ಧೂಳು ಹಿಡಿದು ನಿಂತಿದ್ದ ಯುದ್ಧ ಟ್ಯಾಂಕರ್‌ಗೆ ಸ್ಥಳ ನಿಗದಿ

KannadaprabhaNewsNetwork |  
Published : Jan 09, 2025, 12:45 AM IST
ಪೊಟೋ: 08ಎಸ್‌ಎಂಜಿಕೆಪಿ04 | Kannada Prabha

ಸಾರಾಂಶ

ಶಿವಮೊಗ್ಗ: ಕಳೆದ ಒಂದು ವರ್ಷದಿಂದ ಎಂಆರ್‌ಎಸ್ ಸರ್ಕಲ್‌ನಲ್ಲಿ ಧೂಳು ಹಿಡಿಯುತ್ತ ನಿಂತಿರುವ ಯುದ್ಧ ಟ್ಯಾಂಕರ್‌ಗೆ ಕೊನೆಗೂ ಸೂಕ್ತ ಜಾಗ ದೊರಕಿಸಿಕೊಡುವಲ್ಲಿ ಸ್ಥಳೀಯ ಆಡಳಿತ ಯಶಸ್ವಿಯಾಗಿದ್ದು, ಜ.26 ಗಣರಾಜ್ಯೋತ್ಸವದಂದು ಯುದ್ಧ ವಿಜೇತ ಟ್ಯಾಂಕರ್ ಭೂಪತಿ ಜೆಡ್‌ಎಕ್ಸ್ 1878 ಜಿ.ಎಂ. ನಗರದ ಫ್ರೀಡಂ ಪಾರ್ಕ್‌ನಲ್ಲಿ ಶಾಶ್ವತವಾಗಿ ಸ್ಥಾಪನೆಗೊಳ್ಳಲಿದೆ.

ಶಿವಮೊಗ್ಗ: ಕಳೆದ ಒಂದು ವರ್ಷದಿಂದ ಎಂಆರ್‌ಎಸ್ ಸರ್ಕಲ್‌ನಲ್ಲಿ ಧೂಳು ಹಿಡಿಯುತ್ತ ನಿಂತಿರುವ ಯುದ್ಧ ಟ್ಯಾಂಕರ್‌ಗೆ ಕೊನೆಗೂ ಸೂಕ್ತ ಜಾಗ ದೊರಕಿಸಿಕೊಡುವಲ್ಲಿ ಸ್ಥಳೀಯ ಆಡಳಿತ ಯಶಸ್ವಿಯಾಗಿದ್ದು, ಜ.26 ಗಣರಾಜ್ಯೋತ್ಸವದಂದು ಯುದ್ಧ ವಿಜೇತ ಟ್ಯಾಂಕರ್ ಭೂಪತಿ ಜೆಡ್‌ಎಕ್ಸ್ 1878 ಜಿ.ಎಂ. ನಗರದ ಫ್ರೀಡಂ ಪಾರ್ಕ್‌ನಲ್ಲಿ ಶಾಶ್ವತವಾಗಿ ಸ್ಥಾಪನೆಗೊಳ್ಳಲಿದೆ.ಕಳೆದ 2023ರ ಆಗಸ್ಟ್‌ 13ರಂದು ಶಿವಮೊಗ್ಗಕ್ಕೆ ಆಗಮಿಸಿದ್ದ ಟ್ಯಾಂಕರ್ ಭೂಪತಿ ಜೆಡ್‌ಎಕ್ಸ್ 1878 ಜಿ.ಎಂ. ಅನ್ನು ಸಂಗೋಳ್ಳಿರಾಯಣ್ಣ ವೃತ್ತದಿಂದ ಸಾವಿರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ಯುದ್ಧ ಟ್ಯಾಂಕರ್ ಅನ್ನು ಬರಮಾಡಿಕೊಳ್ಳಲಾಯಿತು. ಜನಪ್ರತಿನಿಧಿಗಳು, ಎನ್‌ಸಿಸಿ ವಿದ್ಯಾರ್ಥಿಗಳು, ಮಾಜಿ ಸೈನಿಕರು, ಶಿವಮೊಗ್ಗದ ನಾಗರಿಕರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು. ತಾತ್ಕಾಲಿಕವಾಗಿ ಎಂಆರ್‌ಎಸ್ ವೃತ್ತದ ಬಳಿ ಇದನ್ನು ಇಡಲಾಗಿತ್ತು. ಶಾಶ್ವತವಾಗಿ ಎಲ್ಲಿ ಸ್ಥಾಪಿಸಬೇಕು ಎನ್ನುವ ಚರ್ಚೆ ನಡೆದಿತ್ತು. ಇನ್ನೊಂದು ಯುದ್ಧ ವಿಮಾನ ಕೂಡ ನಗರಕ್ಕೆ ಆಗಮಿಸಲಿದ್ದು, ಅಂತಿಮವಾಗಿ ಎರಡನ್ನು ನಗರದ ಫ್ರೀಡಂ ಪಾರ್ಕ್ (ಅಲ್ಲಮಪ್ರಭು ಉದ್ಯಾನವನ)ದಲ್ಲಿ ಸ್ಥಾಪಿಸಲು ತೀರ್ಮಾನಿಸಲಾಗಿದ್ದು, ಅದಕ್ಕೆ ಪೂರಕವಾಗಿ ಕಟ್ಟೆಯನ್ನು ಕೂಡ ನಿರ್ಮಿಸಲಾಗಿದ್ದು, ಟ್ಯಾಂಕರ್ ಅನ್ನು ಸ್ಥಾಪಿಸಲಾಗಿದೆ. ಈಗ ಅದಕ್ಕೆ ಮೂಲರೂಪ ನೀಡುತ್ತಿದ್ದು, ಶೀಘ್ರದಲ್ಲೇ ಲೋಕಾರ್ಪಣೆ ಗೊಳ್ಳಲಿದೆ.ಟ್ಯಾಂಕರ್‌ ನು ಎಂಆರ್‌ಎಸ್ ಸರ್ಕಲ್‌ನಲ್ಲಿ ಸ್ಥಾಪಿಸುವ ಉದ್ದೇಶವಿತ್ತು. ಹಾಗಾಗಿ ಅಲ್ಲೆ ಪಕ್ಕದಲ್ಲಿರುವ ಮೆಸ್ಕಾಂ ವಸತಿ ಗೃಹಗಳ ಆವರಣದಲ್ಲಿ ಟ್ಯಾಂಕರನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಅದರ ಸುತ್ತಲೂ ಪಂಜರ ಸ್ಥಾಪಿಸಲಾಗಿತ್ತು. ಆದರೆ ಎಂಆರ್‌ಎಸ್ ಸರ್ಕಲ್‌ನಲ್ಲಿ ಫ್ಲೈ ಓವರ್ ನಿರ್ಮಾಣ ವಾಗಲಿರುವುದರಿಂದ ಅಲ್ಲಿಂದ ಸ್ಥಳಾಂತರಿಸುವುದು ಅನಿವಾರ್ಯವಾಗಿತ್ತು. ಅಲ್ಲದೆ ಅಲ್ಲಿಯೇ ಹೆದ್ದಾರಿ ಹಾದು ಹೋಗಲಿದೆ. ಹಾಗಾಗಿ ಅಲ್ಲಿ ಟ್ಯಾಂಕರ್ ಸ್ಥಾಪನೆಯ ಅನುಮತಿ ನಿರಾಕರಿಸಲಾಗಿತ್ತು. ಟ್ಯಾಂಕರ್ ನಿರ್ವಹಣೆ ಮಾಡದಿರುವುದು ಮತ್ತು ಸ್ಥಾಪನೆಗೆ ಸೂಕ್ತ ಜಾಗ ನಿಗದಿ ಮಾಡದಿರುವ ಕುರಿತು ಮಾಧ್ಯಮಗಳು ಸರಣಿ ವರದಿ ಮಾಡಿದ್ದವು.

ಅಲಂಕಾರಕ್ಕೆ ಹಾಕಿದ್ದ ಹೂವು ಕೊಳೆತು, ಒಣಗಿದ್ದರೂ ತೆಗೆದಿರಲಿಲ್ಲ. ಟ್ಯಾಂಕರ್ ಸಂಪೂರ್ಣ ಧೂಳಿನಲ್ಲಿ ಮುಳುಗಿದೆ. ಅಕ್ಕಪಕ್ಕ ಸಂಪೂರ್ಣ ಕೆಸರುಮಯವಾಗಿತ್ತು. ಈಗ ಅದಕ್ಕೆ ಮುಕ್ತಿ ದೊರಕಿದೆ. 71ರ ಬಾಂಗ್ಲಾ ಯುದ್ಧದಲ್ಲಿ ಈ ಟ್ಯಾಂಕರ್ ಉಪಯೋಗವಾಗಿತ್ತು. ಅಲ್ಲದೆ ಇಂಡೋ ಪಾಕ್ ಯುದ್ಧದಲ್ಲೂ ಕೂಡ ಇದರ ಕೊಡುಗೆ ಇತ್ತು ಎಂದು ನಿವೃತ್ತ ಸೈನಿಕರ ಸಂಘದ ಪ್ರಮುಖರು ತಿಳಿಸಿದ್ದಾರೆ.

1983-84 ರವರೆಗೆ ಈ ಟ್ಯಾಂಕರ್ ಸೇವೆಯಲ್ಲಿತ್ತು. ಅದು ನಿಷ್ಕ್ರೀಯಗೊಂಡ ಬಳಿಕ ಅದನ್ನು ರಕ್ಷಣ ಇಲಾಖೆಯ ಅನುಮತಿ ಪಡೆದು ಇಲ್ಲಿಗೆ ತರುವುದು ಸಾಹಸದ ಕೆಲಸವಾಗಿತ್ತು. ಸಂಸದ ಬಿ.ವೈ.ರಾಘವೇಂದ್ರ ಮತ್ತು ಸೈನಿಕ ಇಲಾಖೆಯ ಅಂದಿನ ಉಪ ನಿರ್ದೇಶಕ ಡಾ.ಸಿ.ಎಸ್.ಹೀರೇಮಠ್ ಮತ್ತು ಜಿಲ್ಲಾ ಮಾಜಿ ಸೈನಿಕರ ಸಂಘದ ಸತತ ಪ್ರಯತ್ನದಿಂದ ಈ ಕಾರ್ಯ ಯಶಸ್ವಿಯಾಗಿದೆ.ಯುವಕ, ಯುವತಿಯರಿಗೆ ದೇಶ ಪ್ರೇಮ ಮತ್ತು ಸೈನ್ಯಕ್ಕೆ ಭರ್ತಿಯಾಗಲು ಪ್ರೇರಣೆ ನೀಡುವ ಈ ಯುದ್ಧ ಟ್ಯಾಂಕರ್‌ನ ಸ್ಥಾಪನೆ ಕಾರ್ಯಕ್ಕೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜ.26, ಸಕಲ ಗೌರವಗಳೊಂದಿಗೆ ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ