲಿಂ ನಾಗರಿಕನ ತನ್ನ ಆಸ್ತಿಯನ್ನು ದಾನ ಮಾಡುವ ಸ್ವಾತಂತ್ರ್ಯವನ್ನು ಅದು ಕಸಿದುಕೊಳ್ಳುತ್ತದೆ. ಈ ತಿದ್ದುಪಡಿಗಳು ಧಾರ್ಮಿಕ ಸಂಸ್ಥೆಗಳಿಗೆ ನೀಡಲಾದ ಸ್ವಾತಂತ್ರ್ಯ ಮತ್ತು ರಕ್ಷಣೆಗಳನ್ನು ಮುಸ್ಲಿಮರಿಂದ ಕಸಿಯುತ್ತವೆ, ಆದರೆ ಇವು ಇತರ ಧರ್ಮಗಳಿಗೆ ಅನ್ವಯಿಸುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ಈ ತಿದ್ದುಪಡಿಗಳು ಮುಸ್ಲಿಮರು ತಮ್ಮದೇ ಆದ ಸಂಸ್ಥೆಗಳನ್ನು ಸ್ಥಾಪಿಸುವುದು, ನಡೆಸುವುದು ಮತ್ತು ನಿರ್ವಹಿಸುವುದನ್ನು ತಡೆಯುವುದಕ್ಕೆ ಸಮಾನವಾಗಿವೆ. ಆದ್ದರಿಂದ, ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕರಿಸಿದ ಈ ಎಲ್ಲ ವಿವಾದಾತ್ಮಕ ತಿದ್ದುಪಡಿಗಳನ್ನು ರದ್ದುಗೊಳಿಸುವಂತೆ ರಾಷ್ಟ್ರಪತಿಯವರಿಗೆ ಮನವಿ ಪತ್ರದಲ್ಲಿ ಕೋರಿದ್ದಾರೆ.
ಸಮಿತಿಯ ಅಧ್ಯಕ್ಷ ಗುಲಾಂ ಸಮ್ದಾನಿ ಮೂಸಾ, ವಾಹೀದ್ ಮಿಯಾನ್, ಜಿಲಾನಿ ಅಫಘಾನ್, ಮುಹಮ್ಮದ್ ಜಾಮಿ, ಹಫೀಜ್ ಪಟೇಲ್, ಇನಾಯತ್ ಉರ್ ರೆಹಮಾನ್, ಮನ್ಸೂರ್ ಅಹ್ಮದ್ ಅಫಘಾನ್, ಇಬ್ರಾಹಿಂ ಗೋಗಿ, ಸಲೀಂ ಪಟೇಲ್, ಖಾಸಿಂ ಬಡೇಘರ್, ಸಲಾವುದ್ದೀನ್ ಜಾಗೀರದಾರ, ಅನ್ವರ್ ಪಟೇಲ್, ಶಫೀಕ್ ಜಮಾನ್, ಸನಾವುಲ್ಲಾ ಇದ್ದರು.----
11ವೈಡಿಆರ್5: ಸಂಸತ್ತಿನಲ್ಲಿ ಅಂಗೀಕರಿಸಲಾದ ವಕ್ಫ್ (ತಿದ್ದುಪಡಿ) ಮಸೂದೆಯನ್ನು ರದ್ದುಪಡಿಸುವಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಯಾದಗಿರಿ ಜಂಟಿ ಕ್ರಿಯಾಸಮಿತಿಯು ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ ಮಾಡಿದ್ದಾರೆ.