ಪ್ರವಾಸಿಗರಿಗೆ ಗೋಚರಿಸದ ತಾಣಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ

KannadaprabhaNewsNetwork | Published : Dec 20, 2023 1:15 AM

ಪ್ರವಾಸಿಗರಿಗೆ ಗೋಚರಿಸದೇ ಇರುವ ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನಗಳು, ನೈಸರ್ಗಿಕವಾಗಿ ಕಣ್ಮನ ಸೆಳೆಯುವ ತಾಣಗಳಿವೆ. ಅವುಗಳ ಅಭಿವೃದ್ಧಿಗೊಳಿಸಿ ಯೋಜನೆ ರೂಪಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಶಾಸಕರಿಂದ ಸಲಹೆ, ಫೆಬ್ರವರಿಯಲ್ಲಿ ಬೂದನೂರು ಉತ್ಸವ ನಡೆಸಲು ಚಿಂತನೆ

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಪ್ರವಾಸಿಗರಿಗೆ ಗೋಚರಿಸದೇ ಇರುವ ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನಗಳು, ನೈಸರ್ಗಿಕವಾಗಿ ಕಣ್ಮನ ಸೆಳೆಯುವ ತಾಣಗಳಿವೆ. ಅವುಗಳನ್ನು ಗುರುತಿಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಶಾಸಕ ಪಿ.ರವಿಕುಮಾರ್ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಂಡ್ಯ ಜಿಲ್ಲೆಯು ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ಮತ್ತು ಪಾರಂಪರಿಕ ನಾಡಗಿದ್ದು, ಹೆಚ್ಚು ಪ್ರೇಕ್ಷಣೀಯ ಪ್ರವಾಸಿ ತಾಣಗಳಿವೆ. ಹೂಸಬೂದನೂರಿನಲ್ಲಿ ಹೊಯ್ಸಳರ ಕಾಲದ ಶ್ರೀಅನಂತಪದ್ಮನಾಭ ಹಾಗೂ ಶ್ರೀಕಾಶಿ ವಿಶ್ವೇಶ್ವರ ದೇವಾಲಯಗಳು ಅತ್ಯಂತ ಪ್ರಾಚೀನ ದೇವಾಲಯಗಳಾಗಿವೆ ಎಂದರು.

ಮಂಡ್ಯ ವ್ಯಾಪ್ತಿಯ ಅರ್ಕೇಶ್ವರ ದೇವಾಲಯ, ಹೊಳಲು ಗ್ರಾಮದ ತಾಂಡವೇಶ್ವರ ದೇವಾಲಯ, ಬೂದನೂರಿನ ದೇವಾಲಯಗಳು ಸೇರಿದಂತೆ ಜಿಲ್ಲೆಯ ಪ್ರಾಚೀನ ದೇವಾಲಯಗಳನ್ನು ಅಭಿವೃದ್ಧಿಗೊಳಿಸಿ ಪ್ರವಾಸಿಗರನ್ನು ಸೆಳೆಯಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಫೆಬ್ರವರಿಯಲ್ಲಿ ಬೂದನೂರು ಉತ್ಸವ:

ಜಿಲ್ಲೆಯ ಬೂದನೂರಿನಲ್ಲಿರುವ ಹೊಯ್ಸಳರ ಕಾಲದ ಪ್ರಾಚೀನ ದೇವಾಲಯಗಳಿಗೆ ಶತಮಾನ ಕಂಡ ಹಿನ್ನೆಲೆ ಫೆಬ್ರವರಿಯಲ್ಲಿ ಬೂದನೂರು ಉತ್ಸವ ಮಾಡುವುದಕ್ಕೆ ಚಿಂತಿಸಲಾಗಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಪ್ರವಾಸೋದ್ಯಮ ಅಧಿಕಾರಿಗಳಿಗೆ ತಿಳಿಸಿದರು.

ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಶ್ರೀರಂಗಪಟ್ಟಣವೇ ಪ್ರಾಚೀನ ನಗರವಾಗಿದ್ದು, ಹಲವಾರು ಮಂದಿರ-ಮಸೀದಿಗಳಿವೆ. ಇವುಗಳು ಪ್ರ್ರವಾಸಿಗರನ್ನು ಆಕರ್ಷಿಸುತ್ತಿವೆ. ಹಾಗಾಗಿ ಪ್ರವಾಸಕ್ಕೆ ಬರುವ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಸಲಹೆ ನೀಡಿದರು.

ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಸರ್ಕಾರದಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ವೆಬ್‌ಸೈಟ್ ಆಕರ್ಷಣೀಯವಾಗಿರಲಿ:

ಪ್ರವಾಸೋದ್ಯಮ ವೆಬ್ ಸೈಟ್ ಆಕರ್ಷಣೀಯವಾಗಿರಲಿ, ಜಿಲ್ಲೆಯಲ್ಲಿ ಸಿದ್ಧಪಡಿಸುತ್ತಿರುವ ಪ್ರವಾಸೋದ್ಯಮ ವೆಬ್ ಸೈಟ್ ಹಾಗೂ ವ್ಯಾಪ್ ಆಕರ್ಷಣೀಯ ಹಾಗೂ ಸರಳವಾಗಿ ಪ್ರವಾಸಿಗರಿಗೆ ಮಾಹಿತಿ ನೀಡುವ ರೀತಿ ಇರಬೇಕು ಎಂದು ಮೇಲುಕೋಟೆ ಶಾಸಕ ದರ್ಶನ ಪುಟ್ಟಣ್ಣಯ್ಯ ತಿಳಿಸಿದರು.

ಜನರು ಮೊಬೈಲ್‌ನಲ್ಲಿ ವೆಬ್ ಸೈಟ್ ನೋಡುವುದರಿಂದ ಸಿದ್ಧಪಡಿಸುವ ವೆಬ್ ಸೈಟ್ ಮೊಬೈಲ್ ಫ್ರೆಂಡ್ಲಿಯಾಗಿರಲಿ. ಉತ್ತಮ ಗುಣಮಟ್ಟದ ಭಾವಚಿತ್ರ ಹಾಗೂ ವಿಡಿಯೋಗಳನ್ನು ಬಳಸಿ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಜಿಲ್ಲೆಗೆ ಪ್ರವಾಸಿಗರನ್ನು ಸೆಳೆಯಲು ಜಿಲ್ಲೆಗೆ ಅಧಿಕೃತವಾದ ವೆಬ್‌ಸೈಟ್, ನಕ್ಷೆ ರೂಪುಗೊಳಿಸಲಾಗುತ್ತಿದೆ. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಸಿ ಸ್ಥಳಗಳ ಮಾಹಿತಿ ಫಲಕಗಳನ್ನು ಅಳವಡಿಸಲು ಚರ್ಚಿಸಲಾಗುತ್ತಿದೆ ಎಂದರು.

ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಲ್ಲಿ ಹೋಂ ಸ್ಟೇಗಾಗಿ ಸಲ್ಲಿಕೆಯಾಗಿದ್ದ ಅರ್ಜಿಗಳ ಬಗ್ಗೆ ಚರ್ಚಿಸಲಾಯಿತು. ತಾಲ್ಲೂಕುವಾರು ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ, ನಿರ್ಮಿತಿ ಕೇಂದ್ರ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಇತರರಿದ್ದರು.